ಹೊಸ ಬೆಂಗಳೂರು ವಿವಿಗೆ ಡಿವಿ ಗುಂಡಪ್ಪ ಹೆಸರು
ಕಳೆದ ವಾರ ದೆಹಲಿಗೆ ಪ್ರಯಾಣಿಸುತ್ತಿದ್ದಾಗ ಈ ರೀತಿ ಆಲೋಚನೆ ಬಂತು, ತಕ್ಷಣವೇ ಸಾಹಿತಿಗಳು, ಶಿಕ್ಷಣತಜ್ಞರ ಜೊತೆ ಸಮಾಲೋಚನೆ ನಡೆಸಿದೆ. ಎಲ್ಲರೂ ಡಿವಿಜಿ ಅವರ ಹೆಸರು ಸೂಕ್ತವಾಗಿದೆ ಎಂದರು ಎಂದು ಸಚಿವ ರವಿ ಹೇಳಿದರು.
ಹೋಸಕೋಟೆ ಸಮೀಪದ ದೇವನಹಳ್ಳಿ ಮೂಲದ ಡಿವಿ ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗ, ಕನ್ನಡ ಭಗವದ್ಗೀತೆ ಎಂದೇ ಲೋಕಖ್ಯಾತಿ ಗಳಿಸಿದೆ. ಕವಿ, ದಾರ್ಶನಿಕ, ಸಾಹಿತಿ, ಸಮಾಜ ಸೇವಕ, ಪತ್ರಕರ್ತ ಹೀಗೆ ನಾನಾ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ ಡಿವಿ ಗುಂಡಪ್ಪ ಅವರ ಹೆಸರು ವಿವಿಗೆ ಇಡುವ ಮೂಲಕ ಅವರಿಗೆ ಸೂಕ್ತ ಗೌರವ ಸಲ್ಲಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಚಿವ ಸಿಟಿ ರವಿ ಹೇಳಿದರು.
ಈ ವಾರದೊಳಗೆ ಬೆಂಗಳೂರು ವಿಶ್ವ ವಿದ್ಯಾಲಯ ಭಾಗವಾಗಲಿದೆ. ಶಿಕ್ಷಣ ತಜ್ಞರು ಈ ಬಗ್ಗೆ ಕಾರ್ಯಪ್ರವೃತ್ತರಾಗಿದ್ದಾರೆ. ವಾರಾಂತ್ಯದೊಳಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಹೇಳಿದೆ.
ವಿವಿ ಒಡೆಯುತ್ತಿರುವುದೇಕೆ?: ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಒಳಪಡುವ ಕಾಲೇಜುಗಳ ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಅತಿ ಹೆಚ್ಚಾಗಿರುವ ಹಿನ್ನಲೆಯಲ್ಲಿ ವಿಶ್ವವಿದ್ಯಾಲಯವನ್ನು ಎರಡು ಪ್ರತ್ಯೇಕ ವಿ.ವಿ.ಗಳನ್ನಾಗಿ ವಿಭಜನೆ ಮಾಡಲು ಈ ಹಿಂದಿನ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಯೋಜಿಸಿದ್ದರು.
ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರ ಕಾಲದಲ್ಲಿ ಎನ್ ರುದ್ರಯ್ಯ ಸಮಿತಿ ಮಾಡಿದ್ದ ಶಿಫಾರಸ್ಸಿನ ಅನ್ವಯ ಈ ವಿಭಜನೆ ಕಾರ್ಯಕ್ಕೆ ಸರ್ಕಾರ ಮುಂದಾಗಿತ್ತು.
ಸದ್ಯ ಬೆಂಗಳೂರು ವಿವಿ ವ್ಯಾಪ್ತಿಗೆ ಸುಮಾರು 760ಕ್ಕೂ ಹೆಚ್ಚು ಕಾಲೇಜುಗಳು ಒಳಪಡುತ್ತವೆ. ವಿದ್ಯಾರ್ಥಿಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಇದರಿಂದ ಶಿಕ್ಷಣ ಗುಣಮಟ್ಟ ಕಾಪಾಡಿಕೊಳ್ಳಲು, ಪರೀಕ್ಷೆ ನಡೆಸಲು ಕೂಡಾ ಕಷ್ಟವಾಗುತ್ತಿದೆ. 250 ಕಾಲೇಜುಗಳಿಗೆ ಒಂದು ವಿ.ವಿಯನ್ನು ತೆರೆಯಲು ಚಿಂತನೆ ನಡೆಸಲಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿದೆ.
ಎಲ್ಲೆಲ್ಲಿ?: ಕೋಲಾರ ಮತ್ತು ಚಿಕ್ಕಬಳ್ಳಾಪುರ ವ್ಯಾಪ್ತಿಗೆ ಹೊಸಕೋಟೆ ಸಮೀಪ ಒಂದು ವಿಶ್ವ ವಿದ್ಯಾಲಯ, ಬಿಬಿಎಂಪಿ ವ್ಯಾಪ್ತಿಗೆ ಮತ್ತೊಂದು ಎಂದು ಯೋಜಿಸಲಾಗಿದೆ. ಬೆಂಗಳೂರು ಉತ್ತರ ಹಾಗೂ ದಕ್ಷಿಣ ವಿಶ್ವ ವಿದ್ಯಾಲಯ ಎಂದು ಹೆಸರಿಸುವ ಸಾಧ್ಯತೆಯಿತ್ತು. ಈಗ ಬೆಂಗಳೂರು ಉತ್ತರ ಬದಲು ಡಿವಿ ಗುಂಡಪ್ಪ ವಿಶ್ವ ವಿದ್ಯಾಲಯ ಎಂದು ಹೆಸರಿಸಲು ನಿರ್ಧರಿಸಲಾಗಿದೆ.