ಭಾರತ-ಪಾಕ್ ಪಂದ್ಯಕ್ಕೆ ಮುತಾಲಿಕ್ ಬೌನ್ಸರ್
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಬೆಂಗಳೂರಿನಲ್ಲಿ ಯಾವುದೇ ಕಾರಣಕ್ಕೂ ಪಾಕಿಸ್ತಾನದ ಆಟಗಾರರು ಕಾಲಿಡಲು ಬಿಡುವುದಿಲ್ಲ. ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಪಂದ್ಯವನ್ನು ಕೂಡಲೇ ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಸಂಬಂಧ ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಗೃಹ ಸಚಿವ ಆರ್ ಅಶೋಕ್, ಕೆಎಸ್ ಸಿಎ ಅಧ್ಯಕ್ಷ ಅನಿಲ್ ಕುಂಬ್ಳೆ ಹಾಗೂ ಕ್ರೀಡಾ ಇಲಾಖೆಗೆ ಮನವಿ ಸಲ್ಲಿಸಲಾಗಿದೆ.
ಮನವಿ ವಿರೋಧಿಸಿ ಪಂದ್ಯ ನಡೆಸುವುದೇ ಆದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಪ್ರಮೋದ್ ಎಚ್ಚರಿಕೆ ನೀಡಿದ್ದಾರೆ.
2007ರಲ್ಲಿ ಕ್ರಿಕೆಟ್ ನೆಪದಲ್ಲಿ ಉಗ್ರರು ನುಸುಳಿದ ಬಗ್ಗೆ ಮಾಹಿತಿ ಇದೆ. ನಂತರ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹೆಚ್ಚಾಗಿದೆ. ಮತ್ತೆ ಸಾರ್ವಜನಿಕರ ಮಾರಣಹೋಮಕ್ಕೆ ಕ್ರಿಕೆಟ್ ಆಟ ನಾಂದಿಯಾಗುವುದು ಬೇಕೇ? ಎಂದು ಮುತಾಲಿಕ್ ಪ್ರಶ್ನಿಸಿದ್ದಾರೆ.
ಈಗಾಗಲೇ 3000 ಜನಕ್ಕೆ ಭಾರತ ಪ್ರವೇಶಿಸಲು ವೀಸಾ ನೀಡಲು ಸರ್ಕಾರ ಮುಂದಾಗಿರುವ ಬಗ್ಗೆ ಸುದ್ದಿಯಿದೆ. ಕ್ರಿಕೆಟ್ ಮುಂದಿಟ್ಟುಕೊಂಡು ಭಾರತದ ಒಳಗೆ ನುಗ್ಗುವ ದುಷ್ಕರ್ಮಿಗಳು ಡ್ರಗ್ ಮಾಫಿಯಾ, ಖೋಟಾ ನೋಟು ಮಾಫಿಯಾ, ಬೆಟ್ಟಿಂಗ್ ವ್ಯವಹಾರ ನಡೆಸುತ್ತಾರೆ ಎಂದು ಮುತಾಲಿಕ್ ವಿವರಿಸಿದರು.
ಕ್ರಿಕೆಟ್ ಪಂದ್ಯ ನಿಷೇಧ ಆಗ್ರಹಿಸಿ ಶ್ರೀರಾಮಸೇನೆ, ಕರ್ನಾಟಕ ಪ್ರಜಾಶಕ್ತಿ, ಹಿಂದೂ ಜಾಗರಣ ವೇದಿಕೆ ಮುಂತಾದ ಸಂಘಟನೆಗಳು ಪ್ರತಿಭಟನೆ ನಡೆಸಲಿದೆ ಎಂದು ಮುತಾಲಿಕ್ ಹೇಳಿದರು.
ಬಹು ನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ಸರಣಿ ವೇಳಾಪಟ್ಟಿ ಹೊರ ಬಿದ್ದಿದೆ. ಉಭಯ ದೇಶಗಳ ನಡುವಿನ ಕ್ರಿಕೆಟ್ ಸರಣಿಗೆ ಭಾರತದ ಗೃಹ ಸಚಿವಾಲಯ ಒಪ್ಪಿಗೆ ಸೂಚಿಸಿದೆ.
ಪ್ರವಾಸಿ ಪಾಕಿಸ್ತಾನ ತಂಡ 3 ಏಕದಿನ ಪಂದ್ಯ ಹಾಗೂ 2 ಟಿ20 ಪಂದ್ಯಗಳನ್ನು ಆಡಲಿದೆ. ಪಾಕಿಸ್ತಾನ ತಂಡ ಡಿ.22 ರಂದು ಭಾರತಕ್ಕೆ ಆಗಮಿಸಲಿದ್ದು,
ಡಿ.25 ರಂದು ಮೊದಲ ಪಂದ್ಯವಾಡಲಿದೆ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಟಿ20 ಆಯೋಜಿಸಲಾಗಿದೆ. ಡಿ.27 ರಂದು ಅಹಮದಾಬಾದಿನಲ್ಲಿ ಎರಡನೇ ಟಿ20 ಪಂದ್ಯ ನಡೆಯಲಿದೆ.
ಮೂರು ಏಕದಿನ ಪಂದ್ಯಗಳು ಡಿಸೆಂಬರ್ 30 ರಂದು ಚೆನ್ನೈ, ಜನವರಿ 3 ರಂದು ಕೋಲ್ಕತ್ತಾ ಹಾಗೂ ಜನವರಿ 6ರಂದು ದೆಹಲಿಯಲ್ಲಿ ನಡೆಯಲಿದ್ದು, ಜನವರಿ 7ಕ್ಕೆ ಪಾಕಿಸ್ತಾನ ತಂಡ ಭಾರತ ತೊರೆಯಲಿದೆ.
2008ರ ಮುಂಬೈ ಮೇಲೆ ಉಗ್ರರ ದಾಳಿ ನಂತರ ಭಾರತ ಹಾಗೂ ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ನಡೆಯುವುದು ಅಸಾಧ್ಯ ಎಂಬ ಹಂತ ತಲುಪಿತ್ತು.
2007ರಲ್ಲಿ ದ್ವಿಪಕ್ಷೀಯ ಸರಣಿ ನಂತರ 2011ರ ವಿಶ್ವಕಪ್ ಸೆಮಿಫೈನಲ್ಸ್ ನಲ್ಲಿ ಪಾಕಿಸ್ತಾನ ಹಾಗೂ ಭಾರತ ನಡುವೆ ಪಂದ್ಯ ನಡೆದ ನಂತರ ಯಾವುದೇ ಪಂದ್ಯಗಳನ್ನಾಡಿಲ್ಲ.