ಕನ್ನಡ ಬಾವುಟ ದುರ್ಬಳಕೆ ವಿವಾದ ಸದ್ಯಕ್ಕೆ ಅಂತ್ಯ
ಹಲವು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರು ಕನ್ನಡ ಧ್ವಜವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಪ್ರಕಾಶ್ ಶೆಟ್ಟಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸೋಮವಾರ (ನ.20) ನಡೆಸಲಾಯಿತು.
ಮುಖ್ಯ ನ್ಯಾಯಮೂರ್ತಿ ವಿ.ಜೆ.ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರನ್ನೊಳಗೊಂಡ ವಿಭಾಗೀಯ ಪೀಠ, ರಾಷ್ಟ್ರ ಧ್ವಜವೇ ಅಂತಿಮ. ಅದಕ್ಕಿಂತ ಮಿಗಿಲಾದ ಧ್ವಜವಿಲ್ಲ. ಹಾಗಾಗಿ ರಾಷ್ಟ್ರಧ್ವಜದೊಂದಿಗೆ ಯಾವುದೇ ಪ್ರಾದೇಶಿಕ ಧ್ವಜ ಹಾರಿಸುವಂತಿಲ್ಲ.
ಹೀಗಾಗಿ ರಾಜ್ಯ ಸರ್ಕಾರ ಕನ್ನಡ ಧ್ವಜವನ್ನು ಕಡ್ಡಾಯವಾಗಿ ಹಾರಿಸಬೇಕು ಎಂದು ಹೊರಡಿಸಿರುವ ಆದೇಶವನ್ನು ಹಿಂಪಡೆದುಕೊಂಡಿತ್ತು. ಹೀಗಾಗಿ ಈ ಬಗ್ಗೆ ಹೆಚ್ಚಿನ ತನಿಖೆ ಅಗತ್ಯವಿಲ್ಲ ಎಂದ ಪೀಠ ಅರ್ಜಿ ವಜಾಗೊಳಿಸಿತು.
ಬಾವುಟ ಹಾರಿಸಲು ಅಡ್ಡಿ ಇಲ್ಲ: ಪ್ರಕರಣದ ವಿಚಾರಣೆ ವೇಳೆ ರಾಜ್ಯ ಅಡ್ವೊಕೇಟ್ ಜನರಲ್ ವಿಜಯ್ ಶಂಕರ್ ಸರ್ಕಾರದ ಪರ ವಾದ ಮಂಡಿಸಿ, ಕನ್ನಡ ಧ್ವಜವನ್ನು ಯಾರು ಬೇಕಾದರೂ ಹಾರಿಸಬಹದು. ಆದರೆ ಕಡ್ಡಾಯ ಏನಿಲ್ಲ. ಧ್ವಜವನ್ನು ದುರ್ಬಳಕೆ ಮಾಡಿಕೊಂಡವರ ವಿರುದ್ಧ ಸರ್ಕಾರವೇ ಸೂಕ್ತ ಕ್ರಮ ತೆಗೆದುಕೊಳ್ಳುತ್ತದೆ.
ಸ್ಕೌಟ್ ಆಂಡ್ ಗೈಡ್ಸ್, ಶಾಲಾ ಕಾಲೇಜು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಕನ್ನಡ ಧ್ವಜವನ್ನು ರಾಷ್ಟ್ರಧ್ವಜಕ್ಕೆ ಅಪಮಾನವಾಗದ ರೀತಿಯಲ್ಲಿ ಹಾರಾಟ ಮಾಡುತ್ತಿದ್ದಾರೆ ಎಂದು ಪೀಠದ ಗಮನಕ್ಕೆ ತಂದರು. ವಾದವನ್ನು ಆಲಿಸಿದ ಪೀಠ, ಈ ಬಗ್ಗೆ ಯಾವುದೇ ತನಿಖೆಯ ಅಗತ್ಯವಿಲ್ಲ ಎಂದು ಅರ್ಜಿ ವಜಾಗೊಳಿಸಿತು.
