ಮಹಿಳೆಯರನ್ನು ಗೌರವಿಸದ ಪಕ್ಷಗಳನ್ನು ತಿರಸ್ಕರಿಸಿ
ಮುಂಬರುವ ಚುನಾವಣೆಯಲ್ಲಿ ಈ ಎರಡು ರಾಷ್ಟ್ರೀಯ ಪಕ್ಷಗಳನ್ನು ಮತದಾರರು ತಿರಸ್ಕರಿಸಬೇಕಿದೆ. ಈ ಮೂಲಕ ತಕ್ಕ ಪಾಠ ಕಲಿಸಬೇಕಿದೆ ಎಂದು ಚಿತ್ರ ನಟಿ ಹಾಗೂ ಜೆಡಿಎಸ್ ಮುಖಂಡರಾದ ಮಾಳವಿಕಾ ಅವಿನಾಶ್ ಹೇಳಿದ್ದಾರೆ.
ಮದ್ದೂರು ತಾಲೂಕಿನ ಕೊಪ್ಪದ ಸರಕಾರಿ ಶಾಲಾ ಆವರಣದಲ್ಲಿ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ವತಿಯಿಂದ ನಡೆದ ನಾಗಮಂಗಲ ವಿಧಾನಸಭಾ ಕ್ಷೇತ್ರದ 'ಮಹಿಳೆಯರ ಪ್ರಗತಿ ಗಾಗಿ ಬೃಹತ್ ಮಹಿಳಾ ಸಮಾವೇಶ' ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಾರ್ಚ್ 02, 2012 ರಂದು ಮಾಳವಿಕಾ ಜೆಡಿಎಸ್ ಪಕ್ಷ ಸೇರಿಕೊಂಡು ಅದರ ಪ್ರಾಥಮಿಕ ಸದಸ್ಯತ್ವ ಪಡೆದರು. ಈಗ ಜೆಡಿಎಸ್ ಪಕ್ಷದ ನೂತನ ಕಾರ್ಯದರ್ಶಿಯಾಗಿ ಇತ್ತೀಚೆಗೆ ಆಯ್ಕೆಯಾಗಿದ್ದರು.
ಮಾಳವಿಕಾ ನಂತರ ಜೆಡಿಎಸ್ ಪಕ್ಷಕ್ಕೆ ನಟಿ ಪೂಜಾ ಗಾಂಧಿ ಸೇರಿಕೊಂಡಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ರಾಜಕೀಯದಲ್ಲಿ ಈಗಾಗಲೇ ಕನ್ನಡದ ನಟಿಯರಾದ ತಾರಾ, ಉಮಾಶ್ರೀ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.
ಜೆಡಿಎಸ್ ಸೇರಿದ್ದು ಏಕೆ?: ಸಮಾಜವಾದಿ ತತ್ತ್ವದಿಂದ ಬೆಳೆದು ಬಂದಿರುವ ಜೆಡಿಎಸ್ ಪಕ್ಷಕ್ಕೆ ನಾನು ಸೇರುತ್ತಿದ್ದೇನೆ. ನನಗೆ ಚಿಕ್ಕಂದಿನಿಂದಲೂ ರಾಜಕೀಯದ ಬಗ್ಗೆ ಆಸಕ್ತಿಯಿತ್ತು. ಕಾನೂನು ಶಿಕ್ಷಣ ಪಡೆಯುವಾಗ ಈ ಆಸಕ್ತಿ ಇನ್ನಷ್ಟು ಬೆಳೆಯಿತು. ರಾಜಕೀಯವನ್ನು ವೃತ್ತಿಯಾಗಿ ಸ್ವೀಕರಿಸುತ್ತಿದ್ದೇನೆ" ಎಂದು ಮಾಳವಿಕಾ ಈ ಹಿಂದೆ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.
ಮೀಸಲಾತಿ ಬಗ್ಗೆ ಚೆಲುವರಾಯ ಸ್ವಾಮಿ: ದೇವೇಗೌಡರು ಮೀಸಲಾತಿ ಜಾರಿಗೊಳಿಸಿದ್ದರಿಂದ ಇಂದು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರು ಮತ್ತು ಹಿಂದುಳಿದ ವರ್ಗದವರು ಪ್ರಾತಿನಿಧ್ಯ ಪಡೆದಿದ್ದಾರೆ.
ಎಚ್.ಡಿ. ಕುಮಾರಸ್ವಾಮಿಯವರ ಅಧಿಕಾರಾವಧಿಯಲ್ಲಿ ಜಾರಿಗೆ ತಂದ ಭಾಗ್ಯಲಕ್ಷ್ಮಿ ಯೋಜನೆ, ಲಾಟರಿ ನಿಷೇಧ, ಸಾರಾಯಿ ನಿಷೇಧ, ಮಹಿಳೆಯರಿಗೆ ಉದ್ಯೋಗಾವಕಾಶ, ಉಚಿತ ಶಿಕ್ಷಣ, ಉಚಿತ ಸೈಕಲ್ ವಿತರಣೆ, ಸ್ತ್ರೀ ಶಕ್ತಿ ಸಂಘಗಳಿಗೆ ಹೆಚ್ಚಿನ ಒತ್ತು ಸೇರಿದಂತೆ ಹಲವಾರು ಯೋಜನೆಗಳು ಜನಪ್ರಿಯವಾಗಿವೆ ಎಂದರು.