ಕಸಬ್ ಗೆ ಗಲ್ಲು: ಸರಕಾರವೇನಾದ್ರೂ ಸುಳಿವು ನೀಡಿತ್ತಾ?
ಯಾಕೆ ಹೀಗಾಯಿತು ಅಂದರೆ ಸುದ್ದಿ ಸ್ಫೋಟದ ಇಂದಿನ ದಿನಗಳಲ್ಲಿ ಭಾರತ ಸರಕಾರ ಎಷ್ಟು ಕರಾರುವಕ್ಕಾಗಿ/ಗೌಪ್ಯವಾಗಿ ಕಸಬನ ಹೆಣ ಉರುಳಿಸಿತು ಅಂದರೆ ಅದಾದನಂತರವೇ ಮಾಧ್ಯಮಗಳಿಗೆ ಸುದ್ದಿ ಮುಟ್ಟಿದ್ದು. ಹಾಗಾಗಿ ಸುದ್ದಿ ಮಾಧ್ಯಮಗಳಿಗೆ ಕಸಬ್ ಸತ್ತ ಎಂಬುದನ್ನು ಅರಗಿಸಿಕೊಳ್ಳಲು ಕೊಂಚ ಸಮಯ ಹಿಡಿಸಿದ್ದಂತೂ ನಿಜ.
ಈ ಕಸಬನನ್ನು ನೇಣಿಗೇರಿಸುವುದು ಸಾಕ್ಷಾತ್ ಸೋನಿಯಾ ಗಾಂಧಿಗೆ ಹಾಗಿರಲಿ ಪ್ರಧಾನಿ ಸಿಂಗ್ ಅವರಿಗೇ ಗೊತ್ತಿರಲ್ಲವಂತೆ. ಕೇವಲ 16 ಪ್ಲಸ್ ಮಂದಿಗೆ ಮಾತ್ರ Operation X ತಿಳಿದಿದ್ದು. ಆದರೆ ಈಗ ಪ್ರಶ್ನೆ/ಸಂಶಯ ಏನಪ್ಪಾ ಅಂದರೆ ... ಮುಂಬೈ ದಾಳಿಕೋರ ಅಜ್ಮಲ್ ಕಸಬ್ ನನ್ನು ಗಲ್ಲಿಗೇರಿಸುವ ಬಗ್ಗೆ ಭಾರತ ಸರಕಾರ ಏನಾದರೂ ಸುಳಿವು ನೀಡಿತ್ತಾ?
ಹಾಗಂತ flashbackಗೆ ಹೋಗಿ ಇತ್ತೀಚಿಗೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ತರದಲ್ಲಿ ನಡೆದ ವಿದ್ಯಮಾನ/ ಸುದ್ದಿಗಳನ್ನು ಸ್ವಲ್ಪ ತಿರುವಿಹಾಕಿದಾಗ... ಕಣ್ಣಿಗೆ ಕಂಡಿದ್ದು ಪಾಕಿಸ್ತಾನ ಗೃಹ ಸಚಿವ ರೆಹಮಾನ್ ಮಲಿಕ್.
ನಹೀ ನಹೀ ಅಭಿ ನಹೀ: ಹೌದು. ಪಾಕ್ ಗೃಹ ಸಚಿವ ರೆಹಮಾನ್ ಮಲಿಕ್ ರಾಜತಾಂತ್ರಿಕ ಸ್ತರದಲ್ಲಿ ಮೊನ್ನೆ ಭಾರತ ಪ್ರವಾಸಕ್ಕೆ ಬರಬೇಕಿತ್ತು. ಗುರುವಾರ ಹಾಗೂ ಶುಕ್ರವಾರ ರೆಹಮಾನ್ ಮಲಿಕ್ ಅವರು ವೀಸಾ ಪ್ರಕ್ರಿಯೆ ಸರಳೀಕರಣ ಒಪ್ಪಂದಕ್ಕೆ ಸಹಿ ಹಾಕಬೇಕಿತ್ತು.
ಆದರೆ ಅದೇನನ್ನಿಸಿತೋ ಏನೋ 'ಮಲಿಕ್ ನೀವು ಸದ್ಯಕ್ಕೆ ಭಾರತಕ್ಕೆ ಬರಬೇಡಿ' ಎಂದು ಕೇಂದ್ರ ಸರ್ಕಾರ ಅವರಿಗೆ ಸೂಚಿಸಿತು. ಯಾವತ್ತೂ ನೆರೆ'ಹೊರೆ'ಯ ಅತಿಥಿಗೆ ಭಾರತ ಬೇಡ ಎಂದಿಲ್ಲ. ಹಾಗಾಗಿ, ಕಸಬ್ ಗೆಲ್ಲಿಗೇರಿದ್ದರ ಹಿನ್ನೆಲೆಯಲ್ಲಿ ಭಾರತ ಸರಕಾರದ ಈ ನಿರ್ಧಾರದತ್ತ ಚಿಕಿತ್ಸಕ ದೃಷ್ಟಿ ಬೀರಿದರೆ... ಭಾರತದ ಈ ನಿಲುವಿಗೆ ಕಾರಣವೇನು? ಎಂಬುದು ಗೊತ್ತಾಗುತ್ತದೆ.
ಇಲ್ಲಿ ಗಹನವಾದ ವಿಚಾರವೆಂದರೆ ಇದೇ ರೆಹಮಾನ್ ಮಲಿಕ್ ಮುಂಬೈ ದಾಳಿಕೋರರ ವಿಚಾರದಲ್ಲಿ ಮಂದಗತಿಯ ಧೋರಣೆ ಅನುಸರಿಸುತ್ತಿದ್ದಾರೆ. ಭಾರತದ ಪ್ರಯತ್ನಗಳಿಗೆ ಅಡ್ಡಗಾಲು ಹಾಕುವುದು ಈತನ ಜಾಯಮಾನ.
ಹಾಗಾಗಿ ಆತನೇನಾದರೂ ಕಸಬ್ ಗಲ್ಲಿಗೇರುವ ಮುನ್ನ ಭಾರತಕ್ಕೆ ಬಂದು, ವಿಷಯ ಗೊತ್ತಾಗಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಗಲಾಟೆ ಮಾಡಿದರೆ ತನ್ನ ಶ್ರಮ ನಿರರ್ಥಕವಾಗುತ್ತದೆ ಎಂದು ಭಾವಿಸಿದ ಭಾರತ ಸರಕಾರ 'ನಹೀ ನಹೀ ಅಭಿ ನಹಿ' ಎಂದು ಮಲಿಕ್ ಗೆ ರೆಡ್ ಸಿಗ್ನಲ್ ತೋರಿಸಿತ್ತು.
ಆದರೆ 'ಭಾರತದಲ್ಲಿ ಮಹತ್ತರವಾದುದೇನೂ ಘಟಿಸಲಿದೆ ಮತ್ತು ತನಗೂ- ಅದಕ್ಕೂ ನಂಟಿದೆ. ಹಾಗಾಗಿ ತನ್ನನ್ನು ಬರಬೇಡ ಎಂದು ಭಾರತ ಹೇಳುತ್ತಿದೆ' ಎಂಬುದು ಪಾಕಿಸ್ತಾನದ ತರ್ಕಕ್ಕೆ ನಿಲುಕದೇ ಹೋಯಿತು. ಹಾಗಾಗಿ ಯಾವುದೇ ಅಡೆತಡೆಯಿಲ್ಲದೆ ಕಸಬ್ ನೇಣಿನ ಕುಣಿಕೆಗೆ ಬಿದ್ದ. ಇಡೀ ಭಾರತ ನೆಮ್ಮದಿಯ ನಿಟ್ಟುಸಿರು ಬಿಟ್ಟಿತು.