ಜಯಪ್ರದಾ ಹುಡುಕಿ ಕೊಟ್ರೆ 10 ಸಾವಿರ ಬಹುಮಾನ
ಕಳೆದ ನಾಲ್ಕು ತಿಂಗಳಿಂದ ಜಯಪ್ರದಾ ಕಾಣೆಯಾಗಿದ್ದಾರೆ. ಸಮಾಜವಾದಿ ಪಕ್ಷ ಸಾಂಸದೆಯಾಗಿರುವ ಜಯಪ್ರದಾ ಕಳೆದ ನಾಲ್ಕು ತಿಂಗಳಿಂದ ಕ್ಷೇತ್ರಕ್ಕೆ ಭೇಟಿಯೇ ನೀಡಿಲ್ಲವಂತೆ.
ಇದರಿಂದ ಕೆರಳಿರುವ ಸ್ಥಳೀಯರ ಮತದಾರರು, ಈ ರೀತಿಯಾಗಿ ಜಯಾ ತಲೆಗೆ ಬೆಲೆ ಕಟ್ಟಿದ್ದಾರೆ. ಸುದ್ದಿ ತಿಳಿದು ಅಚ್ಚರಿಗೊಳಗಾದ ಜಯಪ್ರದಾ, ರಾಂಪುರ ಕ್ಷೇತ್ರಕ್ಕೆ ಭೇಟಿ ನೀಡಿದ್ದರು.
ಈ ವೇಳೆ, ಆಕ್ರೋಶಿತರಾದ ಮತದಾರರು ಗುಮ್ಶುದಾ ಕಿ ತಲಾಷ್ (ಕಳೆದು ಹೋದವರಿಗಾಗಿ ಹುಟುಕಾಟ) ಎಂಬ ಬ್ಯಾನರ್ಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಪ್ರಸಂಗವೂ ನಡೆದಿದೆ.
ಅಲ್ಲದೆ, ದಿಲ್ಲಿ ಅಥವಾ ಮುಂಬೈನಲ್ಲಿ ನೆಲೆಸುವವರಂಥಹವರನ್ನು ನಾವ್ಯಾಕೆ ಸಾಂಸದರನ್ನಾಗಿ ಆಯ್ಕೆ ಮಾಡಬೇಕೆಂದು ಸ್ಥಳೀಯ ಮತದಾರ ಶ್ಯಾಂ ಸಿಂಗ್ ಕಿಡಿಕಾರಿದ್ದಾರೆ.
ರಾಂಪುರಕ್ಕೆ ಭೇಟಿ ನೀಡಿದ ಜಯಪ್ರದಾ ಅವರು ನಂತರ ತಮ್ಮ ಎಂಪಿ ಕಚೇರಿಗೆ ಭೇಟಿ ನೀಡಿದ್ದರು. ಈ ವೇಳೆ, ಮಾತನಾಡಿದ ಅವರು ಕೆಲವರು ನನ್ನ ವಿರುದ್ಧ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ.
ನನ್ನ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಪಣತೊಟ್ಟಿದ್ದೇನೆ. ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಂಡೂ ಇದ್ದೇನೆ ಎಂದು ಮಾರ್ಮಿಕ ಉತ್ತರ ನೀಡಿದರು.
2010ರಲ್ಲಿಯೇ ಅಮರ್ ಸಿಂಗ್ ಜತೆಯಲ್ಲಿಯೇ ಜಯಪ್ರದಾ ಅವರನ್ನು ಎಸ್ಪಿ ಉಚ್ಛಾಟಿಸಿದೆ. ಆದರೆ, ಇಲ್ಲಿಯವರೆಗೂ ಸ್ಪೀಕರ್ಗೆ ಈ ಕುರಿತು ಅಧಿಸೂಚನೆ ನೀಡಿಲ್ಲ. ಈ ನಡುವೆ ಜಯಪ್ರದಾ ಬದ್ಧವೈರಿ ಅಜಂಖಾನ್ ರನ್ನು ಸಮಾಜವಾದಿ ಪಕ್ಷ ಉಚ್ಚಾಟಿಸಿರುವುದನ್ನು ಇಲ್ಲಿ ಸ್ಮರಿಸಬಹುದು.
ಈಗ ರಾಷ್ಟ್ರೀಯ ಲೋಕ ಮಂಚ್ನ ಉಪಾಧ್ಯಕ್ಷೆಯಾಗಿರುವ ನಟಿ ಜಯಪ್ರದಾ ಅವರು ರಾಷ್ಟ್ರೀಯ ಲೋಕ ಮಂಚ್ ಪಕ್ಷ ಚುನಾವಣೆಗೂ ಮುನ್ನ ಅಥವಾ ನಂತರ ಸಮಾಜವಾದಿ ಪಕ್ಷದೊಂದಿಗೆ ಕೈ ಜೋಡಿಸುವ ಸಾಧ್ಯತೆಯನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
ಕನ್ನಡ ಚಿತ್ರರಂಗಕ್ಕೆ ಮರಳಿ ಜಯಪ್ರದಾ ಅವರ ಅಭಿನಯದ ಸಂಗೊಳ್ಳಿ ರಾಯಣ್ಣ ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿದೆ.