ದೇವೇಗೌಡ ದೇಶದ 'ಸರ್ದಾರ್ ವಲ್ಲಭಭಾಯ್ ಪಟೇಲ್'
ಈ ದೇಶ ಕಂಡ ಮಹಾನ್ ನಾಯಕರುಗಳಾದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯ್ ಪಟೇಲ್ ಮತ್ತು ಚೌಧುರಿ ಚರಣ್ ಸಿಂಗ್ ಅವರಿಗೆ ದೇವೇಗೌಡರನ್ನು ಹೋಲಿಸಬಹುದೆಂದು ಜೆಡಿಎಸ್ ತೊರೆದು ಕೆಜೆಪಿ ಸೇರಿರುವ ಸಕಲೇಶಪುರ ಕ್ಷೇತ್ರದ ಶಾಸಕ ಎಚ್ ಎಂ ವಿಶ್ವನಾಥ್ ಹೇಳಿದ್ದಾರೆ.
ರೇವಣ್ಣ ಮತ್ತು ದೇವೇಗೌಡ ಕೇಳಿದಾಗಲೆಲ್ಲಾ ಮೂಟೆಗಟ್ಟಲೆ ಅಕ್ಕಿ, ರಾಗಿ, ಜೋಳ, ಜೇನು ತುಪ್ಪ, ಸೌಧೆ ಕಳುಹಿಸಿಕೊಟ್ಟಿದ್ದೇನೆ. ನನ್ನನ್ನು ಜೆಡಿಎಸ್ ನಲ್ಲಿ ಮೂಲೆಗುಂಪು ಮಾಡಿದರು.
ರೇವಣ್ಣ ನನಗಿಂತ ಜ್ಯೂನಿಯರ್, ನಾನ್ಯಾಕೆ ಅವರಿಗೆ ಸಲಾಂ ಹೊಡೀಬೇಕೆಂದು ಜೆಡಿಎಸ್ ತೊರೆದು ಬಂದಿದ್ದೇನೆ ಎಂದು ವಿಶ್ವನಾಥ್ ಹೇಳಿದ್ದಾರೆ.
ಈ ಇಳಿ ವಯಸ್ಸಿನಲ್ಲೂ ದೇವೇಗೌಡರು ಸಂಘಟನೆ ಬಲ ಪಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ರೇವಣ್ಣ ಪಕ್ಷ ಹಾಳು ಮಾಡುವುದರಲ್ಲಿ ನಿರತರಾಗಿದ್ದಾರೆ, ಕುಮಾರಸ್ವಾಮಿಗೆ ಇದೆಲ್ಲಾ ತಿಳಿಯುತ್ತಿಲ್ಲ ಎಂದು ವಿಶ್ವನಾಥ್ ಬೇಸರ ವ್ಯಕ್ತ ಪಡಿಸಿದ್ದಾರೆ.
ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ನೀಡುತ್ತಿಲ್ಲ ಎಂದು ವಿಶ್ವನಾಥ್ ಪಕ್ಷ ತೊರೆಯುತ್ತಿದ್ದಾರೆ ಎನ್ನುವುದು ನನ್ನ ವಿರೋಧಿಗಳ ಹೇಳಿಕೆ. ಮುಂದಿನ ಚುನಾವಣೆಯಲ್ಲಿ ಹೊಳೆನರಸೀಪುರ, ಬೇಲೂರು, ಸಕಲೇಶಪುರದಲ್ಲಿ ರೇವಣ್ಣ ವಿರುದ್ದ ಸ್ಪರ್ಧಿಸಲು ನಾನು ಸಿದ್ದ ಎಂದು ವಿಶ್ವನಾಥ್ ಸವಾಲೆಸೆದಿದ್ದಾರೆ.
ಟಿವಿ9 ಚಕ್ರವ್ಯೂಹ (ಭಾನುವಾರ, ಡಿ 2) ಕಾರ್ಯಕ್ರಮದಲ್ಲಿ ಪತ್ರಕರ್ತ ಲಕ್ಷ್ಮಣ್ ಹೂಗಾರ್ ಜೊತೆ ಮಾತನಾಡುತ್ತಿದ್ದ ವಿಶ್ವನಾಥ್, ಹಾಸನ ಜಿಲ್ಲೆಯ ಅಭಿವೃದ್ದಿಗೆ ರೇವಣ್ಣ ಕಂಟಕ ಪ್ರಾಯರಾಗಿದ್ದಾರೆ.
ಜೆಡಿಎಸ್ ಪಕ್ಷಕ್ಕೆ ಕ್ಷೇತ್ರದ ಯಾವ ಭಾಗದಿಂದ ಹೆಚ್ಚಿನ ಮತಗಳು ಬರುತ್ತೋ ಅಂಥಹ ಪ್ರದೇಶವನ್ನು ಮಾತ್ರ ಅಭಿವೃದ್ದಿ ಪಡಿಸಲು ರೇವಣ್ಣ ಹುಕುಂ ನೀಡಿದ್ದಾರೆ.
ಜಿಲ್ಲೆಯ ಡಿಸಿ, ಎಸ್ಪಿಗಳಿಗೂ ರೇವಣ್ಣ ಮರ್ಯಾದೆ ಕೊಡುತ್ತಿಲ್ಲ ಎಂದು ವಿಶ್ವನಾಥ್ ಕಿಡಿಕಾರಿದ್ದಾರೆ.