ಮಡಿಕೇರಿ : ಪುತ್ರ ವ್ಯಾಮೋಹಕ್ಕೆ ಇಡೀ ಕುಟುಂಬ ಬಲಿ
ಮೂಲತಃ ತಮಿಳುನಾಡಿನ ಕುಟುಂಬವಾಗಿದ್ದು, ಕೆಲಸದ ನಿಮಿತ್ತ ಕೊಡಗಿನ ಪಳ್ಳಕೆರೆಯಲ್ಲಿ ಬಂದು ನೆಲೆಸಿ ಬಹಳ ವರ್ಷಗಳೇ ಕಳೆದಿವೆ. ಎಸ್ಟೇಟ್ನಲ್ಲಿ ಕೆಲಸ ಮಾಡುತ್ತಿದ್ದುದರಿಂದ ಯಾವುದೇ ತೊಂದರೆಯಿಲ್ಲದೆ ಜೀವನ ನಡೆಯುತ್ತಿತ್ತು. ಆದರೆ ಮನೆಯ ಯಜಮಾನ ಮುರುಗ(43) ಎಂಬಾತನಿಗೆ ಕಳೆದ ಹದಿನೇಳು ವರ್ಷಗಳ ಹಿಂದೆ ವಿಜಯ(38)ಳನ್ನು ಮದುವೆಯಾಗುವಾಗ ಇಲ್ಲದ ರೋಗ ಇತ್ತೀಚೆಗೆ ಆತನನ್ನು ಅಂಟಿಕೊಂಡಿತ್ತು. ಅದೇನು ಅಂದ್ರೆ ಮೊದಲನೆಯದು ಕುಡಿತ, ಎರಡನೆಯದು ಗಂಡು ಮಗುವಿನ ವ್ಯಾಮೋಹ. ಮುರುಗನ ಈ ಹುಚ್ಚಾಟದಿಂದ ಪತ್ನಿ ಬೇಸತ್ತು ಹೋಗಿದ್ದಳು.
ಹಾಗೆ ನೋಡಿದರೆ ಮುರುಗ ವಿಜಯಳನ್ನು ಮದುವೆಯಾಗುವಾಗ ಒಳ್ಳೆಯವನಾಗಿಯೇ ಇದ್ದ. ಇವರ ಸುಖ ದಾಂಪತ್ಯದ ಫಲವಾಗಿ ವರ್ಷ ತುಂಬುವುದರೊಳಗಾಗಿ ವಿಜಯ ಗರ್ಭಿಣಿಯಾಗಿ ಹೆಣ್ಣು ಮಗುವಿಗೆ ಜನ್ಮನೀಡಿದ್ದಳು. ಆಗ ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ಮುರುಗನಿಗೆ ನಿರಾಶೆಯಾಗಿತ್ತು. ಮುಂದೆ ನೋಡಿದರಾಯಿತು ಎಂದು ಸುಮ್ಮನಾಗಿದ್ದನು. ಮೂರ್ನಾಲ್ಕು ವರ್ಷ ಕಳೆದ ಮೇಲೆ ವಿಜಯ ಮತ್ತೆ ಗರ್ಭಿಣಿಯಾಗಿದ್ದಳು ಆಗಲೂ ಗಂಡು ಮಗುವಾಗುತ್ತೆ ಎಂಬ ವಿಶ್ವಾಸದಲ್ಲಿದ್ದ ಮುರುಗನಿಗೆ ಮತ್ತೆ ನಿರಾಶೆಯಾಗಿತ್ತು.
ಯಾವಾಗ ಎರಡು ಮಕ್ಕಳು ಹೆಣ್ಣಾದವೋ ಮುರುಗನಿಗೆ ಪಿತ್ತ ನೆತ್ತಿಗೇರಿತ್ತು. ತಮಿಳುನಾಡಿನಲ್ಲಿ ಹೆಣ್ಣು ಮಕ್ಕಳಿಗೆ ವರದಕ್ಷಿಣೆ ಕೊಡಬೇಕಾಗಿರುವುದರಿಂದ ತಾನು ಎಲ್ಲಿಂದ ಹಣ ಸಂಪಾದಿಸುವುದು ಎಂಬ ಭಯ ಅವನನ್ನು ಕಾಡತೊಡಗಿತ್ತು. ತನಗೆ ನಿರ್ದಿಷ್ಟ ಕೆಲಸವಿಲ್ಲದಿದ್ದರೂ ಮದುವೆ ಸಂದರ್ಭ ಮಾವನ ಮನೆಯವರಿಂದ ವರದಕ್ಷಿಣೆ ಪಡೆದಿದ್ದ ಮುರುಗ ಈಗ ತನಗೂ ಹೆಣ್ಣು ಮಕ್ಕಳು ಹುಟ್ಟಿದಾಗ ಮುಂದೆ ತಾನು ಕೂಡ ವರದಕ್ಷಿಣೆ ಕೊಡಬೇಕಲ್ವಾ ಎಂದು ಚಿಂತಿಸತೊಡಗಿದ್ದನು. ಆ ನಂತರ ಹೆಂಡತಿ ವಿಜಯ ಎರಡು ಮಕ್ಕಳು ಸಾಕು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಕೊಳ್ಳೋಣ ಎಂದಾಗ ಮುರುಗ ಒಪ್ಪಿರಲಿಲ್ಲ. ಇಲ್ಲ ಇನ್ನೊಂದು ಗಂಡು ಮಗು ಬೇಕೆಂದು ಹಠ ಹಿಡಿದಿದ್ದನು.
ಆದರೆ ಮೂರನೆಯ ಮಗುವೂ ಹೆಣ್ಣಾಗಿತ್ತು. ಇದರಿಂದ ಮುರುಗ ಮತ್ತಷ್ಟು ಕೆರಳಿ ಹೋದ. ದುಡಿದ ಸಂಪಾದನೆಯಲ್ಲಿ ಕುಡಿದು ಮನೆಗೆ ಬರುತ್ತಿದ್ದ ಆತ ಹೆಂಡತಿಯೊಂದಿಗೆ ಕಲಹಕ್ಕಿಳಿದು ಬಿಡುತ್ತಿದ್ದ. ವಿಷ ಹಾಕಿ ಸಾಯಿಸುವುದಾಗಿ ಬೆದರಿಸಲು ಪ್ರಾರಂಭಿಸಿದ. ತನಗೆ ವಿಷ ಹಾಕಿ ಕೊಂದರೆ ಮಕ್ಕಳೆಲ್ಲಿ ಅನಾಥವಾಗಿಬಿಡುತ್ತವೋ ಎಂದು ಹೆದರಿದ ವಿಜಯ ಮಕ್ಕಳಿಗೆ ಅನ್ನದಲ್ಲಿ ವಿಷ ಬೆರೆಸಿ ಉಣ್ಣಿಸಿ ತಾನೂ ಉಂಡಿದ್ದಾಳೆ. ಹಿರಿಯ ಮಗಳು ಹಾಗೂ ಕೊನೆಯ ಮಗಳು ಗೀತಾ(10) ಸಾವನ್ನಪ್ಪಿದ್ದಾರೆ. ರೇವತಿ(16) ಹಾಗು ಎರಡನೆಯ ಮಗಳು ಮೀನಾ(12)ರನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದ್ದು ಅವರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.