ಭಾರತ ಭ್ರಷ್ಟಾಚಾರ, ಕೊಳೆಗೇರಿ ನಾಡು: ಶ್ರೀರವಿಶಂಕರ್
ಹೌದು ಭಾರತ ಈಗೀಗ scams and slums ದೇಶವಾಗಿದೆ ಎಂದಿರುವ ರವಿಶಂಕರ ಗುರೂಜಿ, ವೋಟ್ ಬ್ಯಾಂಕ್ ರಾಜಕೀಯದಲ್ಲಿ ತಲ್ಲೀನವಾಗಿರುವ ಪಕ್ಷಗಳು ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳಿಗೆ ಮಣೆ ಹಾಕಿ ಅವರನ್ನು ಚುನಾವಣೆಗಳಿಗೆ ನಿಲ್ಲಿಸುತ್ತಿವೆ ಎಂದು ಖೇದ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ದೆಹಲಿ ಪೊಲೀಸರು ಹಮ್ಮಿಕೊಂಡಿದ್ದ 'ಧ್ಯಾನದ ಮೂಲಕ ರೌಡಿ ಶೀಟರುಗಳ ಮನಃಪರಿವರ್ತನೆ' ಕಾರ್ಯಕ್ರಮದಲ್ಲಿ ಅಪರಾಧಿಗಳ ಜತೆ ಮುಕ್ತ ಸಂವಾದ ನಡೆಸಿದ ಆಧ್ಯಾತ್ಮಿಕ ಗುರು ಶ್ರೀ ರವಿಶಂಕರ ಗುರೂಜಿ ಅವರು 'ಪ್ರಸ್ತುತ ಸಂಸತ್ತಿನಲ್ಲಿ ಅಪರಾಧ ಹಿನ್ನೆಲೆಯ 220 ಸಂಸದರು ಇದ್ದಾರೆ. ಅಪರಾಧಿತನ ಮತ್ತು ಭ್ರಷ್ಟಾಚಾರವನ್ನು ಪ್ರಸನ್ನತೆ, ಅಂತಃಶುದ್ಧಿ ಮತ್ತು ವಿವೇಕದಿಂದ ಪರಿವರ್ತಿಸಬಹುದು. ಆಧ್ಯಾತ್ಮದಿಂದ ಇದನ್ನು ಸಾಧಿಸಬಹುದು ಎಂದು ಪ್ರಸ್ತುತಪಡಿಸಿದರು.
'ರಾಜಕಾರಣಿಗಳಲ್ಲೂ ಆಧ್ಯಾತ್ಮ ನೆಲೆಯೂರಬೇಕು. ವೈಯಕ್ತಿಕ ಹಿತಾಸಕ್ತಿಗೆ ಮುನ್ನ ರಾಜಕೀಯ ಪಕ್ಷಗಳು ಮತ್ತು ನೇತಾರರು ದೇಶದ ಹಿತಾಸಕ್ತಿಯ ಬಗ್ಗೆ ಮೊದಲು ಚಿಂತಿಸಬೇಕು. ಭಾರತದ ಪ್ರಜಾಪ್ರಭುತ್ವದ ದಿಕ್ಕುದೆಸೆಗಳನ್ನು ಬದಲಿಸಲು ರಾಜಕಾರಣಿಗಳು ತ್ಯಾಗ ಮನೋಭಾವ ಬೆಳೆಸಿಕೊಳ್ಳಬೇಕು' ಎಂದು ಅವರು ಕರೆ ನೀಡಿದರು.
ಆಧ್ಯಾತ್ಮ ಮೂಲಕ ರೌಡಿ ಶೀಟರುಗಳಲ್ಲಿ ಮನಃಪರಿವರ್ತನೆ ತರಲು ತಾವು ಶ್ರಮಿಸುತ್ತಿರುವುದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿದರು. ದೆಹಲಿಯ ಪೂರ್ವ ಭಾಗದಲ್ಲಿ 16 ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 750 ಅಪರಾಧಿಗಳು ಆರ್ಟ್ ಆಫ್ ಲಿವಿಂಗ್ ನಡೆಸಿಕೊಟ್ಟ ಆಧ್ಯಾತ್ಮ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.