ಇಂಧನ ಸಚಿವೆ ಶೋಭಾ ಕೂಗಿಗೆ ಸಿಕ್ತು ಬೆಲೆ
ಸಚಿವ ನಾರಾಯಣ ಸ್ವಾಮಿ ಅವರ ಉತ್ತರವನ್ನು ನಂಬಿಕೊಂಡರೆ, ಸಚಿವೆ ಶೋಭಾ ಅವರ ಶ್ರಮ ಸಾರ್ಥಕ ಎನ್ನಬಹುದು. ಅದರೆ, ಕೊನೆಗಳಿಗೆಯಲ್ಲಿ ವಿದ್ಯುತ್ ಹಂಚಿಕೆಯಲ್ಲಿ ವ್ಯತ್ಯಯವಾಗುವ ಲಕ್ಷಣಗಳು ಮಾತ್ರ ದಟ್ಟವಾಗಿದೆ.
ತಮಿಳುನಾಡಿನ ಕೂಡುಂಕುಳಂ ಪರಮಾಣು ಸ್ಥಾವರದಲ್ಲಿ ಉತ್ಪಾದನೆಯಾಗಲಿರುವ 1000 ಮೆ.ವಾ. ವಿದ್ಯುತ್ನಲ್ಲಿ 465 ಮೆ.ವ್ಯಾ. ವಿದ್ಯುತ್ತನ್ನು ತಮಿಳುನಾಡಿಗೆ ನೀಡಲಾಗುತ್ತೆ. ಉಳಿದ ವಿದ್ಯುತ್ತನ್ನು ಕರ್ನಾಟಕ, ಪುದುಚೇರಿ ಮತ್ತು ಕೇರಳ ರಾಜ್ಯಗಳಿಗೆ ಹಂಚಲಾಗುವುದು ಎಂದು ಪ್ರಧಾನಿ ಸಚಿವಾಲಯದ ರಾಜ್ಯ ಸಚಿವ ವಿ.ನಾರಾಯಣಸ್ವಾಮಿ ಅವರು ಹೇಳಿದ್ದಾರೆ.
KKNPP ಸ್ಥಾವರದಲ್ಲಿ ಉತ್ಪಾದನೆ ಆಗಲಿರುವ ಮೊದಲ ಹಂತದ ಸಂಪೂರ್ಣ ವಿದ್ಯುತ್ತನ್ನು ತನಗೇ ನೀಡುವಂತೆ ತಮಿಳುನಾಡು ಒತ್ತಾಯಿಸುತ್ತಿದೆ. ಆದರೆ, ಪೂರ್ವನಿಗದಿ ಮಾಡಿರುವ ಪ್ರಕಾರ ತಮಿಳುನಾಡು, ಕರ್ನಾಟಕ, ಪುದುಚೇರಿ ಮತ್ತು ಕೇರಳ ರಾಜ್ಯಗಳ ನಡುವೆ ಇದು ಹಂಚಿಕೆ ಆಗಬೇಕಿದೆ. ತಮಿಳುನಾಡು ಸರ್ಕಾರ 765 ಮೆ.ವ್ಯಾ ವಿದ್ಯುತ್ ಬೇಡಿಕೆಯನ್ನು ಒಡ್ಡಿದೆ.
ಅದರೆ, ತಮಿಳುನಾಡಿಗೆ ಯೂನಿಟ್ 1 ರಿಂದ 465 ಮೆ.ವ್ಯಾ ಮಾತ್ರ ನೀಡಲಾಗುತ್ತೆ. ಕೇರಳ, ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳಿಗೆ ತಲಾ 235 ಮೆ.ವ್ಯಾ ಸಿಗಲಿದೆ. ಉಳಿದ 300 ಮೆ.ವ್ಯಾ ವಿದ್ಯುತ್ ಕೇಂದ್ರ ಗ್ರಿಡ್ ಸೇರಲಿದೆ ಎಂದರು.
ಆದರೆ, ಕೇಂದ್ರ ಗ್ರಿಡ್ ಸೇರುವ ವಿದ್ಯುತ್ ಅನ್ನು ಯಾರಿಗೆ ಹಂಚಿಕೆ ಮಾಡಬೇಕು ಎಂಬುದನ್ನು ಪ್ರಧಾನಮಂತ್ರಿ ನಿರ್ಧರಿಸಲಿದ್ದಾರೆ. ತಮಿಳುನಾಡಿನ ಒತ್ತಡಕ್ಕೆ ಮಣಿದರೆ, 465+ 365= 765 ಮೆ.ವ್ಯಾ ಸಿಗುವುದು ಗ್ಯಾರಂಟಿ.
