ಬೆಳಗಾವಿ ಗಡಿ ವಿವಾದ, 'ಮಹಾ' ಸರ್ಕಾರ ತರ್ಲೆ
ಡಿ.11 ರಂದು ಸುಪ್ರೀಂ ಕೋರ್ಟ್ನಲ್ಲಿ ನಡೆಯಲಿರುವ ಗಡಿ ವಿವಾದ ಪ್ರಕರಣದ ವಿಚಾರಣೆಯನ್ನು ಮುಂದೂಡಲು ಮಹಾರಾಷ್ಟ್ರ ಸರ್ಕಾರ ಮತ್ತೆ ತಂತ್ರಗಾರಿಕೆ ಅನುಸರಿಸುತ್ತಿದೆ. ವಿಚಾರಣೆಯನ್ನು ಮತ್ತೊಮ್ಮೆ ಮುಂದೂಡಲು ಮುಂದಾಗಿದ್ದರೆ, ಕರ್ನಾಟಕ ಸರ್ಕಾರ ವಿಧಾನಮಂಡಲ ಕಲಾಪ ನಡೆಸುವುದರಲ್ಲಿ ನಿರತವಾಗಿದೆ.
ಮಂಗಳವಾರ ವಿಚಾರಣೆ ಆರಂಭವಾಗುವ ಮುನ್ನನೇ ಮಹಾರಾಷ್ಟ್ರ ಸರ್ಕಾರ ಇನ್ನೊಂದು ಮಧ್ಯಂತರ ಅರ್ಜಿಯನ್ನು ದಾಖಲಿಸಿದೆ.ಇಲ್ಲಿವರೆಗಿನ ಲೆಕ್ಕದಂತೆ ಇದು 8ನೇ ಮಧ್ಯಂತರ ಅರ್ಜಿಯಾಗಿದೆ.
ಈ ಅರ್ಜಿಯ ಮೂಲಕ ಪ್ರತಿವಾದಿ (ಕರ್ನಾಟಕ ಸರ್ಕಾರ) ಕೆಲವು ದಾಖಲೆಗಳನ್ನು ಒದಗಿಸಲು ಕೇಳಲಾಗಿದೆ. ದಾವೆ ಹಾಕಿದ ವರ್ಷದಿಂದ (2004) ಇಲ್ಲಿಯವರೆಗೆ (2012) ಒಟ್ಟು 7 ಮಧ್ಯಂತರ ಅರ್ಜಿಗಳನ್ನು ಮಹಾರಾಷ್ಟ್ರ ದಾಖಲಿಸಿದ್ದು ಇದು ಎಂಟನೇ ಮಧ್ಯಂತರ ಅರ್ಜಿಯಾಗಿದೆ.
ಮಧ್ಯಂತರ ಅರ್ಜಿ ದಾಖಲಾಗಿರುವುದನ್ನು ಖಚಿತಪಡಿಸಿರುವ ಕರ್ನಾಟಕ-ಮಹಾರಾಷ್ಟ್ರ ವಿಶೇಷ ಗಡಿ ಸಲಹಾ ಸಮಿತಿ ಸದಸ್ಯ ಎಸ್.ವಿ.ಪಾಟೀಲ ಅವರು ಅರ್ಜಿಯ ಸಂಪೂರ್ಣ ವಿವರ ಲಭ್ಯವಾಗಿಲ್ಲ.
ಆದರೆ ಕೋರ್ಟ್ನಲ್ಲಿ ಕರ್ನಾಟಕದ ವಾದ ಪೂರ್ಣ ಸಬಲವಾಗಿದೆ. ಮಹಾರಾಷ್ಟ್ರ ತನ್ನ ಸಮರ್ಥನೆಗೆ 70 ಸಾವಿರ ಪುಟಗಳಷ್ಟು ದಾಖಲೆಗಳನ್ನು ಕೋರ್ಟಿಗೆ ಸಲ್ಲಿಸಿದೆ ಎಂದು ಆ ರಾಜ್ಯದ ಪರ ನಾಯಕರು ಹೇಳಿಕೊಂಡಿದ್ದಾರೆ.
ಇಷ್ಟು ದಾಖಲೆ ಇದ್ದರೂ ಈಗ ಹೆಚ್ಚಿನ ದಾಖಲೆಗಳ ಅವಶ್ಯಕತೆಯಾದರೂ ಏಕೆ ಬೇಕು ಎನ್ನುವುದು ಪ್ರಶ್ನೆ. ಇದು ಕೇವಲ ಕಾಲಹರಣ ಮಾಡುವ ತಂತ್ರವಾಗಿರಬಹುದು.
ಈ ಮಧ್ಯಂತರ ಅರ್ಜಿಯ ಕಾರಣ ನಿರ್ಣಯಾಧೀನ ಪ್ರಶ್ನೆಗಳ ನಿಶ್ಚಯಿಸುವಿಕೆಯನ್ನು ಮುಂದೂಡುವ ಸಾಧ್ಯತೆ ಇದೆ. ದಾವೆಯಲ್ಲಿ ಹುರುಳಿಲ್ಲವೆಂಬುದು ಗಾಢವಾಗುತ್ತಿರುವ ತಿಳಿವಳಿಕೆ ಪ್ರಕರಣದ ಇತ್ಯರ್ಥವನ್ನು ಹೇಗಾದರೂ ಮಾಡಿ ಮುಂದೆ ಹಾಕುತ್ತಾ ಹೋಗಲು ಸಂಚನ್ನು ಮಹಾರಾಷ್ಟ್ರ ರೂಪಿಸುತ್ತಿದೆ.
ಪ್ರಕರಣವನ್ನು ಜೀವಂತವಾಗಿಟ್ಟು ಸಾಮಾನ್ಯ ಅಮಾಯಕ ಮರಾಠಿಗರಿಗೆ ಈ ವಿಷಯದ ತಪ್ಪು ಕಲ್ಪನೆ ಕೊಟ್ಟು ರಾಜಕೀಯ ಸ್ವಾರ್ಥ ಸಾಧಿಸುವ ಹುನ್ನಾರ ಇದಾಗಿದೆ ಎಂದಿದ್ದಾರೆ. ಆದರೆ, ಅರ್ಜಿ ಸ್ವೀಕೃತವಾಗುವ ಎಲ್ಲಾ ಲಕ್ಷಣಗಳು ಇದ್ದು, ಮತ್ತೊಮ್ಮೆ ಗಡಿ ವಿವಾದ ವಿಚಾರಣೆಯಲ್ಲಿ ಕರ್ನಾಟಕ ಕೊಂಚ ಹಿನ್ನೆಡೆ ಅನುಭವಿಸಲಿದೆ.
ಮರಾಠಿ ನಾಯಕ ಬಾಳಾ ಠಾಕ್ರೆ ನಿಧನ ನಂತರ ಬೆಳಗಾವಿ ಗಡಿ ವಿವಾದ ತಣ್ಣಗಾಗಿತ್ತು. ಆದರೆ, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಇತ್ತೀಚೆಗೆ ಮಾತನಾಡಿ, ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದದಲ್ಲಿ ಮರಾಠಿಗರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಈ ಬಗ್ಗೆ ಸೂಕ್ತ ಕಾನೂನು ಹೋರಾಟ ನಡೆಸಲು ಸರ್ಕಾರಕ್ಕೆ ಸಹಕಾರ ನೀಡುವುದಾಗಿ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.