ದ್ರೌಪದಿ ಕಥೆ ರಿಪೀಟ್: ಜೂಜಿನಲ್ಲಿ ಪತ್ನಿ ಪಣಕ್ಕೆ
ಮಹಾಭಾರತ ಕತೆ ಇತಿಹಾಸವೋ, ಪುರಾಣವೋ ಭಾರತದ ಜನಜೀವನದಲ್ಲಿ ಹಾಸುಹೊಕ್ಕಿರುವುದು ಸುಳ್ಳಲ್ಲ. ಗಾಜಿಯಾಬಾದ್ ಜಿಲ್ಲೆಯಲ್ಲಿ ಜೂಜಾಡುವುದರಲ್ಲೇ ಕಾಲ ಕಳೆಯುತ್ತಿದ್ದ ವ್ಯಕ್ತ ಈಗ ಜೈಲಿನಲ್ಲಿ ಕಾಲದಬ್ಬಬೇಕಾಗಿದೆ.
ಸುಮಾರು 10 ದಿನಗಳ ಹಿಂದೆ, ಗಾಜಿಯಾಬಾದ್ ಜಿಲ್ಲೆಯ ನೆಹರೂ ನಗರ ಪ್ರದೇಶದಲ್ಲಿ ಆರೋಪಿ ಎಂದಿನಂತೆ ಜೂಜಾಡಲು ತೊಡಗಿದ್ದ. ಆದರೆ, ಕೈಯಲ್ಲಿ ನಯಾ ಪೈಸೆ ಇರಲಿಲ್ಲ. ಇದ್ದ ಬದ್ದ ಹಣವನ್ನೆಲ್ಲ ಜೂಜಿನಲ್ಲಿಟ್ಟು ಸೋತಿದ್ದ.
ಕೊನೆಗೆ, ಹಿರಿಯ ಪಾಂಡವ ಯುಧಿಷ್ಠರನಂತೆ ತನ್ನ ಪತ್ನಿಯನ್ನು ಜೂಜಿನಲ್ಲಿ ಪಣಕ್ಕಿಟ್ಟ. ಸಹ ಜೂಜುಕೋರರು ತಮಾಷೆಗೆ ಹೇಳುತ್ತಿದ್ದಾನೆ ಎಂದು ಮೊದಲಿಗೆ ತಿಳಿದರು. ಅದರೆ, ಜೂಜಿನಲ್ಲಿ ಸೋತರೆ ನನ್ನ ಪತ್ನಿ ನಿಮ್ಮ ವಶಕ್ಕೆ ತೆಗೆದುಕೊಳ್ಳಿ ಎಂದು ಮತ್ತೆ ಮತ್ತೆ ಹೇಳಿಬಿಟ್ಟ.
ಆಟದಲ್ಲಿ ಸೋತ ಆರೋಪಿ ಕೈ ಚೆಲ್ಲಿ ಕುಳಿತ ಮೇಲೆ ಹುಮ್ಮಸ್ಸಿನಿಂದ ಗೆದ್ದ ಜೂಜುಕೋರರು ಆತನ ಮನೆಯ ಮೇಲೆ ದಾಳಿ ನಡೆಸಿದರು. ಏಕಾಏಕಿ ದಾಳಿಯಿಂದ ಕಂಗಾಲಾದ ಮಹಿಳೆಗೆ ಮೊದಲಿಗೆ ಎಲ್ಲರೂ ಏಕೆ ಬಂದಿದ್ದಾರೆ ಎಂಬುದು ತಿಳಿಯಲೇ ಇಲ್ಲ.
ನಂತರ ಎಚ್ಚೆತ್ತುಕೊಂಡು ಜೂಜುಕೋರರಿಂದ ಹೇಗೀ ಪಾರಾಗಿ ನೋಯ್ಡಾದ ಜಾರ್ಚಾ ಪೊಲೀಸ್ ಠಾಣೆ ತಲುಪಿ ದೂರು ದಾಖಲಿಸಿದ್ದಾಳೆ.
'ನನ್ನ ಗಂಡ ನನ್ನನ್ನು ಜೂಜಾಟದಲ್ಲಿ ಪಣಕ್ಕಿಟ್ಟು ಸೋತಿದ್ದಾನೆ. ನೆರೆ ಹೊರೆಯವರ ಸಹಾಯದಿಂದ ನಾನು ತವರು ಮನೆ ಸೇರಿಕೊಂಡೆ. ಆದರೆ, ಜೂಜಿನಲ್ಲಿ ಗೆದ್ದಿರುವ ಆಟಗಾರರು ನನ್ನ ಹಿಂಬಾಲಿಸಿಕೊಂಡು ಬರುತ್ತಿದ್ದಾರೆ.
ಮೊದಲಿನಿಂದಲೂ ನನ್ನ ಪತಿ ಜೊತೆ ಒಳ್ಳೆ ಸಂಬಂಧ ಇಲ್ಲ. ಪ್ರತಿ ದಿನ ನನ್ನನ್ನು ಪೀಡಿಸುತ್ತಿದ್ದ. ಈಗ ಪರ ಪುರುಷರ ಕಾಟದಿಂದ ನೊಂದಿದ್ದೇನೆ. ದಯವಿಟ್ಟು ಕಾಪಾಡಿ' ಎಂದು ಪೊಲೀಸರ ಮೊರೆ ಹೊಕ್ಕಿದ್ದಾಳೆ.
ಮದುವೆಯಾದ ಕೆಲವು ತಿಂಗಳಿನಲ್ಲೇ ಆತನ ವರ್ತನೆ ಕಂಡು ನಾನು ಕಂಗಾಲಾದೆ. ಆತನ ತಮ್ಮ ಸೇರಿದಂತೆ ಇತರೆ ಪುರುಷರ ಜೊತೆಗೆ ಲೈಂಗಿಕ ಸಂಪರ್ಕ ಹೊಂದುವಂತೆ ನನ್ನನ್ನು ಪೀಡಿಸುತ್ತಿದ್ದ. ಮೂರ್ನಾಲ್ಕು ಬಾರಿ ತವರು ಮನೆ ಸೇರಿದ್ದೆ. ಅದರೂ ಇತ್ತೀಚೆಗೆ ಪುನಃ ಆತನ ಬಳಿ ಬಂದಿದ್ದೆ.
ಈಗ ನೋಡಿದರೆ, ಜೂಜಿನಲ್ಲಿ ನನ್ನನ್ನು ಪಣಕ್ಕಿಟ್ಟು ಸೋತಿದ್ದಾನೆ. ನನ್ನನ್ನು ರಕ್ಷಿಸಿ ಎಂದು ಮಹಿಳೆ ಕೇಳಿಕೊಂಡಿದ್ದಾಳೆ. ದೂರು ಸ್ವೀಕರಿಸಿದ ಪೊಲೀಸರು ಜೂಜುಕೋರ ಪತಿಯನ್ನು ಬಂಧಿಸಿದ್ದಾರೆ.