ಸೋಮಣ್ಣ ಮಗನ ಮದುವೆಯಲ್ಲಿ ಬೆಂಕಿ ಆಕಸ್ಮಿಕ
ಸಚಿವ ವಿ ಸೋಮಣ್ಣ ಅವರ ದ್ವಿತ್ರೀಯ ಪುತ್ರ ಅರುಣ್ ಅವರ ಮದುವೆ ಸಂದರ್ಭದಲ್ಲಿ ಉಂಟಾದ ಈ ಬೆಂಕಿ ಆಕಸ್ಮಿಕದಿಂದ ಕೆಲಕಾಲ ಉದ್ವಿಗ್ನ ವಾತಾವರಣ ಉಂಟಾಗಿತ್ತು.
ವಿದ್ಯುತ್ ಶಾರ್ಟ್ ಸರ್ಕೀಟ್ ನಿಂದಾಗಿ ಬೆಂಕಿ ಹತ್ತಿಕೊಂಡಿದೆ ಎಂದು ತಿಳಿದು ಬಂದಿದೆ. ನಮ್ಮ ತಂಡ ಬರುವಷ್ಟರಲ್ಲಿ ಅರ್ಧದಷ್ಟು ಬೆಂಕಿ ನಂದಿಸಲಾಗಿತ್ತು. ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಆಗ್ನಿಶಾಮಕದಳ ಮುಖ್ಯಸ್ಥ ಕೆಂಚಪ್ಪ ಹೇಳಿದ್ದಾರೆ.
ಸೋನಾಪುರದ ಬೀನಾ ಕಡದಿ ಎಂಬ ಕನ್ಯೆಯ ಜೊತೆ ಸೋಮಣ್ಣ ಅವರ ಪುತ್ರ ಡಾ. ಅರುಣ್ ಅವರ ಮದುವೆ ಸಮಾರಂಭ ಸೋಮವಾರ ಡಿ.3 ರಂದು ಪೂರ್ವ ನಿಗದಿಯಾದ ಮುಹೂರ್ತಕ್ಕೆ ಸರಿಯಾಗೇ ನೆರವೇರಿದೆ.
ಸೋಮಣ್ಣ ಅವರಿಗೆ ಅರುಣ್ ಹಾಗೂ ನವೀನ್ ಎಂಬ ಇಬ್ಬರು ಗಂಡು ಮಕ್ಕಳು ಹಾಗೂ ದಿವ್ಯಾ ಬಿಎಸ್ ಎಂಬ ಪುತ್ರಿ ಇದ್ದಾರೆ.
ನಗರದ ಅರಮನೆ ಮೈದಾನದಲ್ಲಿರುವ ವಸಂತ್ ವಿಹಾರ್ ಸಭಾಂಗಣದಲ್ಲಿ ನಡೆದ ಈ ವಿವಾಹಕ್ಕೆ ಮುಂಜಾನೆಯೇ ಆಗಮಿಸಿದ್ದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ನೂತನ ವಧುವರರನ್ನು ಆಶೀರ್ವದಿಸಿದ್ದಾರೆ.
ಆದರೆ, ಬೆಂಕಿ ಆಕಸ್ಮಿಕದಿಂದ ಕೆಲ ಕಾಲ ವಿಚಲಿತರಾಗಿದ್ದ ಸೋಮಣ್ಣ ಅವರು ಇಟ್ಟ ಮುಹೂರ್ತ ಹಾಗೂ ಉಂಟಾದ ವಿಘ್ನದ ಬಗ್ಗೆ ತಲೆ ಕೆಡಿಸಿಕೊಂಡಿದ್ದು ಕಂಡು ಬಂದಿತು.
ಆದರೆ, ಮದುವೆಗೆ ಯಾವುದೇ ತೊಂದರೆ ಇಲ್ಲ. ಮುಹೂರ್ತಕ್ಕೆ ಸರಿಯಾಗಿ ವಿವಾಹ ಬಂಧನ ಕಾರ್ಯ ನೆರವೇರಿಸಬಹುದು ಎಂದು ಋತ್ವಿಕರು ಆಶ್ವಾಸನೆ ಕೊಟ್ಟ ಮೇಲೆ ಸೋಮಣ್ಣ ಅವರು ಕೊಂಚ ರಿಲ್ಯಾಕ್ಸ್ ಆದರು.
ಸೋಮವಾರ ಸಂಜೆ ಇದೇ ಮಂಟಪದಲ್ಲಿ ಅರುಣ್ ಹಾಗೂ ಬೀನಾ ಅವರ ಮದುವೆ ಆರತಕ್ಷತೆ ಸಮಾರಂಭ ನಡೆಯಲಿದ್ದು, ನಾಡಿನ ವಿವಿಧ ಕ್ಷೇತ್ರದ ಗಣ್ಯರು ಆಗಮಿಸುವ ನಿರೀಕ್ಷೆಯಿದೆ.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಆಗಮನದ ನಿರೀಕ್ಷೆಯಿದೆಯಾದರೂ ಉತ್ತರ ಕರ್ನಾಟಕ ಪ್ರವಾಸದಲ್ಲಿರುವುದರಿಂದ ಸಮಯಕ್ಕೆ ಸರಿಯಾಗಿ ತಲುಪುವ ಸಾಧ್ಯತೆ ಕಮ್ಮಿ ಎನ್ನಲಾಗಿದೆ.
ಹೀಗಾಗಿ ವಿವಾಹ ಮಹೋತ್ಸವಕ್ಕೆ ಗೈರು ಹಾಜರಾದ ಗಣ್ಯರು ಅದರಲ್ಲೂ ವೀರಶೈವ ಮುಖಂಡರು, ಸ್ವಾಮೀಜಿಗಳ ಸನ್ನಿಧಾನಕ್ಕೆ ನಂತರ ತೆರಳಿ ಆಶೀರ್ವಾದ ಬೇಡುವ ಕಾರ್ಯಕ್ರಮವನ್ನು ಸೋಮಣ್ಣ ಹಾಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.