ಶ್ವೇತಾಗೆ ಛಂದ 'ಮುಖಪುಟ ವಿನ್ಯಾಸ' ಬಹುಮಾನ
ಕಥೆಗಾರ ವಸುಧೇಂದ್ರ ಅವರ ಸುಲಲಿತ ಪ್ರಬಂಧಗಳ ಸಂಕಲನ 'ವರ್ಣಮಯ' ಪುಸ್ತಕಕ್ಕೆ ಮುಖಪುಟ ವಿನ್ಯಾಸ ರಚಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಚುಕ್ಕುಬುಕ್ಕು ಕನ್ನಡ ಪೋರ್ಟಲ್ ಈ ಸ್ಪರ್ಧೆಗೆ ಛಂದ ಪುಸ್ತಕ ಪ್ರಕಾಶನದೊಡನೆ ಕೈ ಜೋಡಿಸಿತ್ತು.
ಡಿಸೆಂಬರ್ 16ರಂದು ಬಿಡುಗಡೆಯಾಗಲಿರುವ ವಸುಧೇಂದ್ರರ 'ವರ್ಣಮಯ' ಎಂಬ ಸುಲಲಿತ ಪ್ರಬಂಧ ಸಂಕಲನಕ್ಕೆ ಈ ಮುಖಪುಟವನ್ನು ಬಳಸಿಕೊಳ್ಳಲಾಗುವುದು. ಶ್ವೇತಾರವರಿಗೆ 5,000 ರುಪಾಯಿ ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ನೀಡಲಾಗುವುದು.
ಉತ್ತರ ಕನ್ನಡ ಜಿಲ್ಲೆಯ ಶ್ವೇತಾ, ಬೆಂಗಳೂರಿನ ಚಿತ್ರಕಲಾ ಪರಿಷತ್ತಿನ ಎಂಎಫ್ಎ ಅನ್ವಯಕಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕ್ಯಾಮೆರಾ ಹೊತ್ತು ಸುತ್ತುವುದನ್ನು ತುಂಬಾ ಇಷ್ಟಪಡುವ ಶ್ವೇತಾ ಆಡುಕಳ ಅವರು ಪದವಿ ಮುಗಿಸಿದ್ದು ಮೈಸೂರಿನ ಚಾಮರಾಜೇಂದ್ರ ದೃಶ್ಯಕಲಾ ಅಕಾಡೆಮಿಯಲ್ಲಿ.
150ಕ್ಕೂ ಹೆಚ್ಚು ವಿನ್ಯಾಸಗಳ ತೀವ್ರ ಪೈಪೋಟಿಯ ಈ ಛಂದ ಮುಖಪುಟ ವಿನ್ಯಾಸ ಸ್ಪರ್ಧೆಯ ತೀರ್ಪು ನೀಡಿರುವುದು ನಾಡಿನ ಖ್ಯಾತ ಕಲಾವಿದ ಪ.ಸ. ಕುಮಾರ್ರವರು. ವಸುಧೇಂದ್ರ ಅವರ ಹೊಸ ಪುಸ್ತಕ ವರ್ಣಮಯ ಡಿ.16ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗುತ್ತಿದೆ. ಅಂದೇ ಶ್ವೇತಾ ಅವರಿಗೆ ಬಹುಮಾನವನ್ನೂ ವಿತರಿಸಲಾಗುವುದು.