ಒನಕೆಯಿಂದ ಕುಡುಕ ಗಂಡನ ತಲೆ ಒಡೆದ ಪತ್ನಿ
ಸೋಮವಾರ(ನ.19) ಕುಡಿದು ಬಂದು ಪ್ರತಿದಿನ ಕಿರುಕುಳ ನೀಡುತ್ತಿದ್ದ ಗಂಡನ ತಲೆಗೆ ಹೆಂಡತಿ ಒನಕೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದಾಗ ದಂಪತಿಯ ನಾಲ್ಕು ವರ್ಷದ ಮಗು ಮೂಕ ಪ್ರೇಕ್ಷಕನಾಗಿ ಎಲ್ಲವನ್ನು ನೋಡುತ್ತಿತ್ತು ಎನ್ನಲಾಗಿದೆ.
ನಟರಾಜ ಲೇಔಟ್ ನ ನಿವಾಸಿ 35 ವರ್ಷದ ಉದಯ ಕುಮಾರ್ ಕೊಲೆಯಾದ ವ್ಯಕ್ತಿ. ಆತನ ಪತ್ನಿ 30 ವರ್ಷದ ಶಶಿರೇಖಾ ಕೊಲೆಗೈದ ಮೇಲೆ ನೆರೆಹೊರೆಯವರಿಗೆ ವಿಷಯ ತಿಳಿಸಿ ನಂತರ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾಳೆ.
ವಾಟರ್ ಟ್ಯಾಂಕರ್ ಚಾಲಕನಾಗಿದ್ದ ಉದಯ್ ಕುಮಾರ್ ಕ್ವಾಟರ್ ಹಾಕದೆ ಮನೆಗೆ ಬರುತ್ತಿರಲಿಲ್ಲ. ಕುಡಿದ ಮತ್ತಿನಲ್ಲಿ ಹೆಂಡತಿಗೆ ಹಿಗ್ಗಾಮುಗ್ಗಾ ಹೊಡೆಯುತ್ತಿದ್ದ. ಎಷ್ಟು ಹೇಳಿದರೂ ಕೇಳುತ್ತಿರಲಿಲ್ಲ. ಕೂಲಿ ಮಾಡಿ ಗಳಿಸಿಟ್ಟ ಹಣವನ್ನು ದೋಚಿಕೊಂಡು ಮತ್ತೆ ಕುಡಿದು ಬರುತ್ತಿದ್ದ ಎಂದು ತಿಳಿದು ಬಂದಿದೆ.
ಎರಡು ವರ್ಷದ ಹಿಂದೆ ನಟರಾಜ ಲೇಔಟ್ ಗೆ ಬಂದಿದ್ದ ಈ ದಂಪತಿ ಒಂದು ದಿನ ಕೂಡಾ ಸುಖವಾಗಿ ಸಂಸಾರ ಮಾಡಿದ್ದು ನೋಡಿಲ್ಲ. ಪ್ರತಿದಿನ ಏನಾದರೂ ವಿಷಯಕ್ಕೆ ಜಗಳ ನಡೆಯುತ್ತಲೇ ಇತ್ತು ಎಂದು ನೆರೆಮನೆಯವರು ಹೇಳಿಕೆ ನೀಡಿದ್ದಾರೆ.
ಕಳೆದ ರಾತ್ರಿ ಕೂಡಾ ಉದಯ್ ಕುಮಾರ್ ಜಗಳವಾಡಿದ್ದಾನೆ. ಗಾರೆ ಕೆಲಸಕ್ಕೆ ಹೋಗಿ ಸಂಸಾರ ನಿಭಾಯಿಸುತ್ತಿದ್ದ ಶಶಿ ರೇಖಾ ಸಿಟ್ಟಿಗೆದ್ದು ಉದಯ್ ಕುಮಾರ್ ತಲೆಗೆ ಜೋರಾಗಿ ಒನಕೆಯಿಂದ ಬಾರಿಸಿದ್ದಾಳೆ. ನೆತ್ತಿಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಕೆಟ್ಟದಾಗಿ ಚೀರಿಕೊಂಡ ಉದಯ್ ಅಲ್ಲೇ ಕುಸಿದು ಬಿದ್ದಿದ್ದಾನೆ. ಆತನ ತಲೆ, ಕಿವಿಯಿಂದ ತೀವ್ರವಾಗಿ ರಕ್ತಸೋರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಶಶಿರೇಖಾಳನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಉದಯ್ ಕುಮಾರ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.