ಫೇಸ್ ಬುಕ್ ವಿವಾದ, ಪೊಲೀಸ್ ಅಮಾನತು, ಶಿವಸೇನೆ ಬಂದ್
ಮಹಾರಾಷ್ಟ್ರದ ಪಲ್ ಘರ್ ಪ್ರದೇಶದಲ್ಲಿ ಸಂಪೂರ್ಣ ಬಂದ್ ಆಚರಿಸಲಾಗುತ್ತಿದೆ. ಫೇಸ್ ಬುಕ್ ಕಾಮೆಂಟ್ ವಿವಾದದಲ್ಲಿ ಯುವತಿಯರ ಬಂಧನ ಕ್ರಮವನ್ನು ಶಿವಸೇನಾ ಸಮರ್ಥಿಸಿಕೊಂಡಿದೆ. ಬಾಳಾ ಠಾಕ್ರೆ ಅವರಿಗೆ ಅಪಮಾನ ಮಾಡಿದರೆ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದೆ. ಈ ಮೂಲಕ ಶಿವಸೇನಾ ಅಸ್ತಿತ್ವ ಇನ್ನೂ ಪ್ರಬಲವಾಗಿ ಇದೇ ಎಂಬುದನ್ನು ತೋರಿಸಲು ಬಂದ್ ಆಚರಣೆಗೆ ಕರೆ ನೀಡಲಾಗಿದೆ.
ಫೇಸ್ ಬುಕ್ ಕಾಮೆಂಟ್ ಹಾಕಿದ್ದ ಯುವತಿ ಶಹೀನ್ ದಾಡ ಹಾಗೂ ಕಾಮೆಂಟ್ ಲೈಕ್ ಮಾಡಿದ್ದ ಆಕೆ ಗೆಳೆತಿ ರೇಣು ಶ್ರೀನಿವಾಸನ್ ಇಬ್ಬರಿಗೆ ಜಾಮೀನಿನ ಮೇಲೆ ಬಿಡುಗಡೆ ಸಿಕ್ಕಿದೆ. ಇಬ್ಬರು ತಲಾ 15,000 ರು ದಂಡ ಕಟ್ಟಿ ಜೈಲಿನಿಂದ ಹೊರಬಂದಿದ್ದರು.
ಈ ಬಂಧನವನ್ನು ಖಂಡಿಸಿ ವ್ಯಾಪಕ ಟೀಕೆಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಮಹಾರಾಷ್ಟ್ರ ಸರ್ಕಾರ, ಮಂಗಳವಾರ(ನ.28) ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿ, ಮ್ಯಾಜಿಸ್ಟ್ರೇಟ್ ರನ್ನು ಎತ್ತಂಗಡಿ ಮಾಡಿತ್ತು.
ಥಾಣೆ(ಗ್ರಾಮೀಣ) ಠಾಣೆ ಎಸ್ಪಿ ರವೀಂದ್ರ ಸೆಂಗಾಂವ್ಕರ್ ಹಾಗೂ ಹಿರಿಯ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಕಾಮ್ತ್ ಪಿಂಗ್ಳೆ ಅವರನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ ಎಂದು ಮಹಾರಾಷ್ಟ್ರ ಗೃಹಸಚಿವ ಆರ್ ಆರ್ ಪಾಟೀಲ್ ಹೇಳಿದ್ದರು.
ಯುವತಿಯರಾದ ಶಹೀನ್ ದಾಡ ಹಾಗೂ ರೇಣು ಶ್ರೀನಿವಾಸನ್ ಅವರ ಬಂಧನ ಹಾಗೂ ಜಾಮೀನು ಆದೇಶ ನೀಡಿದ್ದ ಜುಡೀಶಿಯಲ್ ಮ್ಯಾಜಿಸ್ಟ್ರೇಟ್ ಆರ್ ಜಿ ಬಗಾಡೆ ಅವರನ್ನು ಬಾಂಬೆ ಹೈಕೋರ್ಟಿಗೆ ಎತ್ತಂಗಡಿ ಮಾಡಲಾಗಿದೆ.
ಯುವತಿಯ ಸಂಬಂಧಿಕರೊಬ್ಬರ ಕ್ಲಿನಿಕ್ ಮೇಲೆ ದಾಳಿ ಮಾಡಿದ ಆರೋಪದ ಮೇಲೆ ಸುಮಾರು 9 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಬಂಧಿತರೆಲ್ಲರೂ ಶಿವಸೇನೆ ಕಾರ್ಯಕರ್ತರೇ? ಎಂಬುದನ್ನು ಪೊಲೀಸರು ಸ್ಪಷ್ಟಪಡಿಸಿಲ್ಲ.
ಫೇಸ್ ಬುಕ್ ಕಾಮೆಂಟ್, ಲೈಕ್ ಮಾಡಿದ್ದಕ್ಕೆ ಯುವತಿಯರನ್ನು ಬಂಧಿಸಿದ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಚೇರ್ಮನ್ ಮಾರ್ಕಂಡೇಯ ಕಟ್ಜು ಅವರು ತೀವ್ರವಾಗಿ ಖಂಡಿಸಿದ್ದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ಅವರಿಗೆ ಪತ್ರ ಬರೆದಿರುವ ಕಟ್ಜು, ಪೊಲೀಸರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದರು. ನಂತರ ಮಹಾರಾಷ್ಟ್ರ ಸರ್ಕಾರ ಮೇಲ್ಕಂಡ ಕ್ರಮ ಜರುಗಿಸಿತ್ತು.
ಬಾಳಾ ಠಾಕ್ರೆ ಅಂತಿಮ ಯಾತ್ರೆಯಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ ಜನ ಭಾಗಿಯಾಗಿದ್ದರು. 1 ಲಕ್ಷ ಆಟೋ, 30 ಸಾವಿರ ಟ್ಯಾಕ್ಸಿಗಳು ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ದೈನಂದಿನ ಚಟುವಟಿಕೆಗಳಿಗೆ ತೊಂದರೆ ಉಂಟಾಗಿತ್ತು.
ಇದನ್ನು ಖಂಡಿಸಿ 21 ವರ್ಷದ ಯುವತಿ ಫೇಸ್ ಬುಕ್ ನಲ್ಲಿ "Thackeray are born and die daily and one should not observe a bandh for that",ಎಂದು ಸ್ಟೇಟಸ್ ಹಾಕಿದ್ದಳು. ಇದನ್ನು ಆಕೆ ಗೆಳತಿಯೊಬ್ಬಳು ಲೈಕ್ ಮಾಡಿದ್ದಳು. ಈಗ ಇಬ್ಬರು ಪೊಲೀಸರ ಅತಿಥಿಯಾಗಿದ್ದರು.