ಜಗನ್ ಬಾಕಿ ಪ್ರಕರಣ ಮೊತ್ತ 3000 ಕೋಟಿ ರು!
ಈ ನಡುವೆ ಸುಪ್ರೀಂಕೋರ್ಟಿಗೆ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಅಕ್ರಮ ಅಸ್ತಿ ಪ್ರಕರಣದ ಬಗ್ಗೆ ಸಿಬಿಐ ತಂಡ ಮಾಹಿತಿ ನೀಡಿದೆ.
ಬಾಕಿ ಉಳಿದಿರುವ 7 ಪ್ರಕರಣಗಳ ಮೊತ್ತ ಸುಮಾರು 3000 ಕೋಟಿ ರು ದಾಟುತ್ತದೆ ಎಂದು ಸಿಬಿಐ ಹೇಳಿದೆ. ಹಾಗಾದರೆ ಸಮಸ್ತ ಆಸ್ತಿ ಲೆಕ್ಕಾಚಾರ ಇನ್ನೂ ಬಹಿರಂಗಗೊಂಡಿಲ್ಲ ಎನ್ನಬಹುದಾಗಿತ್ತು. ಹಲವು ಸಾವಿರ ಕೋಟಿ ಮೊತ್ತದ ಆಸ್ತಿ ಒಡೆಯ ಜಗನ್ ಎಂದು ನಿಸ್ಸಂಶಯವಾಗಿ ಹೇಳಬಹುದು.
ಜಗನ್ 16,97,335 ಕೋಟಿ ರು ತೂಗುತ್ತಾರೆ ಎಂದು ತೆಲುಗುದೇಶಂ ಪಾರ್ಟಿ ಆರೋಪ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
2004 ರಿಂದ 2009 ತನಕ ವೈಎಸ್ ರಾಜಶೇಖರ ರೆಡ್ಡಿ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಬೇನಾಮಿ ಕಂಪನಿಗಳಿಗೆ ಬಂಡವಾಳ ಹೂಡಿಕೆ ನೆಪದಲ್ಲಿ ಹಣ ಹರಿಸಿರುವ ಬಗ್ಗೆ ಮಾಹಿತಿಯನ್ನು ನೀಡಲಾಗಿದೆ.
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಂತಿಮ ಚಾರ್ಚ್ ಶೀಟ್ ಕೋರ್ಟಿಗೆ ಸಲ್ಲಿಸಲು ಇನ್ನೂ ಕಾಲಾವಕಾಶ ಬೇಕಿದೆ ಎಂದು ಸಿಬಿಐ ಹೇಳಿದೆ.
ಸುಮಾರು 7 ಪ್ರಕರಣಗಳಲ್ಲಿ ಸೇರಿಸಿ ಚಾರ್ಚ್ ಶೀಟ್ ಹಾಕಬೇಕಾಗುತ್ತದೆ. ಸಂಡೂರು ಪವರ್ ಕಂಪನಿ, ಭಾರತಿ ರಘುರಾಮ್ ಸಿಮೆಂಟ್ಸ್, ಇಂಡಿಯಾ ಸಿಮೆಂಟ್ಸ್, ಪೆನ್ನಾ ಸಿಮೆಂಟ್ಸ್, ದಾಲ್ಮಿಯಾ ಸಿಮೆಂಟ್ಸ್, ಇಂಡಿಯಾ ಸಿಮೆಂಟ್ಸ್ ಹಾಗು ಕೋಲ್ಕತ್ತಾ ಭ್ರೀಫ್ ಕೇಸ್ ಕಂಪನಿ ಅಕ್ರಮ ಗಳಿಕೆ ಬಗ್ಗೆ ಚಾರ್ಚ್ ಶೀಟ್ ಹಾಕಿಲ್ಲ. ಲೇಪಾಕ್ಷಿ ನಾಲೆಡ್ಜ್ ಪಾರ್ಕ್ ಮುಂತಾದ ಕಂಪನಿಗಳ ಮೂಲಕ ಗಳಿಸಿದ ಅಕ್ರಮ ಆಸ್ತಿಗಳ ವಿವರ ಸಂಗ್ರಹಿಸಲಾಗಿದೆ ಎಂದು ಸಿಬಿಐ ತಿಳಿಸಿದೆ.
