ಅಯ್ಯೋ ಶಿವನೇ! ನನ್ನನ್ಯಾಕ್ರೀ ಪಕ್ಷದಿಂದ ತೆಗೆದುಹಾಕಿದ್ರಿ?
ಬೆಳಗಾವಿಯ ಸುವರ್ಣ ವಿಧಾನಸೌಧದ ಮೊಗಸಾಲೆಯಲ್ಲಿ ಎದುರಾದ 'ಕನ್ನಡಒನ್ಇಂಡಿಯಾ' ಸುದ್ದಿಜಾಲದ ಪ್ರಧಾನ ಬಾತ್ಮಿದಾರನನ್ನು ತಡೆಹಿಡಿದು ಪುಟ್ಟಸ್ವಾಮಿ ಈ ಪ್ರಶ್ನೆ ಕೇಳಿ, ಅಲವತ್ತುಕೊಂಡಿದ್ದಾರೆ.
'ಅಲ್ಲ ಸಾರ್, ನಾನು ಸಹಕಾರ ಸಚಿವ. ಅಧಿವೇಶನ ನಡೆಯುತ್ತಿದೆ. ಸದನದಲ್ಲಿ ನನ್ನ ಇಲಾಖೆಗೆ ಸಂಬಂಧಪಟ್ಟ ಪ್ರಶ್ನೆಗಳಿಗೆ ಉತ್ತರಿಸಬೇಕು. ಅದಕ್ಕೆ ನಾನೂ ಸಿದ್ಧನಾಗಿ ಬಂದಿದ್ದೇನೆ. ನೋಡಿ ಈ ಫೈಲುಗಳನ್ನೇ ನೋಡಿ. ಇದರಲ್ಲಿ ಇಲಾಖೆಗೆ ಸಂಬಂಧಪಟ್ಟ ಉತ್ತರಗಳು ಇವೆ' ಎಂದು ಬಗಲಲ್ಲಿದ್ದ ಕಡತಗಳನ್ನು ಕೈಗಿಡುತ್ತಾ ಪುಟ್ಟಸ್ವಾಮಿಯವರು ನಮ್ಮ ಬಾತ್ಮಿದಾರರನ್ನು ಕೇಳಿದ್ದಾರೆ.
'ಅಲ್ಲ ಸಾರ್, ಇಡೀ ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ಇಂತಹ ಸನ್ನಿವೇಶ ನಡೆದಿಲ್ಲ. ಸದನ ನಡೀತಿರುವಾಗ, ಇಲಾಖೆಯ ಫೈಲುಗಳು ನನ್ನ ಕೈಯಲ್ಲಿರುವಾಗ, ನನ್ನನ್ನು ಸಸ್ಪೆಂಡ್ ಮಾಡ್ಬಿಟ್ಟಿದ್ದಾರಲ್ರೀ...ಸದಸ್ಯರ ಪ್ರಶ್ನೆಗಳಿಗೆ ಈಗ ಯಾರು ಉತ್ತರ ಕೊಡ್ತಾರೆ? ಕೇಳಿದ್ರೇ ನಾನೇ ರಾಜೀನಾಮೆ ನೀಡ್ತಿದ್ದೆ. ಅದ್ಯಾವ ಮಹಾ. ನಾನು ಯಾವತ್ತೂ ಅಧಿಕಾರಕ್ಕೆ ಆಸೆಪಟ್ಟವನಲ್ಲ'
'ನೋಡಿ ಸಾರ್. ನಾನು- ಯಡಿಯೂರಪ್ಪನವರು ರಾಜಕೀಯ ಹೊರತಾಗಿ ಅಪ್ಪಟ/ಗಾಢ ಸ್ನೇಹಿತರು. ರಾಜಕೀಯವಾಗಿ ನನ್ನ ಹಿಂದೆ ಹತ್ತಿಪ್ಪತ್ತು ಮಂದಿಯೂ ಇರುವುದಿಲ್ಲ. ಅಂಥಾದ್ದರಲ್ಲಿ ನಾನೆಲ್ಲಿಯ ಪಕ್ಷ ವಿರೋಧಿ ಚಟುವಟಿಕೆ ನಡೆಸಲಿ. ಒಟ್ನಲ್ಲಿ, ಟಿವಿ ಚಾನೆಲ್ಲಿನಲ್ಲಿ ಅದೇನೋ ನೀವು ಹೇಳಿದರಲ್ಲಾ Test Firing ಅಂತ ಹಾಗೆ ನನ್ನತ್ತ ಗುಂಡು ಹಾರಿಸಿಬಿಟ್ರು'
ಇದನ್ನೇ ಪ್ರಶ್ನಿಸಿ ಮುಖ್ಯಮಂತ್ರಿ ಶೆಟ್ಟರ್ ಮತ್ತು ಸ್ಪೀಕರ್ ಗೆ ಪತ್ರ ಬರೆಯುತ್ತಿದ್ದೇನೆ. ಫೈಲುಗಳಂತೂ ಇನ್ನೂ ನನ್ನ ಕೈಯಲ್ಲೇ ಇವೆ ನೋಡಿ' ಎಂದು ಖಿನ್ನವದನರಾಗಿದ್ದ ಪುಟ್ಟಸ್ವಾಮಿ ಪ್ರಶ್ನಿಸುತ್ತಿದ್ದಾರೆ. ಉತ್ತರ....?