ಎಲ್ಲವೂ ನಮಗೆ ಕೊಡಿ: ತಮಿಳುನಾಡು ಕಾಂಗ್ರೆಸ್ ಸಮಿತಿ (ಟಿಎನ್ ಸಿಸಿ) ಅಧ್ಯಕ್ಷ ಬಿಎಸ್ ಜ್ಞಾನದೇಶಿಕನ್ ಅವರು ಪ್ರಧಾನಿ ಬಳಿಗೆ ನಿಯೋಗ ಕೊಂಡೊಯ್ದು ಕೂಡಂಕುಳಂನಿಂದ ಉತ್ಪಾದನೆಯಾಗುವ 1300 ಮೆ.ವ್ಯಾ ಪೈಕಿ 1000 ಮೆ.ವ್ಯಾ ತಮಿಳುನಾಡಿಗೆ ನೀಡುವಂತೆ ಆಗ್ರಹಿಸಲು ಸಜ್ಜಾಗಿದ್ದಾರೆ.
ನಿಯಮದ ಪ್ರಕಾರ ವಿದ್ಯುತ್ ಸ್ಥಾವರ ಇರುವ ರಾಜ್ಯಕ್ಕೆ ಉತ್ಪಾದನೆಯ ಶೇ 50 ರಷ್ಟು ಉತ್ಪನ್ನ ಸೇರಲಿದ್ದು, ಉಳಿದದ್ದು ಬೇಡಿಕೆ ಆಧಾರದ ಮೇಲೆ ಕೇಂದ್ರ ಸರ್ಕಾರ ಹಂಚಿಕೆ ಮಾಡಲಿದೆ. ಕೂಡಂಕುಳಂ ವಿದ್ಯುತ್ ಸ್ಥಾವರದಿಂದ 1,300ಮೆ.ವ್ಯಾ ಉತ್ಪಾದನೆಯಾಗುತ್ತಿದ್ದು, ಕರ್ನಾಟಕ 220 ಮೆ.ವ್ಯಾ ಹಾಗೂ ಕೇರಳ 133 ಮೆ.ವ್ಯಾ ವಿದ್ಯುತ್ ಬೇಡಿಕೆ ಇಟ್ಟಿದೆ.
ರಾಜ್ಯಕ್ಕೆ 235 ಮೆ.ವ್ಯಾ ಸಿಗುವ ಭರವಸೆ ಇದೆಯಾದರೂ ತಮಿಳುನಾಡಿನ ಒತ್ತಡಕ್ಕೆ ಮಣಿದು ಸಂಪೂರ್ಣ ವಿದ್ಯುತ್ ತಮಿಳುನಾಡಿಗೆ ನೀಡುವಂತೆ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಆದೇಶಿಸಿದರೆ, ಕರ್ನಾಟಕದಲ್ಲಿ ಮತ್ತೊಮ್ಮೆ ಕಗ್ಗತ್ತಲೆಯ ದಿನಗಳು ಎದುರಾಗಲಿದೆ.
ಈಗ ಇಂಧನ ಸಚಿವೆ ಶೋಭಾ ಕರಂದ್ಲಾಜೆ ಅವರ ಕೂಗಿಗೆ ಸಿಕ್ಕಿರುವ ಬೆಲೆ ಆಗ ಬೆಲೆ ಕಳೆದುಕೊಳ್ಳುತ್ತದೆ. ಸಚಿವೆ ಶೋಭಾ ಅವರು ನುಡಿದಂತೆ ನಡೆದು, ಕೈಗಾ ಸ್ಥಾವರದ ವಿದ್ಯುತ್ ಅನ್ನು ಕರ್ನಾಟಕಕ್ಕೆ ಮಾತ್ರ ಬಳಸಿಕೊಳ್ಳುವ ದಿಟ್ಟ ಹೆಜ್ಜೆ ಇಡುತ್ತಾರಾ? ಕಾದು ನೋಡಬೇಕಿದೆ.