ಕಸಬ್ ನೇಣಿಗೇರಿದ್ದು ಸಿಂಗ್, ಗಾಂಧಿಗೆ ಗೊತ್ತಿರಲಿಲ್ಲವಂತೆ!
ನಂಬಿದ್ರೆ ನಂಬಿ, ಬಿಟ್ರೆ ಬಿಡಿ. ಆದರೆ, ಇದನ್ನು ಹೇಳಿರುವು ಮಾತ್ರ ಕೇಂದ್ರ ಗೃಹ ಮಂತ್ರಿ ಸುಶೀಲ್ ಕುಮಾರ್ ಶಿಂಧೆ. ಬುಧವಾರ ಬೆಳಿಗ್ಗೆ 7.30ಕ್ಕೆ ಪುಣೆಯ ಯರವಾಡಾ ಜೈಲಿನಲ್ಲಿ ಗಲ್ಲಿಗೇರಿಸಿರುವುದು ಮನಮೋಹನ ಸಿಂಗ್ ಮತ್ತು ಸೋನಿಯಾ ಗಾಂಧಿಗೆ ಗೊತ್ತಾಗಿದ್ದು ದೂರದರ್ಶನದಲ್ಲಿ ನೋಡಿದ ನಂತರವೇ ಅಂತೆ.
"ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೂಡ ಕಸಬ್ನನ್ನು ಗಲ್ಲಿಗೇರಿಸುವ ನಿರ್ಧಾರದ ಭಾಗವಾಗಿರಲಿಲ್ಲ. ಇದು ಗೃಹ ಮಂತ್ರಾಲಯದ ನಿರ್ಧಾರವಾಗಿತ್ತು ಮತ್ತು ನಾನು ಕೆಲಸ ಮಾಡುವ ರೀತಿಯೇ ಹೀಗೆ. ನಾನು ಮಾಡುವ ಕೆಲಸವನ್ನು ರಹಸ್ಯವಾಗಿ ಮಾಡುವುದೇ ನನ್ನ ಜಾಯಮಾನ. ನನಗೆ ಪೊಲೀಸರ ಬೆಂಬಲವಿತ್ತು" ಎಂದು ಮಹಾರಾಷ್ಟ್ರ ಪೊಲೀಸ್ ಇಲಾಖೆಯಲ್ಲಿ ಹಿಂದೆ ಕೆಲಸ ಮಾಡಿದ್ದ ಸುಶೀಲ್ ಕುಮಾರ್ ಶಿಂಧೆ ಹೇಳಿದ್ದಾರೆ.
ಗೃಹ ಮಂತ್ರಾಲಯವನ್ನು ಹೊರತುಪಡಿಸಿದರೆ ಅಜ್ಮಲ್ ಕಸಬ್ನನ್ನು ರಹಸ್ಯವಾಗಿ ನೇಣಿಗೇರಿಸುವ ವಿಷಯ ವಿದೇಶಾಂಗ ಸಚಿವಾಲಯಕ್ಕೆ ಮಾತ್ರ ಗೊತ್ತಿತ್ತು. ಕ್ಷಮಾದಾನ ನೀಡಬೇಕೆಂದು ಕಸಬ್ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಪತ್ರ ನವೆಂಬರ್ 5ರಂದು ರಾಷ್ಟ್ರಪತಿ ಭವನದಿಂದ ಗೃಹ ಸಚಿವರ ಕೈ ಸೇರಿತ್ತು. ಅದನ್ನು ನ.12ರಂದು ಕಸಬ್ಗೆ ತಿಳಿಸಲಾಯಿತು. ನ.21ರಂದು ಗಲ್ಲಿಗೇರಿಸಲಾಯಿತು.
