ಬಂಗಾರಪ್ಪಗೆ ಬಂದ ದುಸ್ಥಿತಿ ಯಡಿಯೂರಪ್ಪಗೆ ಬಾರದಿರಲಿ
ಹೊಸ ಪಕ್ಷ ಸ್ಥಾಪನೆ ಮಾಡಿದ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಮತ್ತು ದೇವರಾಜ್ ಅರಸು ಅವರ ದುಸ್ಥಿತಿ ಏನಾಯಿತು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಅವರಿಗೆ ಬಂದಂತಹ ಪರಿಸ್ಥಿತಿ ಯಡಿಯೂರಪ್ಪ ಅವರಿಗೆ ಬಾರದಿರಲಿ ಎಂದು ಈಶ್ವರಪ್ಪ ಹೇಳಿದ್ದಾರೆ.
ಬಿಜೆಪಿ ನನ್ನ ಹೆತ್ತ ತಾಯಿಯ ಹಾಗೆ ಎಂದು ಯಡಿಯೂರಪ್ಪ ಬಹಳಷ್ಟು ಬಾರಿ ಹೇಳಿದ್ದರು. ಈಗಲೂ ಅವರು ಬಿಜೆಪಿ ತೊರೆಯುವುದಿಲ್ಲ ಎನ್ನುವ ವಿಶ್ವಾಸ ನಮಗಿದೆ ಎಂದು ಉಪಮುಖ್ಯಮಂತ್ರಿ ಈಶ್ವರಪ್ಪ ಭರವಸೆ ವ್ಯಕ್ತ ಪಡಿಸಿದ್ದಾರೆ.
ಬಂಗಾರಪ್ಪ ಮತ್ತು ಅರಸು ಅವರು ಹೊಸ ಪಕ್ಷ ಕಟ್ಟಲು ಹೋಗಿ ತೊಂದರೆ ಅನುಭವಿಸಿದ್ದಾರೆ. ಅವರು ಎದುರಿಸಿದ ಪರಿಸ್ಥಿತಿ ಯಡಿಯೂರಪ್ಪ ಅವರಿಗೆ ಬರಬಾರದೆನ್ನುವ ಕಾಳಜಿ ನಮಗಿದೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಈ ಹಿಂದೆ ಕೂಡಾ ಹೇಳಿದ ಹಾಗೆ ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಅಶಿಸ್ತನ್ನು ನಾವು ಸಹಿಸಿಕೊಳ್ಳುವುದಿಲ್ಲ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಪರಿಣಾಮ ನೆಟ್ಟಗಿರದೆಂದು ಈಶ್ವರಪ್ಪ, ಯಡಿಯೂರಪ್ಪ ಬೆಂಬಲಿಗರಿಗೆ ಎಚ್ಚರಿಸಿದ್ದಾರೆ.
ತುರುವೇಕೆರೆ ಮಾಜಿ ಶಾಸಕ ಎಂ ಡಿ ಲಕ್ಷ್ಮೀನಾರಾಯಣ ಬಿಜೆಪಿಯಲ್ಲಿಲ್ಲ, ಆದರೂ ಕೈಮಗ್ಗ ಮಂಡಳಿಯ ಅಧ್ಯಕ್ಷ ಹುದ್ದೆಯನ್ನು ಉಳಿಸಿಕೊಂಡಿದ್ದಾರೆ. ಸದ್ಯದಲ್ಲೇ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಈಶ್ವರಪ್ಪ ಹೇಳಿದ್ದಾರೆ.
ಬಿಜೆಪಿಯಿಂದ 60 -70 ಶಾಸಕರು ಹಾವೇರಿ ಸಮಾವೇಶದಲ್ಲಿ ಭಾಗವಹಿಸುತ್ತಾರೆ ಎನ್ನುವ ಸುದ್ದಿ ಸತ್ಯಕ್ಕೆ ದೂರವಾದದ್ದು. ಒಂದು ವೇಳೆ ಸಮಾವೇಶದ ನಡೆದರೂ ಮೂರು ಅಥವಾ ನಾಲ್ಕು ಶಾಸಕರು ಭಾಗವಹಿಸಬಹುದು. ಆ ಶಾಸಕರನ್ನು ಕರೆದು ಮಾತನಾಡಿಸುತ್ತೇವೆ ಎಂದು ಈಶ್ವರಪ್ಪ ಹೇಳಿದ್ದಾರೆ.