ದಕ್ಷಿಣ ಕೊಡಗಿನಲ್ಲಿ ಬೋನಿಗೆ ಬಿದ್ದ ಹೆಣ್ಣು ಹುಲಿ
ಶ್ರೀಮಂಗಲ, ನ. 24 : ದಕ್ಷಿಣ ಕೊಡಗಿನ ಶ್ರೀಮಂಗಲ ಸಮೀಪದ ನಾಲ್ಕೇರಿ ಗ್ರಾಮದಲ್ಲಿ ಹಸು ಮೇಲೆ ದಾಳಿ ನಡೆಸಿ ಕೊಂದು ಹಾಕಿ ಗ್ರಾಮದಲ್ಲಿ ಬೀಡು ಬಿಟ್ಟಿದ್ದ ಹೆಬ್ಬುಲಿಯು ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಸೆರೆಯಾಗಿದೆ. ಸೆರೆಯಾಗಿರುವ ಹೆಣ್ಣು ಹುಲಿ ಸುಮಾರು 3 ವರ್ಷ ಪ್ರಾಯದ್ದಾಗಿದ್ದು ಹುಲಿಯ ಬೆನ್ನು, ಬಾಯಿ, ಕೈಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಅರವಳಿಕೆ ಮದ್ದು ನೀಡಿ ಅದನ್ನು ಚಿಕಿತ್ಸೆಗಾಗಿ ಮೈಸೂರು ಮೃಗಾಯಲಕ್ಕೆ ಸ್ಥಳಾಂತರಿಸಲಾಗಿದೆ.
ಗುರುವಾರ ಸಂಜೆ ಗ್ರಾಮದಲ್ಲಿ ಹಸುವನ್ನು ಕೊಂದು ತಿಂದು ಅಳಿದುಳಿದ ಭಾಗವನ್ನು ಅಲ್ಲೇ ಬಿಟ್ಟು ಹೋಗಿತ್ತು. ಅರಣ್ಯ ಇಲಾಖೆ ಈ ಕಳೆಬರವನ್ನು ಬೋನಿನ ಒಂದು ತುದಿಯಲ್ಲಿ ಇರಿಸಿ ಹುಲಿಯನ್ನು ಸೆರೆ ಹಿಡಿಯಲು ತಂತ್ರ ರೂಪಿಸಿತ್ತು. ಅರಣ್ಯ ಇಲಾಖೆ ಗ್ರಾಮಸ್ಥರ ಸಹಕಾರದೊಂದಿಗೆ ಮಾಡಿದ ತಂತ್ರ ಯಶಸ್ವಿಯಾಗಿದ್ದು, ರಾತ್ರಿ ಹುಲಿಯು ಮಾಂಸದ ಆಶೆಯಿಂದ ಬಂದು ಬೋನಿಗೆ ಬಿದ್ದಿದೆ.
ಹುಲಿ ಸೆರೆಯಾದ ವಿಷಯ ತಿಳಿದು ಸ್ಥಳಕ್ಕೆ ಹುಣಸೂರು ವನ್ಯಜೀವಿ ವಿಭಾಗದ ಪಶು ವೈದ್ಯಾಧಿಕಾರಿ ಡಾ. ಉಮಾಶಂಕರ್ ಹಾಗೂ ಅವರ ತಂಡ ಆಗಮಿಸಿ ಕೋವಿಯ ಮೂಲಕ ಅರವಳಿಕೆ ಚುಚ್ಚುಮದ್ದು ನೀಡಿ ಪ್ರಜ್ಞೆ ತಪ್ಪಿಸಿ ಅದನ್ನು ನಾಗರಹೊಳೆ ಮೂಲಕ ಮೈಸೂರು ಮೃಗಾಲಯಕ್ಕೆ ಸಾಗಿಸಿತು. ಹುಲಿಯು ಬೋನಿಗೆ ಬಿದ್ದ ವಿಷಯ ತಿಳಿದ ತಕ್ಷಣ ನೂರಾರು ಮಂದಿ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದರಿಂದ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜನರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾಯಿತು.
ನ.20ರ ರಾತ್ರಿ ಸಮೀಪದ ಚಿಮ್ಮಣಮಾಡ ವಿಜಯ ಅವರು ಸಾಕಿದ್ದ ಹಂದಿಯ ಮೇಲೆ ಹುಲಿ ದಾಳಿ ನಡೆಸಿ ಗಾಯಗೊಳಿಸಿ ಹೋಗಿತ್ತು. ನ. 21ರ ಮಧ್ಯಾಹ್ನ ನಾಲ್ಕೇರಿ ಗ್ರಾಮದ ರಸ್ತೆಯಲ್ಲಿ ಮೇಯಲು ಕಟ್ಟಿದ್ದ ಗ್ರಾಮದ ರೈತ ತಡಿಯಂಗಡ ಅರಸು ಅವರಿಗೆ ಸೇರಿದ ಹಸುವನ್ನು ಕೊಂದು ಕೆಲ ಭಾಗವನ್ನು ತಿಂದು ಹಾಕಿತ್ತು. ಹೀಗಾಗಿ ಗ್ರಾಮಸ್ಥರು ಸಂಚರಿಸಲು ಹಾಗೂ ತೋಟದಲ್ಲಿ ಕಾರ್ಮಿಕರು ಕೆಲಸ ಭಯದ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಗ್ರಾಮದಲ್ಲಿ ಜನ ನೆಮ್ಮದಿಯಿಂದ ಓಡಾಡುವಂತಾಗಿದೆ.
ಸ್ಥಳಕ್ಕೆ ಉಪಸಂರಕ್ಷಣಾಧಿಕಾರಿ ಗೋಕುಲ, ಸಹಾಯಕ ಸಂರಕ್ಷಣಾಧಿಕಾರಿ ಬೆಳ್ಯಪ್ಪ, ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ವಲಯ ಅರಣ್ಯಾಧಿಕಾರಿ ಚಿಂಡಮಾಡ ಮಂದಣ್ಣ, ಶ್ರೀಮಂಗಲ ವಲಯ ಅರಣ್ಯಾಧಿಕಾರಿ ಪೌಲ್ ಅಂಥೋಣಿ ಹಾಗೂ ಕುಟ್ಟ ಪೊಲೀಸ್ ವೃತ್ತ ನಿರೀಕ್ಷಕ ಶಿವಶಂಕರ್ ಹಾಗೂ ಉಪ ನಿರೀಕ್ಷಕ ಹರಿಶ್ಚಂದ್ರ ಭೇಟಿ ನೀಡಿದ್ದರು.