ಆದರೆ, ರಾಜಕಾರಣಿಗಳು, ಕನ್ನಡ ಪರ ಸಂಘಟನೆ ನಾಯಕರು ಬಾವುಟ ದುರ್ಬಳಕೆ ಮಾಡುತ್ತಿರುವ ಬಗ್ಗೆ ಸರ್ಕಾರಿ ವಕೀಲರು ಯಾವುದೇ ಸ್ಪಷ್ಟನೆ ನೀಡಲಿಲ್ಲ.
ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಲ್ಲಾ ಸರ್ಕಾರಿ ಕಚೇರಿ ಹಾಗೂ ಸಂಸ್ಥೆಗಳ ಮೇಲೆ ಕನ್ನಡ ಬಾವುಟ ಹಾರಿಸುವಂತೆ ಬಜೆಟ್ ಮಂಡಿಸುವ ವೇಳೆ ಸುತ್ತೋಲೆ ಹೊರಡಿಸಿದ್ದರು. ಈ ಆದೇಶವನ್ನು 4.10.2012ಕ್ಕೆ ಅನುಗುಣವಾಗಿ ವಾಪಸ್ ಪಡೆದಿರುವುದಾಗಿ ಶೆಟ್ಟರ್ ಸರ್ಕಾರ ಪ್ರಮಾಣ ಪತ್ರದಲ್ಲಿ ಸ್ಪಷ್ಟಪಡಿಸಿದೆ.
ರಾಜ್ಯೋತ್ಸವ ಆಚರಣೆ ಆರಂಭವಾಗಿ 57 ವರ್ಷ ಕಳೆದು ರಾಜ್ಯಕ್ಕೆ ಒಂದು ಅಧಿಕೃತ ಧ್ವಜ ಇಲ್ಲ ಎನ್ನುವುದು ಬೇಸರದ ಸಂಗತಿಯಾದರೂ, ಬಳಕೆಯಲ್ಲಿರುವ ಹಳದಿ ಕೆಂಪು ಜೋಡಣೆಯ ಧ್ವಜವನ್ನೇ ಅಧಿಕೃತ ಧ್ವಜ ಎನ್ನಲು ಅನೇಕ ಕನ್ನಡಿಗರು ಸಿದ್ಧವಿದ್ದಾರೆ. ಅದು ಅಧಿಕೃತವೋ, ಅನಧಿಕೃತವೋ ಚಿಂತೆ ಮಾಡುವ ಗೋಜಿಗೆ ಯಾರು ಹೋಗಿಲ್ಲ. ಆ ರಗಳೆ ಸರ್ಕಾರಕ್ಕೆ ಮಾತ್ರ ಇದೆ.
ಸರ್ಕಾರಿ ಆದೇಶ ಪಾಲನೆಗಿಂತ ಕನ್ನಡ ಧ್ವಜ ಭಾವನಾತ್ಮಕ ಸಂಕೇತವಾಗಿರುವುದರಿಂದ ಧ್ವಜ ಹಾರಿಸುವುದರಲ್ಲಿ ತಪ್ಪೇನಿಲ್ಲ. ಕೋರ್ಟ್ ಆದೇಶ ಇರುವುದು ಎಲ್ಲಾ ಅಧಿಕೃತ ಧ್ವಜಗಳನ್ನು ಬಳಸುವುದರ ಬಗ್ಗೆ ಸಂವಿಧಾನ ಹೇಳಿರುವ ನಿಯಮಗಳೇ ಆಗಿದೆ.
ಧ್ವಜ ವಿರೂಪಗೊಳಿಸದೆ, ಧ್ವಜದ ಮಧ್ಯದಲ್ಲಿ ಪುಢಾರಿಗಳ ಚಿತ್ರ ಹಾಕಿ ಏರಿತು ಹಾರಿತು ನೋಡು ನಮ್ಮ ಬಾವುಟ ಎಂದರೆ ಮಾತ್ರ ಅದು ದ್ರೋಹವಾದೀತು ಎಚ್ಚರ.