ತಾರಾ ಸೇರಿ ನಿಗಮ ಮಂಡಳಿ ಅಧ್ಯಕ್ಷರಿಗೆ ಗೇಟ್ ಪಾಸ್?
ಡಿ.9ಕ್ಕೆ ಹಾವೇರಿಯಲ್ಲಿ ಕರ್ನಾಟಕ ಜನತಾ ಪಕ್ಷ ಉದಯವಾಗುತ್ತಿದ್ದಂತೆ, ಸದಾನಂದ ಗೌಡರಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟಲು ಬಿಜೆಪಿ ವರಿಷ್ಠರು ಸಿದ್ಧರಾಗಿದ್ದಾರೆ. ಕೆಜೆಪಿ ಸಮಾವೇಶಕ್ಕೆ ಹೋಗುವ ಬಿಜೆಪಿ ಶಾಸಕರು, ಸಚಿವರು, ನಿಗಮ ಮಂಡಲಿ ಅಧ್ಯಕ್ಷರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಬಿಜೆಪಿ ಹೇಳಿದೆ. ಈ ಬಗ್ಗೆ ಸದಾನಂದ ಗೌಡರು ಕೂಡಾ ಹೇಳಿಕೆ ನೀಡಿದ್ದಾರೆ.
ಆದರೆ, ಸದಾನಂದ ಗೌಡರ ಹೇಳಿಕೆ ಹಾಸ್ಯಾಸ್ಪದವಾಗಿದೆ. ಅವರ ಮಾತನ್ನು ಲೆಕ್ಕಕ್ಕೆ ಇಡುವುದಿಲ್ಲ ಎಂದು ಯಡಿಯೂರಪ್ಪ ಬೆಂಬಲಿತ ಎಂಎಲ್ ಸಿ ಎಂಡಿ ಲಕ್ಷ್ಮಿ ನಾರಾಯಣ ಹೇಳಿದ್ದಾರೆ.
ನಿಗಮ ಮಂಡಳಿ ಅಧ್ಯಕ್ಷರಿಗೆ ಕುತ್ತು?: ಈ ನಡುವೆ ಮಂತ್ರಿಗಿರಿ ತಪ್ಪಿದರೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಸಿಕ್ಕಿದ ತೃಪ್ತಿ ಹೊಂದಿದ್ದವರಿಗೆ ಈಗ ಬಿಜೆಪಿ ವರಿಷ್ಠರ ನಿರ್ಧಾರದಿಂದ ಭೀತಿ ಆವರಿಸಿದೆ.
ಬಿಜೆಪಿ ಸಿದ್ಧಾಂತಕ್ಕೆ ಬಲಿ ಕೊಟ್ಟು ಕೆಜೆಪಿಗೆ ಹೋಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಸರ್ಕಾರ ಬಿದ್ದರೂ ಚಿಂತೆಯಿಲ್ಲ ಎಂದು ದೆಹಲಿ ನಾಯಕರು ಜಗದೀಶ್ ಶೆಟ್ಟರ್ ಹಾಗೂ ಈಶ್ವರಪ್ಪ ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಸರಿ ಸುಮಾರು 30ಕ್ಕೂ ಅಧಿಕ ನಿಗಮ ಮಂಡಳಿ ಅಧ್ಯಕ್ಷರು ತಮ್ಮ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಲಭ್ಯ ಮಾಹಿತಿ ಪ್ರಕಾಅರ ಈ ಕೆಳಗೆ ಕಂಡವರ ಕುರ್ಚಿ ಅಲುಗಾಡುತ್ತಿದೆ.
ಶಾಸಕ ಬಿ.ಪಿ ಹರೀಶ್, ಎಂ.ಡಿ ಲಕ್ಷ್ಮಿ ನಾರಾಯಣ, ಚಿಕ್ಕನಗೌಡರ್, ರುದ್ರೇಶ್, ಮರಿಸ್ವಾಮಿ, ಅಶೋಕ್ ಕಾಟ್ವೆ, ರಾಮಚಂದ್ರ, ಶಂಕರ ಗೌಡ ಪಾಟೀಲ, ಎ.ಆರ್ ಕೃಷ್ಣಮೂರ್ತಿ, ಲಿಂಬಣ್ಣನವರ್, ತಾರಾ ಅನುರಾಧಾ, ವಿಜಯ್ ಕುಮಾರ್, ನಾರಾಯಣ ಸ್ವಾಮಿ, ಅಶ್ವಥ್ ಸೇರಿದಂತೆ 30 ಜನ ತಮ್ಮ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ನಡೆಸುವ ಮುಖಂಡರನ್ನು ಕಿತ್ತು ಹಾಕುವ ಅಧಿಕಾರವನ್ನು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹಾಗೂ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಅವರಿಗೆ ಹೈಕಮಾಂಡ್ ನೀಡಿದೆ.
ಒಂದು ವೇಳೆ 40-50 ಶಾಸಕರು ಕೆಜೆಪಿ ಸಮಾವೇಶಕ್ಕೆ ತೆರಳಿದರೆ ಸರ್ಕಾರ ಉಳಿಯುವುದು ಕಷ್ಟವಾಗಲಿದೆ. ಶಾಸಕರು ಬರಲಿ ನಾನು ನೋಡಿಕೊಳ್ಳುತ್ತೇನೆ ಎಂದು ಯಡಿಯೂರಪ್ಪ ಸವಾಲು ಹಾಕಿದ್ದಾರೆ. ಆದರೆ, ಕೆಜೆಪಿಗೆ ಬಹಿರಂಗವಾಗಿ ಬೆಂಬಲ ನೀಡಿ ಸಮಾವೇಶಕ್ಕೆ ಹೋಗಲು ಬಿಜೆಪಿಯಲ್ಲಿರುವ ಅನೇಕರಲ್ಲಿ ಹಿಂಜರಿಕೆ ಮುಂದುವರೆದಿದೆ.