ಬಿಜೆಪಿಗೆ ಸಚಿವ ಸಿ ಎಂ ಉದಾಸಿ ರಾಜೀನಾಮೆ !
ನನಗೆ ಬಂದಿದ್ದು ಖಚಿತ ಮಾಹಿತಿ. ಅವರು ಬಿಜೆಪಿ ತೊರೆದು ಯಡಿಯೂರಪ್ಪ ಪಕ್ಷ ಸೇರಲಿದ್ದಾರೆ. ಹಾವೇರಿಯಲ್ಲಿ ಡಿಸೆಂಬರ್ 9ರಂದು ನಡೆಯಲಿರುವ ಸಮಾವೇಶದ ಉಸ್ತುವಾರಿಯನ್ನು ಸಚಿವ ಉದಾಸಿ ವಹಿಸಿ ಕೊಳ್ಳಲಿದ್ದಾರೆಂದು ಹೊರಟ್ಟಿ ಹೊಸ ಬಾಂಬ್ ಸಿಡಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದ ನಡುವೆಯೇ ಉದಾಸಿ ಬಿಜೆಪಿಗೆ ವಿದಾಯ ಹೇಳಲಿದ್ದಾರೆ. ಹಾವೇರಿ ಸಮಾವೇಶಕ್ಕೆ ಲೋಕೋಪಯೋಗಿ ಇಲಾಖೆ ಪ್ರಾಯೋಜಕತ್ವ ವಹಿಸಿಕೊಂಡಿದೆಯೋ ಎನ್ನುವ ಅನುಮಾನ ನನ್ನನ್ನು ಕಾಡುತ್ತಿದೆ ಎಂದು ಹೊರಟ್ಟಿ ಹೇಳಿದ್ದಾರೆ.
ಯಡಿಯೂರಪ್ಪ ಆಪ್ತರು ಲೆಕ್ಕಕ್ಕೆ ಮಾತ್ರ ಬಿಜೆಪಿಯಲ್ಲಿದ್ದಾರೆ, ಅವರ ಮನಸ್ಸು ಕೆಜೆಪಿ ಮೇಲಿದೆ. ಹಾವೇರಿ ಸಮಾವೇಶದ ನಂತರ ಬಿಜೆಪಿಯಲ್ಲಿ ರಾಜೀನಾಮೆ ಪರ್ವ ಆರಂಭವಾಗಲಿದೆ ಎಂದು ಹೊರಟ್ಟಿ ಭವಿಷ್ಯ ನುಡಿದ್ದಾರೆ.
ಮೊದಲೇ ಭ್ರಷ್ಟಾಚಾರದ ಮೂಲಕ ಜನತೆಯಿಂದ ದೂರವಾಗಿರುವ ಬಿಜೆಪಿಗೆ ಯಡಿಯೂರಪ್ಪ ಪಕ್ಷ ತ್ಯಜಿಸಿದ್ದು ಭಾರೀ ಪೆಟ್ಟು ನೀಡಲಿದೆ ಎಂದು ಹೊರಟ್ಟಿ ಅಭಿಪ್ರಾಯ ಪಟ್ಟಿದ್ದಾರೆ.
ಈ ಬಾರಿ ಜೆಡಿಎಸ್ ಪಕ್ಷವನ್ನು ಜನತೆ ಆಶೀರ್ವದಿಸಲಿದ್ದಾರೆ. ಕುಮಾರಸ್ವಾಮಿ ನೇತೃತ್ವದಲ್ಲಿ ಉತ್ತಮ ಸರಕಾರ ನೀಡಿ ರಾಜ್ಯವನ್ನು ಅಭಿವೃದ್ದಿ ಪಥದತ್ತ ಸಾಗಿಸಲಿದ್ದೇವೆ ಎಂದು ಹೊರಟ್ಟಿ ಭರವಸೆ ನೀಡಿದ್ದಾರೆ.
ಯಾರ ಜೊತೆಯೂ ಹೊಂದಾಣಿಕೆ ಮಾಡುವ ಅವಶ್ಯಕತೆ ನಮಗಿಲ್ಲ. ಏಕಾಂಗಿಯಾಗಿ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲೂ ನಮ್ಮ ಪಕ್ಷ ಸ್ಪರ್ಧಿಸಲಿದೆ ಎಂದು ಹೊರಟ್ಟಿ ಹೇಳಿದ್ದಾರೆ.