'ಲಜ್ಜಾ' ತಸ್ಲೀಮಾಗೆ ಒಂಟಿ ಬದುಕು ಸಾಕಾಯಿತಂತೆ
ಅಂದಹಾಗೆ 5 ವರ್ಷಗಳಿಂದ ಅವರು ದೆಹಲಿಯ ಅಜ್ಞಾತ ಸ್ಥಳದಲ್ಲಿ ನೆಲೆಸಿದ್ದಾರೆ. ಹಾಗಾಗಿ, ಇನ್ನೆಷ್ಟು ದಿನ ಈ ರೀತಿ ಬದುಕಲು ಸಾಧ್ಯ ಎಂದು ತಸ್ಲೀಮಾ ಹತಾಶೆ ವ್ಯಕ್ತಪಡಿಸಿದ್ದಾರೆ. 2007ರ ನ. 22ರಂದು, ಐದು ವರ್ಷ ಹಿಂದೆ ಮೂಲಭೂತವಾದಿಗಳ ಪ್ರತಿಭಟನೆಯ ನಂತರ ಒತ್ತಾಯದಿಂದಾಗಿ ತಮ್ಮ ಕೋಲ್ಕತ್ತಾ ತೊರೆದು ದೆಹಲಿಯಲ್ಲಿ ನೆಲೆಸಿದ್ದಾರೆ.
ಸುದ್ದಿಸಂಸ್ಥೆಯೊಂದರ ಜತೆ ಮಾತನಾಡಿರುವ ತಸ್ಲೀಮಾ ತಮ್ಮ ಒಂಟಿ ಜೀವನದ ಬಗ್ಗೆ ಹೀಗೆ ಹೇಳಿಕೊಂಡಿದ್ದಾರೆ:
ನಾನು ಮೂಲತಃ ಬಂಗಾಳಿಯವಳು. ಪಶ್ಚಿಮ ಬಂಗಾಳ ಸರಕಾರವು ನನಗೆ ಕೋಲ್ಕತ್ತಾದಲ್ಲಿ ತಂಗಲು ಅನುಮತಿ ನೀಡುವ ದಿನಕ್ಕಾಗಿ ಕಾಯುತ್ತಿದ್ದೇನೆ. ಪಶ್ಚಿಮ ಬಂಗಾಳದಲ್ಲಿ ಅಥವಾ ಬಾಂಗ್ಲಾದೇಶದಲ್ಲಷ್ಟೇ ನೆಲೆಸಬಲ್ಲೆ.
ಇವೆರಡನ್ನು ಹೊರತುಪಡಿಸಿ ಬೇರೆಲ್ಲೂ ನೆಲೆಸಲು ನನಗೆ ಸಾಧ್ಯವಿಲ್ಲ. ಆದರೆ ದುರದೃಷ್ಟವಶಾತ್ ಈಗ ನಾನು ಇಚ್ಛಿಸುವ ಎರಡೂ ಕಡೆ ನೆಲೆಸಲು ನನಗೆ ಅನುಮತಿ ಇಲ್ಲ. ಬೇರೆ ಯಾವುದೇ ಜಾಗ ನನಗೆ ಹೊಂದುವುದಿಲ್ಲ.
ಸಾರ್ವಜನಿಕವಾಗಿ ಕಾಣಿಸಿಕೊಳ್ಳದೆ ಅಜ್ಞಾತ ಸ್ಥಳದಲ್ಲಿರುವಂತೆ ನನಗೆ ಸಲಹೆ ನೀಡಲಾಗಿದೆ. ಸಮಾನ ಮನಸ್ಕರೊಂದಿಗೆ ಸಂವಾದ ನಡೆಸಲು ಸಾಮಾಜಿಕ ಜಾಲತಾಣವೊಂದೇ ನನಗೆ ಆಸರೆಯಾಗಿದೆ. ಟ್ವಿಟರ್ನಲ್ಲಿ ಸುಮಾರು 45,000 ಜನರ ಸಂವಾದ ಬಳಗವನ್ನು ಹೊಂದಿದ್ದೇನೆ.
ಕೋಲ್ಕತ್ತಾಕ್ಕೆ ಭೇಟಿ ನೀಡಲು ತಸ್ಲೀಮಾ ಸಲ್ಲಿಸಿರುವ ಮನವಿಗಳಿಗೆ ಪಶ್ಚಿಮ ಬಂಗಾಳ ಸ್ಪಂದಿಸಿಲ್ಲ. 5 ವರ್ಷಗಳ ಹಿಂದೆ ತಸ್ಲೀಮಾ ಅವರ ವೀಸಾ ನವೀಕರಿಸಿದಾಗ ತೀವ್ರ ಹಿಂಸಾತ್ಮಕ ಪ್ರತಿಭಟನೆಗಳು ನಡೆದಿದ್ದ ಕಾರಣ ಅವರನ್ನು ಕೋಲ್ಕತ್ತಾದಿಂದ ಕಳುಹಿಸಲಾಗಿತ್ತು. ತಮ್ಮ 'ಲಜ್ಜಾ' ಕಾದಂಬರಿ ವಿವಾದಕ್ಕೀಡಾದಾಗ 1994ರಲ್ಲಿ ತಸ್ಲೀಮಾ ತಾಯ್ನಾಡು ಬಾಂಗ್ಲಾವನ್ನು ತೊರೆಯಬೇಕಾಯಿತು.