ತನಿಖೆ ಪೂರ್ಣಗೊಳಿಸಿ ದೋಷಾರೋಪಣ ಪಟ್ಟಿ ದಾಖಲಿಸಲು ಸಿಬಿಐ ತಂಡ ಯಾವುದೇ ಕಾಲಮಿತಿಯನ್ನು ಹಾಕಿಕೊಂಡಿಲ್ಲ. ಇನ್ನೂ ಜಗನ್ ಅವರ ಬೇನಾಮಿ ಕಂಪನಿಗಳ ಪಟ್ಟಿ ತುಂಬಾ ದೊಡ್ಡದಿದೆ ಎಂದು ಸಿಬಿಐ ನಿರ್ದೇಶಕ ವಿವಿ ಲಕ್ಷ್ಮಿನಾರಾಯಣ ಹೇಳಿದ್ದಾರೆ.
ಮಾರ್ಚ್ ತನಕ ಜೈಲುವಾಸ ಖಾಯಂ: ವೈಎಸ್ ಜಗನ್ ಅವರ ಅಕ್ರಮ ಆಸ್ತಿ ಪ್ರಕರಣ ಕುರಿತು ಸಂಪೂರ್ಣ ದೋಷಾರೋಪಣ ಪಟ್ಟಿ ಸಲ್ಲಿಸಲು 2013ರ ಮಾರ್ಚ್ ತನಕ ಸಿಬಿಐ ತಂಡಕ್ಕೆ ಕಾಲಾವಕಾಶ ವಿಧಿಸಲಾಗಿದೆ. ಹೀಗಾಗಿ ಕನಿಷ್ಠ ಮುಂದಿನ ಮಾರ್ಚ್ ತನಕ ಜಗನ್ ಜೈಲಿನಲ್ಲಿ ಉಳಿಯುವುದು ಖಾಯಂ ಎನ್ನಬಹುದು.
ಆದರೂ ಚಾನ್ಸ್ ಇದೆ: ಕಡಪ ಸಂಸದ ಜಗನ್ ಅವರ ಲಾಯರ್ ಪ್ರಕಾರ ಸಿಆರ್ ಪಿಸಿ 167(2) ಪ್ರಕಾರ ದಾಖಲಿಸಿಕೊಂಡಿರುವ ಪ್ರಕರಣದಲ್ಲಿ ನನ್ನ ಕಕ್ಷಿದಾರರಿಗೆ ಜಾಮೀನು ಪಡೆಯುವ ಎಲ್ಲಾ ಅರ್ಹತೆಗಳಿದೆ. ಸಿಬಿಐ ತಂಡ ಬಂಧನವಾಗಿ ನಿಗದಿತ 90 ದಿನಗಳಲ್ಲಿ ಚಾರ್ಚ್ ಶೀಟ್ ಸಲ್ಲಿಸಲು ವಿಫಲವಾಗಿದ್ದು ಜಗನ್ ಗೆ ವರದಾನವಾಗುವ ಸಾಧ್ಯತೆಯಿದೆ.
ನಾಂಪಲ್ಲಿಯ ಸಿಬಿಐ ಕೋರ್ಟ್ ಸಿಆರ್ ಪಿಸಿ 437 ಅಡಿಯಲ್ಲಿ ದಾಖಲಾದ ಇನ್ನೊಂದು ಪ್ರಕರಣದ ಜಾಮೀನು ಅರ್ಜಿ ವಿಚಾರಣೆಯನ್ನು ನ.30ಕ್ಕೆ ಮುಂದೂಡಿದೆ.