ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡ ಸಹಾರಾ
ಸುಪ್ರೀಂಕೋರ್ಟ್ ಬುಧವಾರ (ಡಿ.5) ನೀಡಿದ ಆದೇಶದಂತೆ ಸಹಾರಾ ಸಂಸ್ಥೆಗೆ ಫೆಬ್ರವರಿ ತನಕ ಸಮಯ ಸಿಕ್ಕಿದೆ. ಎರಡು ತಿಂಗಳಲ್ಲಿ 24 ಸಾವಿರ ಕೋಟಿ ರು ಹಿಂತಿರುಗಿಸಲು ಸಹಾರಾ ಸಂಸ್ಥೆಗೆ ಸಾಧ್ಯವೇ? ಎಂಬ ಪ್ರಶ್ನೆ ಮಾರುಕಟ್ಟೆಯಲ್ಲಿ ಚರ್ಚಿತವಾಗುತ್ತಿದೆ.
ಜೊತೆಗೆ 5,120 ಕೋಟಿ ರು ಗಳಿಗೆ ಡಿಮ್ಯಾಂಡ್ ಡ್ರಾಫ್ಟನ್ನು ಸೆಬಿಗೆ ನೀಡಬೇಕು ಎಂದು ಸಿಜೆ ಅಲ್ತಾಮಸ್ ಕಬೀರ್ ಅವರು ಸೂಚಿಸಿದ್ದಾರೆ. ಉಳಿದ ಬಾಕಿ ಮೊತ್ತವನ್ನು ಎರಡು ಕಂತುಗಳಲ್ಲಿ ಫೆಬ್ರವರಿ ತಿಂಗಳೊಳಗೆ ಕಟ್ಟತಕ್ಕದ್ದು ಎಂದು ನ್ಯಾಯಪೀಠ ಹೇಳಿದೆ.
ನ್ಯಾ. ಎಸ್ ಎಸ್ ನಿಜ್ಜಾರ್ ಹಾಗೂ ಜೆ ಚೆಲ್ಮೆಶ್ವರ್ ಅವರಿದ್ದ ಪೀಠದ ಆದೇಶದಂತೆ ಜನವರಿಯಲ್ಲಿ 10,000 ಕೋಟಿ ರು ಗಳ ಮೊದಲ ಕಂತು ಹಾಗೂ ಉಳಿದ ಕಂತನ್ನು ಫೆಬ್ರವರಿ ಮೊದಲ ವಾರದಲ್ಲಿ ಸಹಾರಾ ಸಂಸ್ಥೆ ಪಾವತಿಸಬೇಕಾಗುತ್ತದೆ.
ಸಹಾರಾ ಪರಿವಾರ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿಯ ಕಾನೂನು ಉಲ್ಲಂಘಿಸಿ ಹೂಡಿಕೆ ಸಂಗ್ರಹಿಸಿದೆ. ತನ್ನ 3 ಕೋಟಿಗೂ ಅಧಿಕ ಹೂಡಿಕೆದಾರರಿಗೆ 24,000 ಕೋಟಿ ರು ಹೂಡಿಕೆ ಹಣವನ್ನು ಶೇ. 15 ಬಡ್ಡಿಯೊಂದಿಗೆ ಹಿಂತಿರುಗಿಸತಕ್ಕದ್ದು ಎಂದು ಸೆ.3 ರನ್ನು ನೀಡಿದ್ದ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದು, 2 ತಿಂಗಳ ಕಾಲಾವಕಾಶ ನೀಡಲಾಗಿದೆ.
ಏನಿದು ಪ್ರಕರಣ?: ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ ಮಂಡಳಿ (ಸೆಬಿ) ನಿಯಮಗಳಿಗೆ ವಿರುದ್ಧವಾಗಿ ರೂ. 24,029 ಕೋಟಿ ರೂ. ಸಂಗ್ರಹಿಸಿದ್ದ ಸಹಾರಾ ಗ್ರೂಪ್ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. 2008 ಮತ್ತು 2011ರ ನಡುವೆ ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗದಿರುವ ತನ್ನ ಎರಡು ಕಂಪನಿಗಳ ಮೂಲಕ ರೂ. 24,029 ಕೋಟಿ ನಿಯಮ ಉಲ್ಲಂಘಿಸಿ ಸಂಗ್ರಹಿಸಿದ ಆರೋಪ ಹೊತ್ತಿದೆ.
