ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈತರ ಸಮಾಧಿ ಮೇಲೆ ಕೆಜೆಪಿ ಸ್ಥಾಪನೆ

By Mahesh
|
Google Oneindia Kannada News

BSRC condemns KJP Launch
ಬೆಳಗಾವಿ/ ಚಿತ್ರದುರ್ಗ, ಡಿ.10: ಹಾವೇರಿಯಲ್ಲಿ ಗೋಲಿಬಾರ್ ನಡೆಸಿ ರೈತರ ರಕ್ತ ಹರಿಸಿದ ಕಲೆ ಇನ್ನೂ ಹಸಿರಾಗಿದೆ. ರೈತರ ಸಮಾಧಿ ಮೇಲೆ ಯಡಿಯೂರಪ್ಪ ಅವರು ಕೆಜೆಪಿ ಸ್ಥಾಪನೆ ಮಾಡುತ್ತಿರುವುದು ದುರಂತ ಎಂದು ಬಿಎಸ್ ಆರ್ ಕಾಂಗ್ರೆಸ್ ಮುಖ್ಯಸ್ಥ ಶ್ರೀರಾಮುಲು ಅವರು ಬೆಳಗಾವಿಯಲ್ಲಿ ಹೇಳಿದ್ದಾರೆ.

ಯಡಿಯೂರಪ್ಪ ಅವರು ನಾನು ರೈತನ ಮಗ, ಯಾವಾಗಲೂ ರೈತರ ಪರ ಚಿಂತಿಸುತ್ತೇನೆ ಎನ್ನುತ್ತಾರೆ ಆದರೆ, ಅವರು ಮುಖ್ಯಮಂತ್ರಿಯಾಗಿದ್ದಾಗ ನಡೆದ ಗೋಲಿಬಾರ್ ಇನ್ನೂ ಜನರ ಮನಸ್ಸಿನಿಂದ ಅಳಿಸಿಲ್ಲ.

ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ಯಡಿಯೂರಪ್ಪ ಗೋಲಿಬಾರ್ ನಲ್ಲಿ ಸತ್ತವರ ಸಮಾಧಿಯ ಮೇಲೆ ಪಕ್ಷ ಕಟ್ಟುತ್ತಿದ್ದಾರೆ. ಇವರಿಗೆ ಖಂಡಿತ ಒಳ್ಳೆಯದಾಗುವುದಿಲ್ಲ ಎಂದು ಶ್ರೀರಾಮುಲು ಬೇಸರದಿಂದ ಹೇಳಿದರು.

ಬಿಜೆಪಿ ನಿರ್ನಾಮ: ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದರೆ ರಾಜಕೀಯದಿಂದ ನಿವೃತ್ತಿಯಾಗುವೆ ಎಂದು ಶಾಸಕ ಜಿ.ಸೋಮಶೇಖರ ರೆಡ್ಡಿ ಸವಾಲು ಹಾಕಿದರು.

ಚಿತ್ರದುರ್ಗ ನಗರದ ತರಾಸು ರಂಗಮಂದಿರದಲ್ಲಿ ನಡೆದ ಅಭಿಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ಕಳೆದ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಬಿ.ಎಸ್.ಯಡಿಯೂರಪ್ಪನವರು ಎಷ್ಟು ಕಾರಣರೋ, ನನ್ನ ಸಹೋದರರು ಹಾಗೂ ಮಾಜಿ ಸಚಿವ ಶ್ರೀರಾಮುಲು ಅಷ್ಟೇ ಕಾರಣರಾಗಿದ್ದಾರೆ.

ಅಧಿಕಾರಕ್ಕೆ ಬರಲು ನಮ್ಮನ್ನು ಚೆನ್ನಾಗಿ ಬಳಸಿಕೊಂಡ ಬಿಜೆಪಿಯವರು ಅನಂತರ ಇಲ್ಲ ಸಲ್ಲದ ಆರೋಪಗಳನ್ನು ಹೊರಿಸಿ, ಕುತಂತ್ರದಿಂದ ನಮ್ಮನ್ನು ಜೈಲಿಗೆ ಕಳುಹಿಸಿದ್ದಾರೆ ಎಂದು ರೆಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ಜನಾರ್ದನ ರೆಡ್ಡಿಯವರ ಮೇಲಿನ ಆರೋಪಗಳನ್ನು ಸಮರ್ಥಿಸಿಕೊಂಡ ಸೋಮಶೇಖರ ರೆಡ್ಡಿ, 'ಜನಾರ್ದನ ರೆಡ್ಡಿಯವರು ಯಾರೂ ಮಾಡದ ತಪ್ಪನ್ನು ಮಾಡಿಲ್ಲ. ತಮ್ಮ ಮೇಲೆ ದುರುದ್ದೇಶದಿಂದ ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ ಎಲ್ಲ ಪಕ್ಷಗಳ ಪಾಲೂ ಸಹ ಇದೆ' ಎಂದು ಆರೋಪಿಸಿದರು.

ಜನಾರ್ದನ ರೆಡ್ಡಿ ಅವರನ್ನು ಬೇಕೆಂತಲೇ ಜೈಲಿನಿಂದ ಹೊರ ಬರದಂತೆ ನೋಡಿಕೊಳ್ಳಲಾಗಿದೆ. ಅವರು ಜೈಲಿನಲ್ಲಿದ್ದರೂ ಮುಂಬರುವ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಇದು ನಮ್ಮ ಅಪೇಕ್ಷೆಯಲ್ಲ. ಜನರ ಆಗ್ರಹ ಎಂದು ಸೋಮಶೇಖರ ರೆಡ್ಡಿ ಹೇಳಿದರು.

ನಾನು ಕೆಎಂಎಫ್ ನಲ್ಲಿ ಏನಾದರೂ ಅವ್ಯವಹಾರ ಮಾಡಿದ್ದು ಸಾಬೀತಾದರೆ ಕೂಡಲೇ ರಾಜೀನಾಮೆ ನೀಡುತ್ತೇನೆ. ಬಿಜೆ ಪುಟ್ಟಸ್ವಾಮಿ ಅವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ ನಾನು ಇದಕ್ಕೆಲ್ಲ ಜಗ್ಗುವುದಿಲ್ಲ ಎಂದರು.

English summary
BSR Congress chief BS Sriramulu condemned BS Yeddyurappa for launching new regional party Karantaka Janata Paksha on farmers burial land.Haveri is where then Yeddyurappa government ordered Golibar against farmers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X