ಕಸಬ್ ಸಾವು; ಭಾರತ ಮೇಲೆ ಪ್ರತೀಕಾರ ದಾಳಿ-ತಾಲಿಬಾನ್
ಅಜ್ಞಾತ ಸ್ಥಳದಿಂದ Reuters ಸುದ್ದಿ ಸಂಸ್ಥೆಗೆ ಕರೆ ಮಾಡಿರುವ ಪಾಕಿಸ್ತಾನದಲ್ಲಿನ ತಾಲಿಬಾನ್ ಉಗ್ರ ಸಂಘಟನೆಯ ಮುಖ್ಯಸ್ಥ ಬಹಿರಂಗ ಎಚ್ಚರಿಕೆ ನೀಡಿದ್ದಾನೆ. ತಾಲಿಬಾನ್ ವಕ್ತಾರ ಎಹಸಾನುಲ್ಲಾ ಈ ಬಗ್ಗೆ ಮಾಹಿತಿ ನೀಡಿದ್ದು, 'ತನ್ನ ಸಂಘಟನೆಯು ಕಸಬ್ ಸಾವಿಗೆ ಪ್ರತೀಕಾರವಾಗಿ ಭಾರತದ ಮೇಲೆ ದಾಳಿಗಳನ್ನು ನಡೆಸಲು ನಿರ್ಧರಿಸಿದೆ' ಎಂದು ಎಚ್ಚರಿಸಿದ್ದಾನೆ.
ಇದೇ ವೇಳೆ ಕಸಬ್ ದೇಹವನ್ನು ತನಗೆ ಒಪ್ಪಿಸುವಂತೆಯೂ ತಾಲಿಬಾನ್ ವಕ್ತಾರ ಎಹಸಾನುಲ್ಲಾ ತಾಕೀತು ಮಾಡಿದ್ದಾನೆ. ಕಸಬನ ಶವವನ್ನು ಆತನ ಮನೆಯವರಿಗಾಗಲಿ ಅಥವಾ ನಮ್ಮ ಸಂಘಟನೆಗಾಗಲಿ ಒಪ್ಪಿಸದಿದ್ದರೆ ಭಾರತೀಯ ಕುಟುಂಬಗಳ ಮೇಲೆ ನಾವು ಮುಗಿಬೀಳುತ್ತೇವೆ. ಮತ್ತು ಅವರನ್ನು ಸಾಯಿಸಿದ ಬಳಿಕ ಅವರ ದೇಹಗಳನ್ನು ನಾವೂ ವಾಪಸು ಮಾಡುವುದಿಲ್ಲ ಎಂದು ಘೋಷಿಸಿದ್ದಾನೆ.
'ಭಾರತದ ಯಾವುದೇ ಸ್ಥಳದ ಮೇಲೂ ನಾವು ದಾಳಿ ನಡೆಸಬಹುದು, ಎಚ್ಚರಾ' ಎಂದು ಎಹಸಾನುಲ್ಲಾ ಹೇಳಿದ್ದಾನೆ. ಅಲ್ ಖಾಯಿದಾ ಉಗ್ರ ಸಂಘಟನೆಯ ಜತೆ ನಿಕಟ ಸಂಪರ್ಕ ಹೊಂದಿರುವ ತಾಲಿಬಾನಿಗಳು ಪಾಕಿಸ್ತಾನದ ಭದ್ರತೆಗೂ ದೊಡ್ಡ ತಲೆನೋವು. ಗಮನಾರ್ಹವೆಂದರೆ ತಾಲಿಬಾನಿಗಳು ವಿದೇಶಿ ನೆಲೆಯಲ್ಲೆಲ್ಲೂ ಇದುವರೆಗೆ ಭಯೋತ್ಪಾದಕ ದಾಳಿಗಳನ್ನು ನಡೆಸಿಲ್ಲ.
2004ರ ನಂತರ ಮೊದಲ ಬಾರಿಗೆ ಭಾರತದಲ್ಲಿ ನಿನ್ನೆ ಗಲ್ಲು ಶಿಕ್ಷೆಯನ್ನು ಜಾರಿಗೊಳಿಸಲಾಯಿತು. ಕುತೂಹಲದ ಸಂಗತಿಯೆಂದರೆ ಕಸಬ್ ಮೂಲಕ ಭಾರತವು ಮೊದಲ ಬಾರಿಗೆ ವಿದೇಶಿ ಪ್ರಜೆಯೊಬ್ಬನಿಗೆ ಮೃತ್ಯದಂಡ ವಿಧಿಸಿದೆ. ಕಸಬನ ವಿರುದ್ಧ 11,000 ಪುಟಗಳ ಆರೋಪಪಟ್ಟಿಯಲ್ಲಿ 86 ಅಪರಾಧಗಳು ದಾಖಲಾಗಿದ್ದವು.