ಬಾಳಾ ಠಾಕ್ರೆ ಮೂಲತಃ ಮುಂಬೈವಾಲಾ ಅಲ್ಲ !
ಭೂಮಿ ಪುತ್ರ: ಈ ಸಂರ್ಭದಲ್ಲಿ, ಮುಂಬೈಕರ್ ಗಾಗಿ ಮಿಡಿಯುತ್ತಿದ್ದ ಕಟ್ಟರ್ ಬಾಳಾ ಠಾಕ್ರೆ ಸ್ವತಃ ಮಹಾರಾಷ್ಟ್ರ ಮೂಲದವರಾಗಿದ್ದರೇ? ಎಂಬ ಅನುಮಾನ ಈಗ ಕಾಡುತ್ತಿದೆ. ಭಾರತದ ಪತ್ರಿಕಾ ಮಂಡಳಿಯ ಅಧ್ಯಕ್ಷ ಮಾರ್ಖಂಡೇಯ ಖಟ್ಜು ಅವರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ Hindu ಪತ್ರಿಕೆಯ ಸಂಪಾದಕೀಯದಲ್ಲಿ ಖಟ್ಜು ಹೀಗೆ ಹೇಳಿದ್ದಾರೆ: ಶಿವಸೇನೆಯ ಮುಖ್ಯಸ್ಥನ ಸಿದ್ಧಾಂತ ಪ್ರಾದೇಶಿಕತೆಗೆ ಮಣೆ ಹಾಕುವುದು. ಅವರು ಅತ್ಯಂತ ಶ್ರದ್ಧೆಯಿಂದ ಪಾಲಿಸಿಕೊಂಡು ಬಂದಿದ್ದ 'ಭೂಮಿ ಪುತ್ರ' ನೀತಿಯ ಪ್ರಕಾರ ಕೇವಲ ಮಹಾರಾಷ್ಟ್ರದವರಿಗೆ ಮಾತ್ರವೇ ಉದ್ಯೋಗಾವಕಾಶ ಲಭಿಸಬೇಕು.
ಮೂಲತಃ ಭಾರತ ವಲಸಿಗರ ದೇಶ. ಇಲ್ಲಿನ ಜನ ಒಂದು ಕಡೆ ನೆಲೆ ನಿಂತವರಲ್ಲ. ಇಲ್ಲಿಂದಲ್ಲಿಗೆ ಅಲ್ಲಿಂದ ಇಲ್ಲಿಗೆ ವಲಸೆ ಹೋಗಿ ವಾಸ್ತವ್ಯ ಬದಲಿಸುತ್ತಾ ಅದನ್ನೇ ತ,ಮ್ಮ ಕರ್ಮಭೂಮಿ ಎಂದು ಪರಿಗಣಿಸುತ್ತಿದ್ದರು.
ಈ ಹಿನ್ನೆಲೆಯಲ್ಲಿ, ಮಹಾರಾಷ್ಟ್ರದ ನಿಜವಾದ ಭೂಮಿಪುತ್ರರು ಅಂದರೆ ದ್ರಾವಿಡರಿಗಿಂತ ಮುಂಚಿನವರು. ಇವರನ್ನು ಆದಿವಾಸಿಗಳು ಎಂದೂ ಗುರುತಿಸಲಾಗುತ್ತದೆ, ಅಂದರೆ ಬಿಲ್ಲವರು, ಗೊಂಡಾಗಳು, ಸಂತಲರು, ತೋಡಾಗಳು ಹೀಗೆ ಇನ್ನೂ ಹಲವರು. ಇಂದಿನ ಜನಸಂಖ್ಯೆಯಲ್ಲಿ ಈ ಮೂಲವಾಸಿಗಳ ಸಂಖ್ಯೆ ಶೇ. 7-8 ಇರಬಹುದಷ್ಟೇ.
ಪರಿಸ್ಥಿತಿ ಹೀಗಿರುವಾಗ ಠಾಕ್ರೆ ಕುಟುಂಬವೂ ಸೇರಿದಂತೆ ಈಗಿರುವ ಶೇ. 92ರಷ್ಟು ಮಹಾರಾಷ್ಟ್ರಿಗರು ಮೂಲತಃ ಮಹಾರಾಷ್ಟ್ರಿಗರು ಅಲ್ಲ. ಅವರೆಲ್ಲ ಹೊರಗಿನವರೇ! ಶೇ. 7-8 ರಷ್ಟಿರುವ ಬಿಲ್ಲವರು ಮತ್ತಿತರ ಬುಡಕಟ್ಟಿನವರು ಮೂಲ ಮಹಾರಾಷ್ಟ್ರಿಗರು ಎಂದು ಖಚಿತವಾಗಿ ಹೇಳಬಹುದು.
ಅಷ್ಟೇ ಅಲ್ಲ. ಶಿವಸೇನೆ ಮತ್ತು ಬಾಳಾ ಠಾಕ್ರೆಯ ರಾಜಕೀಯ ನಿಲುವು ಸಾಂವಿಧಾನಿಕ ಹಕ್ಕಿಗೆ ಚ್ಯುತಿ ತರುವಂತಹುದು ಎನ್ನುತ್ತಾರೆ ಸುಪ್ರೀಂಕೋರ್ಟಿನ ನಿವೃತ್ತ ಜಡ್ಜ್. ಈಗಿನ ದಿನಮಾನದಲ್ಲಿ ