ಕಟ್ಟಾ ಸುಬ್ರಮಣ್ಯ ಪ್ರಾಣ ಕಂಟಕದಿಂದ ಪಾರು
ಯಲಹಂಕದಲ್ಲಿ ಶುಕ್ರವಾರ(ನ.23) ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಾಜಿ ಸಚಿವ, ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಶಾಸಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿದಂತೆ ನಾಲ್ವರು ಗಾಯ ಗೊಂಡಿದ್ದರು. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ.
ತಪ್ಪಿದ ಭಾರಿ ಕಂಟಕ : ಕಾರ್ಯನಿಮಿತ್ತ ಯಲಹಂಕಕ್ಕೆ ತೆರಳಿದ್ದ ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ವಿದ್ಯಾಶಿಲ್ಪ ಕಾಲೇಜಿನ ಸಮೀಪದ ರಸ್ತೆ ವಿಭಜಕವನ್ನು ತಪ್ಪಿಸಲು ಚಾಲಕ ಮುಂದಾಗಿದ್ದಾನೆ.
ಆದರೆ, ಚಾಲಕನ ನಿಯಂತ್ರಣ ತಪ್ಪಿದ ಇನ್ನೋವಾ ಕಾರು ಮೂರು ಪಲ್ಟಿಯಾಗಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು, ಅದರಲ್ಲಿದ್ದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಕೈ ಗಾಯವಾಗಿದ್ದು, ಮೂಳೆ ಮುರಿದಿದೆ. ಕಾಲುಗಳಿಗೂ ಸಣ್ಣ ಪುಟ್ಟ ಗಾಯಗಳಾಗಿವೆ.
ಕಾರಿನಲ್ಲಿದ್ದ ಬಿಬಿಎಂಪಿ ನಾಮ ನಿರ್ದೇಶಿತ ಕಾರ್ಪೋರೇಟರ್ ಶ್ರೀನಿವಾಸ್, ಸಂಜಯನಗರ ವಾರ್ಡ್ ಬಿಜೆಪಿ ಅಧ್ಯಕ್ಷ ಚಲ್ಲಹಳ್ಳಿ ರಾಜಣ್ಣ ಅವರ ತಲೆಗೆ ಸಣ್ಣ ಪುಟ್ಟ ಗಾಯವಾಗಿದೆ.
ಕಾರು ಚಾಲಕ ರಘು, ಗನ್ಮ್ಯಾನ್ ಮಂಜು ಕೈ ಕಾಲುಗಳಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಹೆಬ್ಬಾಳದ ಕೊಲಂಬಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಾಣಪಾಯವಾಗಿಲ್ಲವೆಂದು ವೈದ್ಯರು ತಿಳಿಸಿದ್ದಾರೆ.
ಕಟ್ಟಾಗೆ ಮೊದಲೇ ಎಚ್ಚರಿಸಿದ್ದ ಜ್ಯೋತಿಷಿಗಳು: ನಗರದ ಹೊರ ವಲಯಕ್ಕೆ ಸಂಚರಿಸಿದರೆ ರಾತ್ರಿ ವೇಳೆ ಪುನಃ ನಗರದ ಕಡೆಗೆ ತೆರಳುವುದನ್ನು ಆದಷ್ಟು ತಪ್ಪಿಸಿ ನಿಮ್ಮ ರಾಶಿಗೆ ಅಪಘಾತ, ಪ್ರಾಣ ಕಟಂಕ ಇದೆ ಎಂದು ಕಟ್ಟಾ ಅವರ ಆಪ್ತ ಜ್ಯೋತಿಷಿಗಳು ಎಚ್ಚರಿಸಿದ್ದರು ಎನ್ನಲಾಗಿದೆ.
ಯಲಹಂಕದ ಹಳ್ಳಿಯೊಂದಕ್ಕೆ ಕಾರ್ಯ ನಿಮಿತ್ತ ಹೋಗಿ ಹಿಂದಿರುಗುತ್ತಿದ್ದರು. ಮಾರ್ಗಮಧ್ಯೆ ಬರುತ್ತಿದ್ದ ವೇಳೆ ಯಲಹಂಕ ಸಮೀಪ ಬಂದಾಗ ಜೋರಾಗಿ ಮಳೆ ಬಂದಿದೆ. ಮಳೆ ಇದ್ದ ಕಾರಣ ಅಳ್ಳಾಳ ಸಂದ್ರದ ರೈಲ್ವೆ ಗೇಟ್ ಬಳಿ ಸಂಚಾರ ದಟ್ಟಣೆ ತಪ್ಪಿಸಿಕೊಳ್ಳುವ ಸಲುವಾಗಿ ಕಾರನ್ನು ಸಂತೆ ವೃತ್ತದ ಕಡೆಯಿಂದ ಹೋಗಲು ಚಾಲಕನಿಗೆ ಕಟ್ಟಾ ಅವರು ಸಲಹೆ ನೀಡಿದ್ದಾರೆ.
ವಾಹನ ಯಲಹಂಕದ ಸಂತೆ ವೃತ್ತಕ್ಕೆ ತಿರುಗಿಸಿದ ಚಾಲಕ ಅಲ್ಲಿಯೂ ಕೂಡ ಟ್ರಾಫಿಕ್ ಜಾಮ್ ಆಗಿದ್ದನ್ನು ಕಂಡು ಕೋಗಿಲು ವೃತ್ತದಿಂದ ಮುಂದೆ ವಿದ್ಯಾಶಿಲ್ಪ ಅಕಾಡೆಮಿ ಕಡೆಯಿಂದ ಯು ಟರ್ನ್ ಮಾಡಿಕೊಂಡು ಬರಲು ತೆರಳಿದ್ದಾರೆ.
ಆ ವೇಳೆ ಅಕಾಲಿಕ ಮಳೆ ಮತ್ತಷ್ಟು ಜೋರಾಗಿ ಬಂದಿದೆ. ಈ ಸಂದರ್ಭದಲ್ಲಿ ಮೇಲ್ಸೇತುವೆ ಬಳಿ ರಸ್ತೆ ವಿಭಜಕ ಇರುವುದು ತಪ್ಪಿಸುವ ಸಂದರ್ಭದಲ್ಲಿ ವಾಹನವನ್ನು ಎಡಕ್ಕೆ ವೇಗವಾಗಿ ತಿರುಗಿಸಿದಾಗ ವಾಹನ ನಿಯಂತ್ರಣ ತಪ್ಪಿ ಮೂರು ಬಾರಿ ಪಲ್ಟಿ ಹೊಡೆದು ಕಾರು ಜಖಂಗೊಂಡಿದೆ.
ಅಪಘಾತವಾದ ನಂತರ ಕಾರಿನಲ್ಲಿದ್ದ ನಾಲ್ಕು ಜನರು ಸುರಕ್ಷಿತವಾಗಿ ಹೊರಬಂದಿದ್ದು, ಟ್ಯಾಕ್ಸಿಯಲ್ಲಿ ಗಾಯಾಳುಗಳನ್ನು ಕೊಲಂಬಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೇಲ್ಸೇತುವೆ ಬಳಿ ಅಳವಡಿಸಿದ್ದ ರಸ್ತೆ ವಿಭಜಕ ಕಾಣಲಿಲ್ಲ. ಮಳೆ ಇದ್ದ ಕಾರಣ ಕಾರು ನಿಯಂತ್ರಣಕ್ಕೆ ಸಿಗಲಿಲ್ಲ ಎಂದು ಚಾಲಕ ಹೇಳಿದ್ದಾರೆ.