ಸೋಮವಾರದಿಂದ ರಾಜಧಾನಿಯಲ್ಲಿ ಶ್ವಾನ ಗಣತಿ ಶುರು
ಪ್ರಾಣಿ ಜನನ ನಿಯಂತ್ರಣ ಯೋಜನೆಯಡಿ (Animal Birth Control Programme) ಈ ವರದಿ ಸಿದ್ದಪಡಿಸುವುದು ಮಹಾನಗರ ಪಾಲಿಕೆಗೆ ಮುಖ್ಯವಾಗುತ್ತದೆ. 2007ರಲ್ಲಿ ಶ್ರೀದೇವಿ ಮತ್ತು ಮಂಜುನಾಥ ಎಂಬಿಬ್ಬರು ಮಕ್ಕಳು ಬೀದಿ ನಾಯಿಗಳಿಗೆ ಆಹಾರವಾದ ಮೇಲೆ ಎಚ್ಚೆತ್ತ ಬಿಬಿಎಂಪಿ, ABC ಯೋಜನೆಯನ್ನು ಪುನರ್ ವ್ಯಾಖ್ಯಾನಿಸಿದೆ.
ಅದಕ್ಕೂ ಮುನ್ನ 2000ನೇ ಇಸ್ವಿಯಿಂದ ನಾಯಿಗಣತಿ ನಡೆಯುತ್ತಿದ್ದಾದರೂ ಹಾದಿಗೊಂದು ಬೀದಿಗೊಂದರಂತೆ ಅವೈಜ್ಞಾನಿಕವಾಗಿ ನಡುಬೀದಿ ನಾರಾಯಣನನ್ನು ಬೇಕಾಬಿಟ್ಟಿ ಲೆಕ್ಕ ಹಾಕುತ್ತಿದ್ದರು. ಅದಾದನಂತರ BBMP ಕರಾರುವಕ್ಕಾಗಿ ಶ್ವಾನಗಳ ಸಂಖ್ಯೆಯನ್ನು ಲೆಕ್ಕವಿಡುತ್ತಿದೆ ಎಂದು ಪಾಲಿಕೆಯ ಪಶುಸಂಗೋಪನಾ ಇಲಾಖೆ ಜಂಟಿ ನಿರ್ದೇಶಕ ಪರ್ವೇನ್ ಅಹಮದ್ ಪಿರಾನ್ ತಿಳಿಸಿದ್ದಾರೆ.
'ಜನಗಣತಿಯಿಂದ ಏನುಪಯೋಗವೋ ಶ್ವಾನಗಣತಿಯಿಂದಲೂ ಹಲವಾರು ಪ್ರಯೋಜನಗಳಿವೆ. ಪ್ರಧಾನವಾಗಿ ನಾಯಿ ಹಾವಳಿ ತಡೆಗಟ್ಟಲು ಹಲವು ಯೋಜನೆಗಳನ್ನು ನಿಖರವಾಗಿ ರೂಪಿಸಲು ಇದರಿಂದ ಸಾಧ್ಯವಾಗುತ್ತದೆ. ಇಲ್ಲದಿದ್ದರೆ ನಾಯಿ ಹಾವಳಿ ವಿಚಾರದಲ್ಲಿ ಗಾಳಿಯಲ್ಲಿ ಗುದ್ದಾಡಿದಂತೆ ಆಗುತ್ತದೆ' ಎಂದು ಅವರು ವ್ಯಾಖ್ಯಾನಿಸಿದ್ದಾರೆ.
ಅಂದಹಾಗೆ 2007ರಲ್ಲಿ ನಡೆದಿದ್ದ ಶ್ವಾನಗಣತಿಯ ಪ್ರಕಾರ 1,83,758 ಬೀದಿ ನಾಯಿಗಳು ಮತ್ತು 1,43,522 ಸಾಕು ನಾಯಿಗಳು ಇದ್ದಾವೆ. ಈ ಮಧ್ಯೆ, ಚುನಾವಣೆ ಹತ್ತಿರವಿದೆ. ನಾಯಿ ನರಿಗಳ ಥರ ಕಚ್ಚಾಡುವ ಕೆಲ ರಾಜಕಾರಣಿಗಳು ಯಾವುದಕ್ಕೇ ಆಗಲಿ ಹುಷಾರಾಗಿರುವುದು ಒಳಿತು ಎಂದು ಮತದಾರರು ಮನವಿ ಮಾಡಿಕೊಂಡಿದ್ದಾರೆ.