ಆಸ್ತಿ ಮುಟ್ಟುಗೋಲು ಕಟ್ಟಾ ಸುಬ್ರಮಣ್ಯ ನಾಯ್ಡು ಕಂಗಾಲು
ತಮ್ಮ ಸಚಿವ ಸ್ಥಾನ ದುರುಪಯೋಗಪಡಿಸಿಕೊಂಡು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಿಂದ (ಕೆಐಎಡಿಬಿ) ತಮ್ಮದೇ ಕುಟಂಬಸ್ಥರ ಇಟಾಸ್ಕಾ ಕಂಪನಿಗೆ ಭೂಮಿ ಕೊಡಿಸಿದ್ದಾರೆಂದು ಆರೋಪಿಸಿ, ಜಾರಿ ನಿರ್ದೇಶನಾಲಯವು ಲೇವಾದೇವಿ ಕಾಯ್ದೆ 2002ರ (money laundering) ಅಡಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ಪ್ರಕರಣ ದಾಖಲಿಸಿಕೊಂಡಿದೆ.
'ಜಾರಿ ನಿರ್ದೇಶನಾಲಯವು ನಾಯ್ಡು ಅವರಲ್ಲದೆ, ಅವರ ಪುತ್ರ ಕಟ್ಟಾ ಜಗದೀಶ್, ಇಟಾಸ್ಕಾ ಸಾಫ್ಟ್ವೇರ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್ ವಿ ಶ್ರೀನಿವಾಸ್, ಬಿಬಿಎಂಪಿ ಸದಸ್ಯ ಎಂ ಗೋಪಿ ಅವರ ಆಸ್ತಿಯನ್ನು ಜಪ್ತಿ ಮಾಡಿದ್ದು, ನ್ಯಾಯಾಲಯದಲ್ಲಿ ಪ್ರಕರಣವನ್ನೂ ದಾಖಲಿಸಿದೆ.
ಇಟಾಸ್ಕಾ ಸಂಸ್ಥೆಗೆ ಭೂಮಿಯನ್ನು ಕೊಡಿಸಲು 87 ಕೋಟಿ ರೂ ಲಂಚ ಪಡೆದಿದ್ದಾರೆ ಎಂಬ ಆರೋಪವನ್ನು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಅವರ ಪುತ್ರ ಹಾಗೂ ಪಾಲಿಕೆ ಸದಸ್ಯ ಜಗದೀಶ್ ಎದುರಿಸುತ್ತಿದ್ದಾರೆ.
'ಎಲ್ಲ ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ಮುಂಜಾಗ್ರತಾ ಕ್ರಮವಾಗಿ ಎರಡು ತಿಂಗಳ ಹಿಂದೆಯೇ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದ ಮೇಲೆ ನೋಟಿಸ್ ನೀಡಿತ್ತು. ಆರೋಪದ ವಿರುದ್ಧದ ಆಕ್ಷೇಪಗಳನ್ನು ಆಗಲೇ ಸಲ್ಲಿಸಲಾಗಿದೆ.
ಒಂದೆಡೆ ಕಟ್ಟಾ ಸೇರಿದಂತೆ ನಾಲ್ವರಿಗೂ ಅವರ ಬ್ಯಾಂಕ್ ಖಾತೆ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ಅವರ ಆಸ್ತಿಯನ್ನು ಪರಭಾರೆ ಮಾಡಲೂ ಆಗುತ್ತಿಲ್ಲ' ಎಂದು ತಮ್ಮ ವಕೀಲರ ಮೂಲಕ ಕಟ್ಟಾ ನಾಯ್ಡು ಅವರು ಲೋಕಾಯುಕ್ತ ಕೋರ್ಟಿಗೆ ಶನಿವಾರ ಅಲವತ್ತುಕೊಂಡಿದ್ದಾರೆ. ಕಟ್ಟಾ ಪರ ವಕೀಲ ಸಿಎಚ್ ಜಾಧವ್ ಅವರು ಜಿಲ್ಲಾ ವಿಶೇಷ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಶನಿವಾರ ಈ ಮಾಹಿತಿ ಸಲ್ಲಿಸಿದ್ದಾರೆ.
'ಪ್ರಕರಣ ನಡೆದ ಅವಧಿಯಲ್ಲಿ ಸಂಪಾದಿಸಿದ ಆಸ್ತಿಯನ್ನು ಮಾತ್ರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಕಾನೂನು ಹೇಳುತ್ತದೆ. ಇದಕ್ಕೂ ಮೊದಲು ಖರೀದಿಸಿದ ಆಸ್ತಿಯನ್ನೂ ಜಪ್ತು ಮಾಡಲಾಗಿದೆ. ಈ ಕ್ರಮದ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗುವುದು ಎಂದು ಕಟ್ಟಾ ವಕೀಲರು ಹೇಳಿದ್ದಾರೆ.