ಸಹಾರಾ ಹೌಸಿಂಗ್ ಇನ್ವೆಸ್ಟ್ ಮೆಂಟ್ ಕಾರ್ಪೊರೇಶನ್ ಮತ್ತು ಸಹಾರಾ ಇಂಡಿಯಾ ರಿಯಲ್ ಎಸ್ಟೇಟ್ ಕಾರ್ಪೊರೇಶನ್ ಮೂಲಕ ಠೇವಣಿದಾರರು ತಮಗೆ ಅಗತ್ಯವಿದ್ದಾಗ ಪರಿವರ್ತಿಸಬಹುದಾದ ಒಎಫ್ ಸಿಡಿ ಬಾಂಡ್ ಗಳನ್ನು ವಿತರಿಸುವ ಮೂಲಕ ಈ ನಿಧಿ ಸಂಗ್ರಹಿಸಲಾಗಿತ್ತು. ಠೇವಣಿ ಸಂಗ್ರಹಣೆಯ ಸ್ಪಷ್ಟ ಉದ್ದೇಶವನ್ನು ಕಂಪನಿ ಸ್ಪಷ್ಟವಾಗಿ ತಿಳಿಸಿರಲಿಲ್ಲ.
ಹೂಡಿಕೆದಾರರ ಠೇವಣಿಗೆ ಯಾವುದೇ ಖಾತರಿಯನ್ನು ಈ ಬಾಂಡ್ ಗಳು ನೀಡಿರಲಿಲ್ಲ. ಈ ವಹಿವಾಟಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಕಂಪೆನಿ ಮರೆಮಾಚಿತ್ತು.
ಕಂಪನಿಯ ಈ ವಹಿವಾಟು ಸೆಬಿ ನಿಯಮಕ್ಕೆ ವಿರುದ್ಧವಾಗಿದೆ. 50ಕ್ಕಿಂತಲೂ ಹೆಚ್ಚು ಜನರಿಂದ ಠೇವಣಿ ಸಂಗ್ರಹಿಸಬೇಕಾದಲ್ಲಿ ಸೆಬಿ ಅನುಮತಿ ಕೇಳಬೇಕಾಗುತ್ತದೆ. ಠೇವಣಿದಾರರ ಹಣಕ್ಕೆ ಸೂಕ್ತ ಭದ್ರತೆ ಒದಗಿಸುವುದರೊಂದಿಗೆ ಎಲ್ಲ ದಾಖಲೆಗಳನ್ನು ನೀಡಬೇಕು. ಆದರೆ ಈ ನಿಯಮಗಳನ್ನು ಉಲ್ಲಂಘಿಸಿ ಸಹಾರಾ ಠೇವಣಿ ಸಂಗ್ರಹಿಸಿತ್ತು.
ಪ್ರಕರಣದ ವಿಚಾರಣೆ ನಡೆಸಿದ ಭದ್ರತಾ ಮೇಲ್ಮನವಿ ಪ್ರಾಧಿಕಾರ, ಠೇವಣಿಗಳನ್ನು ಶೇ. 15ರ ಬಡ್ಡಿ ಸಮೇತ ಮರುಪಾವತಿಸಲು ಕಳೆದ ವರ್ಷ ಆದೇಶಿಸಲಾಗಿತ್ತು. ಆದರೆ ತೀರ್ಪನ್ನು ಪ್ರಶ್ನಿಸಿ ಸಹಾರಾ ಗ್ರೂಪ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಸುಪ್ರೀಂ ಕೋರ್ಟ್ ಇದೇ ತೀರ್ಪನ್ನು ಎತ್ತಿಹಿಡಿದಿತ್ತು.
ಆದರೆ, ಸುಪ್ರೀಂ ತೀರ್ಪಿಗೆ ತಲೆಬಾಗಿರುವ ಸಹಾರಾ ಸಂಸ್ಥೆ ಎಲ್ಲಾ ಹಣ ಹಿಂತಿರುಗಿಸುವ ಭರವಸೆ ನೀಡಿರುವುದು ಅಚ್ಚರಿ ಮೂಡಿಸಿದೆ. ಹೂಡಿಕೆದಾರರು ಬೇನಾಮಿ ಎಂದು ತಿಳಿದು ಬಂದರೆ ಎಲ್ಲಾ ಹಣ ಕೇಂದ್ರ ಸರ್ಕಾರದ ಪಾಲಾಗಲಿದೆ.
ಕಳೆದ 33 ವರ್ಷಗಳಲ್ಲಿ ಒಂದೇ ಒಂದು ಬೇನಾಮಿ ಖಾತೆ, ಹಣಕಾಸು ಅವ್ಯವಹಾರ ಕಾಣದೆ 12 ಕೋಟಿಗೂ ಅಧಿಕ ಹೂಡಿಕೆದಾರರನ್ನು ಸೃಷ್ಟಿಸಿದ ಸಹಾರಾ ಸಂಸ್ಥೆ ಎದೆಗುಂದದಿರುವುದು ಕುತೂಹಲಕಾರಿಯಾಗಿದೆ.