ಕಟ್ಟಾ ಆರೆಸ್ಸೆಸ್ಸಿಗ ಕಾಗೇರಿ ಹಾವೇರಿಗೆ ಬಂದಿದ್ಯಾಕೆ?
ಅಂತಹುದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹವ್ಯಕ ಬ್ರಾಹ್ಮಣ, ಶಿರಸಿ ಶಾಸಕ, ವಿದ್ಯಾರ್ಥಿಯಾಗಿದ್ದಾಗಲೇ ಕಟ್ಟಾ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾಗಿರುವ ಉನ್ನತ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹಾವೇರಿಯಲ್ಲಿ ಶನಿವಾರ ಬೆಳಿಗ್ಗೆ ಕಾಣಿಸಿಕೊಂಡು ಅನೇಕರು ಹುಬ್ಬೇರಿಸುವಂತೆ ಮಾಡಿದ್ದಾರೆ.
ಆದರೆ, ಊಹಾಪೋಹಗಳಿಗೆ ನೀರು ಹಾಕುವ ಮುನ್ನ, ತಾವು ಅಲ್ಲಿ ಬಂದಿದ್ಯಾಕೆ ಎಂದು ಅವರು ಒನ್ಇಂಡಿಯಾ ಕನ್ನಡಕ್ಕೆ ಸ್ಪಷ್ಟಪಡಿಸಿದರು. ತಮಗೆ ಕೆಜೆಪಿಯಿಂದ ಯಾವುದೇ ಆಹ್ವಾನ ಬಂದಿಲ್ಲ. ತಾವು ಹಾವೇರಿಗೆ ಬಂದಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಬಿ. ಕೊಡ್ಲಿ ಅವರ ಮಗಳ ಮದುವೆಗೆ ಎಂದು ಅವರು ಹೇಳಿದರು.
ಬಿಜೆಪಿ ಸರಕಾರ ಕೊನೆಯ ಹಂತದಲ್ಲಿ ಬಂದಿದ್ದರೂ ಜೂನ್ವರೆಗೆ ಸರಕಾರಕ್ಕೆ ಯಾವುದೇ ಧಕ್ಕೆಯಿಲ್ಲ. ಅನೇಕ ವರ್ಷಗಳಿಂದ ಬಲವಾಗಿ ಬೆಳೆಸಿದಂತಹ ಪಕ್ಷ ಬಿಜೆಪಿ. ಪಕ್ಷ ಇಂದು ಒಡೆದಿದ್ದರೂ, ಅದನ್ನು ಮತ್ತಷ್ಟು ಬಲಪಡಿಸುವುದು ಮತ್ತು ಮತ್ತೆ ಅಧಿಕಾರಕ್ಕೆ ತರುವುದು ನಮ್ಮ ಕಣ್ಣಮುಂದಿದೆ. ಅದು ನಮ್ಮ ಜವಾಬ್ದಾರಿ ಕೂಡ. ಅದನ್ನು ಸಮರ್ಥವಾಗಿ ನಿಭಾಯಿಸುತ್ತೇವೆ ಎಂದು ಅವರು ಆಶಾಭಾವನೆ ವ್ಯಕ್ತಪಡಿಸಿದರು.
ಯಾರೇ ಪಕ್ಷ ಬಿಟ್ಟು ತೊಲಗಿದರೂ ಬಿಜೆಗೆ ಯಾವುದೇ ಧಕ್ಕೆ ತರಲು ಸಾಧ್ಯವಿಲ್ಲ. ಯಾರು ಎಷ್ಟೇ ತಿಪ್ಪರಲಾಗ ಹಾಕಿದರೂ ಗಟ್ಟಿಯಾಗಿ ಬೇರೂರಿರುವ ಪಕ್ಷವನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಪಕ್ಷದಲ್ಲಿ ಹೊಸಗಾಳಿ ಬೀಸುತ್ತಿದೆ, ಪಕ್ಷವನ್ನು ಬಲಪಡಿಸಲು ಹೊಸ ತಂತ್ರಗಾರಿಕೆ ರೂಪಿಸುತ್ತಿದ್ದೇವೆ. ರಾಜ್ಯ ಬಿಜೆಪಿಯಲ್ಲಿ ಉದ್ಭವವಾಗಿರುವ ಪರಿಸ್ಥಿತಿಯ ಕುರಿತು ರಾಜ್ಯದ ನಾಯಕರು ಮತ್ತು ರಾಷ್ಟ್ರದ ಹಿರಿಯ ನಾಯಕರು ಚರ್ಚಿಸುತ್ತಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದು ಕಾಗೇರಿ ವಿಶ್ವಾಸ ವ್ಯಕ್ತಪಡಿಸಿದರು.