ಈ ರಹಸ್ಯವಾಗಿ ನಡೆಸಲಾದ ಕಾರ್ಯಾಚರಣೆ ಅನೇಕ ಅನುಮಾನಗಳಿಗೆ ಕೂಡ ದಾರಿಮಾಡಿಕೊಟ್ಟಿತ್ತು. ಅಜ್ಮಲ್ ಕಸಬ್ನನ್ನು ನಿಜವಾಗಲೂ ಗಲ್ಲಿಗೇರಿಸಲಾಯಿತಾ ಎಂಬ ಮಟ್ಟಿಗೆ ಪ್ರಶ್ನೆಗಳು ಉದ್ಭವಿಸಿದ್ದವು. ಕಸಬ್ ಸತ್ತಿದ್ದು ನೇಣಿಗೇರಿಸಿದ್ದರಿಂದಲ್ಲ ಡೆಂಗ್ಯೂದಿಂದ, ಇದನ್ನು ಅಲ್ಲಗಳೆಯಲೆಂದೇ ಗಲ್ಲಿಗೇರಿಸಿದ್ದ ನಾಟಕವಾಡಲಾಗಿದೆ ಎಂದು ಎಲ್ಲರೂ ಮಾತನಾಡಿಕೊಳ್ಳುವವರೆಗೆ ವದಂತಿ ಹಬ್ಬಿತ್ತು.
ಈ ಊಹಾಪೋಹ, ಅನುಮಾನ, ವದಂತಿಗಳನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಯರವಾಡಾ ಜೈಲಿನ ಪೊಲೀಸರು, ತಾವು ಕಸಬ್ನನ್ನು ಗಲ್ಲಿಗೇರಿಸಿದ್ದನ್ನು ಚಿತ್ರೀಕರಣ ಮಾಡಿಕೊಂಡಿದ್ದಾಗಿ ಹೇಳಿದ್ದಾರೆ. ಕಸಬ್ನನ್ನು ಗಲ್ಲಿಗೇರಿಸಿದ್ದಕ್ಕೆ ಸಾಕ್ಷಿಯಾಗಿ ಈ ಗಲ್ಲಿಗೇರಿಸುವ ಪ್ರಕ್ರಿಯೆಯನ್ನು ವಿಡಿಯೋ ಶೂಟ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಆ ವಿಡಿಯೋವನ್ನು ಇನ್ನೂ ಬಹಿರಂಗ ಮಾಡಬೇಕಾಗಿದೆಯಷ್ಟೆ.
ಇದೆಲ್ಲ ಏನೇ ಇರಲಿ, 2008ರ ನವೆಂಬರ್ 26ರಂದು ನಡೆಸಿದ ಭೀಕರ ದಾಳಿಯಲ್ಲಿ ಮುಂಬೈನಲ್ಲಿ 166 ಜನರನ್ನು ಪಾಕಿಸ್ತಾನ ಉಗ್ರರು ಕಂಡಕಂಡಲ್ಲಿ ಗುಂಡುಹಾರಿಸಿ ಕೊಂದುಹಾಕಿದ್ದರು. ಪಾಕಿಸ್ತಾನದಿಂದ ಸಮುದ್ರದ ಮುಖಾಂತರ ಭಾರತದೊಳಗೆ ನುಸುಳಿದ್ದ 10 ಭಯೋತ್ಪಾದಕರಲ್ಲಿ 9 ಉಗ್ರರು ಹತ್ಯೆಗೀಡಾಗಿ, ಅಜ್ಮಲ್ ಕಸಬ್ ಮಾತ್ರ ಜೀವಂತವಾಗಿ ತುಕಾರಾಂ ಓಂಬ್ಳೆ ಕೈಗೆ ಸಿಕ್ಕಿಹಾಕಿಕೊಂಡಿದ್ದ. ಈಗ ಆತನನ್ನು ಗಲ್ಲಿಗೇರಿಸಿದ ನಂತರ ಇಡೀ ಭಾರತದಲ್ಲಿ ಮತ್ತೆ ದೀಪಾವಳಿಯ ಸಂಭ್ರಮ ಕಂಡುಬಂದಿದೆ.