ಸಿರಿವಂತ ಶಾಸಕನ ಮೇಲೆ 'ಕೈ' ಇಟ್ಟ ಕಾಂಗ್ರೆಸ್, ಕೆಜೆಪಿ
ಒಂದು ಬಾರಿ ಲೋಕಾಯುಕ್ತ ದಾಳಿಗೂ ತುತ್ತಾಗಿ ಹಣ್ಣಾಗಿರುವ ಶಾಸಕ ವಿಶ್ವನಾಥ್ ಅವರು ಬಿಜೆಪಿ ಸಹವಾಸ ಸಾಕು ಎಂದು ಕಾಂಗ್ರೆಸ್ ಸೇರುತ್ತಿದ್ದಾರೆ. ಅವರಿಗೆ ಸೂಕ್ತ ರಕ್ಷಣೆ ನೀಡಲು ಎಲ್ಲಾ ರೀತಿ ವ್ಯವಸ್ಥೆ ಆಗಿದೆ ಎಂಬ ಸುದ್ದಿ ಹಬ್ಬಿತ್ತು.
ಆದರೆ, ತಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸೇರುವುದಿಲ್ಲ ಎಂದು ಶಾಸಕ ಎಸ್.ಆರ್ ವಿಶ್ವನಾಥ್ ಹೇಳಿದ್ದಾರೆ.
ದಿವಂಗತ ಪ್ರಧಾನಿ ಇಂದಿರಾಗಾಂಧಿ ಅವರು ರಾಷ್ಟ್ರದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿ ವಿರೋಧಿಸಿ ನಾನು ರಾಷ್ಟ್ರೀಯ ಸ್ವಯಂ ಸೇವಕರ ಸಂಘ ಸೇರಿದ್ದೆ. ನಾನು ಪಕ್ಕಾ ಆರೆಸ್ಸೆಸ್ ಹಿಂಬಾಲಕ ಹೀಗಾಗಿ ಕಾಂಗ್ರೆಸ್ ಪಕ್ಷದ ಆಮಿಷಕ್ಕೆ ಬಲಿಯಾಗಲಾರೆ ಎಂದು ವಿಶ್ವನಾಥ್ ಹೇಳಿದ್ದಾರೆ.
34 ವರ್ಷದಿಂದ ಆರೆಸ್ಸೆಸ್ ಹಾಗೂ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದೇನೆ. ಯಲಹಂಕ ಕ್ಷೇತ್ರದಲ್ಲಿ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯ ನೋಡಿ ಕಾಂಗ್ರೆಸ್ ಗೆ ಸಹಿಸಲಾಗುತ್ತಿಲ್ಲ. ಅಲ್ಲದೆ, ಕ್ಷೇತ್ರಕ್ಕೆ ಸೂಕ್ತ ಅಭ್ಯರ್ಥಿ ಹುಡುಕಲು ಆಗದೆ ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ವಿಶ್ವನಾಥ್ ಕಿಡಿಕಾರಿದರು.
ಬಿಜೆಪಿಯಿಂದ ಸುಮಾರು 12-15 ಜನ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿರುವುದೆಲ್ಲ ಸುಳ್ಳು.. ಬಿಜೆಪಿಗೆ ಅಲ್ಲಿಂದ 12 ಶಾಸಕರು ಬಂದರೆ ಸ್ವಾಗತ ಎಂದು ವಿಶ್ವನಾಥ್ ಹೇಳಿದರು.
ಯಾರಿತ ವಿಶ್ವನಾಥ್: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಸೇರಿದ ಬೆಂಗಳೂರು ಉತ್ತರದಲ್ಲಿರುವ ಯಲಹಂಕ ಅಸೆಂಬ್ಲಿ ಕ್ಷೇತ್ರದ ಜನಪ್ರತಿನಿಧಿ ವಿಶ್ವನಾಥ್ ಅವರ ಅಕ್ರಮ ಆಸ್ತಿ ವಿವರವನ್ನು ಲೋಕಾಯುಕ್ತ ಪೊಲೀಸರು ಜಗಜ್ಜಾಹೀರು ಮಾಡಿದ್ದರು.
ಎಸ್ಆರ್ ವಿಶ್ವನಾಥ್ ಯಲಹಂಕ, ಹೆಬ್ಬಾಳ, ಹೆಸರಘಟ್ಟ, ದೊಡ್ಡಬಳ್ಳಾಪುರ ಅದರಾಚೆ ಗೌರಿಬಿದನೂರು ಹೀಗೆ ಎಲ್ಲೆಲ್ಲಿ ನೆಲ ಕಾಣೊತ್ತೋ ಅಲ್ಲೆಲ್ಲ ಸ್ಥಿರಾಸ್ತಿ ಮಾಡಿಟ್ಟಿದ್ದಾರೆ.
ಎಚ್ಎಎಲ್ ನಲ್ಲಿ ಉದ್ಯೋಗಿಯಾಗಿದ್ದುಕೊಂಡು ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಸುಳ್ಳು ಮಾಹಿತಿ ನೀಡಿ 'ಜಿ' ಕೆಟಗರಿ ಸೈಟ್ ಹೊಡೆದ ಸಾಧನೆ ಮಾಡಿದ್ದಾರೆ. ಇವರ ಆಸ್ತಿ ಸುಮಾರು 40 ಕೋಟಿ ಎಂದು ಸದ್ಯದ ಅಂದಾಜು.
ಯಡಿಯೂರಪ್ಪನವರ ಪರಮಾಪ್ತ ಶಾಸಕರಾದ ಎಸ್ ಆರ್ ವಿಶ್ವನಾಥ್ ಅವರು ಪತ್ನಿಯ ಹೆಸರಿನಲ್ಲಿ ಪೆಟ್ರೋಲ್ ಬಂಕ್ ಮತ್ತಿತರ ಆಸ್ತಿ ಮಾಡಿದ್ದಾರೆ. ಬೇನಾಮಿಯಾಗಿ ವಿದೇಶಿ ಕಾರು ಹೊಂದಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ತಾವು ಸಲ್ಲಿಸಿರುವ 5 ಸಾವಿರ ಪುಟಗಳ ಆರೋಪಪಟ್ಟಿಯಲ್ಲಿ ದಾಖಲಿಸಿದ್ದಾರೆ.
ಇಷ್ಟೆಲ್ಲ ಸ್ಥಿತಿವಂತರಾಗಿರುವ ವಿಶ್ವನಾಥ್ ಅವರು ಹಗರಣ ಮುಕ್ತಿ, ಆಮಿಷಕ್ಕೆ ಬಲಿಯಾಗಿ ಕಾಂಗ್ರೆಸ್ ಸೇರುವುದು ದೂರದ ಮಾತು. ಪಕ್ಷ, ಸಿದ್ಧಾಂತ ನಿಷ್ಠೆ ಅಥವಾ ವ್ಯಕ್ತಿ ನಿಷ್ಠೆ ಎರಡರಲ್ಲಿ ಯಾವುದು ಮುಖ್ಯವಾಗುತ್ತದೆಯೋ ಅದರಂತೆ ಬಿಜೆಪಿ ಅಥವಾ ಕೆಜೆಪಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯೇ ಜಾಸ್ತಿ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.