ಇನ್ನೂ ನೀರು ಬಿಟ್ಟಿಲ್ಲ; ಏನಾಗುವುದೋ, ಏನೋ?
ಇನ್ನು, ನ್ಯಾಯಾಲಯದ ಆದೇಶವನ್ನು ಪಾಲಿಸದಿರುವುದಕ್ಕೆ ಸುಪ್ರೀಂಕೋರ್ಟ್ ಏನು ಮಾಡುವುದೋ ಎಂಬ ಆತಂಕವೂ ಮನೆ ಮಾಡಿದ್ದು, ಇಡೀ ಕರ್ನಾಟಕ ಮುಂದೇನಾಗುವುದೋ ಎಂದು ಕಾದುನೋಡುತ್ತಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಮಂಡ್ಯ ಜಿಲ್ಲೆಯ ಶಾಲಾ, ಕಾಲೇಜುಗಳು ಬಂದ್ ಆಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ ಎಂದು ಮಂಡ್ಯ ಎಸ್ ಪಿ ಕೌಶಲೇಂದ್ರಕುಮಾರ್ ಹೇಳಿದ್ದಾರೆ. ಆದರೂ ಬೆಂಗಳೂರು-ಮೈಸೂರು ಮಾರ್ಗದಲ್ಲಿ ಅಲ್ಲಲ್ಲಿ ರಸ್ತೆ ತಡೆಗಳು ನಡೆಯುತ್ತಿದ್ದು, ಜಯಲಲಿತಾ ಪ್ರತಿಕೃತಿ ದಹಿಸುತ್ತಿದ್ದಾರೆ. ಕೇಂದ್ರ ಸರಕಾರ ಮತ್ತು ಸುಪ್ರೀಂಕೋರ್ಟಿನ ಆದೇಶದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ, ಕಾವೇರಿ ಹಿತರಕ್ಷಣಾ ಸಮಿತಿ ಸದ್ಯಕ್ಕೆ ಸಂಯಮ ತೋರಿದ್ದು, ಸರಕಾರದ ನಿರ್ಧಾರವನ್ನು ಅನುಸರಿಸಿ ಮುಂದಿನ ಹೋರಾಟ ಹಾದಿ ಹಿಡಿಯಲು ನಿರ್ಧರಿಸಿದೆ. ಮಾದೇಗೌಡರು ಈ ಬಗ್ಗೆ ಮುಖ್ಯಮಂತ್ರಿ ಶೆಟ್ಟರ್ ಮತ್ತು ಇಂಜಿನಿಯರ್ ಅವರನ್ನು ಸಂಪರ್ಕಿಸಿದ್ದು, ಸುಪ್ರೀಂ ಆದೇಶ ಹೊರಬಿದ್ದು 24 ಗಂಟೆಯಾಗಿದ್ದರೂ ಇದುವರೆಗೂ ಒಂದು ತೊಟ್ಟು ನೀರು ಬಿಟ್ಟಿಲ್ಲ ಎಂಬ ಮಾಹಿತಿ ಒದಗಿಸಿದ್ದಾರೆ. ವಾಸ್ತವವಾಗಿ ಕೋರ್ಟ್ ಆದೇಶ ಪಾಲಿಸುವುದೇ ಆದರೆ ನಿನ್ನೆಯಿಂದಲೇ KRSನಿಂದ ನೀರು ಬಿಡಬೇಕಿತ್ತು.
ಈ ಮಧ್ಯೆ, ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ವಿಶೇಷ ಅಧಿವೇಶನ ಇಂದಿನಿಂದ ಕಾರ್ಯಾರಂಭಿಸಲಿದೆ. ಅಧಿವೇಶನದಲ್ಲೇ ನೀರು ಬಿಡುವ ಬಗ್ಗೆ ಸರ್ವಾನುಮತದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಕರ್ನಾಟಕಕ್ಕೆ ವ್ಯತಿರಿಕ್ತವಾಗಿ ಕೋರ್ಟ್ ಆದೇಶ ಹೊರಬೀಳುತ್ತಿದ್ದಂತೆ ಬೆಂಗಳೂರಿಗೆ ದಿಢೀರನೆ ದೌಡಾಯಿಸಿದ್ದ ಸಿಎಂ ಶೆಟ್ಟರ್ ಮತ್ತೆ ಬೆಳಗಾವಿ ತಲುಪಿಕೊಂಡಿದ್ದು, ಪ್ರಮುಖ ನಾಯಕರ ಜತೆ ಕಾವೇರಿದ ಮಾತುಕತೆ ನಡೆಸಿದ್ದಾರೆ.
ಈ ಮಧ್ಯೆ, ಕಾವೇರಿ ಹೋರಾಟಾರ್ಥವಾಗಿ ಮಂಡ್ಯ, ಮೈಸೂರು ಭಾಗಗಳಲ್ಲಿ ಅಲ್ಲಲ್ಲಿ ಬಂದ್ ನಡೆಯುತ್ತಿದೆ. ಆದರೆ ಸರಕಾರ ತನ್ನ ನಿರ್ಧಾರ ಪ್ರಕಟಿಸಿದ ಬಳಿಕ ಮುಂದಿನ ಹೋರಾಟದ ಹಾದಿ ಹಿಡಿಯುವುದಾಗಿ ಕಾವೇರಿ ರೈತರು ಹೇಳಿದ್ದಾರೆ. ಇನ್ನು ಮಾದೇಗೌಡರು ಸಿಎಂ ಶೆಟ್ಟರ್ ಅವರ ಭರವಸೆಯ ಬಳಿಕ ರೈತರ ಜತೆಗೂಡಿ KRSಗೆ ಮುತ್ತಿಗೆ ಹಾಕುವುದನ್ನು ಮುಂದೂಡಿದ್ದಾರೆ.
ಒಟ್ಟಿನಲ್ಲಿ, ಮೈಸೂರು ಮತ್ತು ಮಂಡ್ಯದಲ್ಲಿ ಮತ್ತೊಮ್ಮೆ ಕಾವೇರಿದ ವಾತಾವರಣ ನೆಲೆಸಿದ್ದು ತಮಿಳುನಾಡಿಗೆ ನೀರು ಬಿಡುವ ಸಂಬಂಧ ಸರಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಅವಲಂಬಿಸಿ ರೈತ ತೀರ್ಮಾನಗಳು ಹೊರಬೀಳಲಿವೆ.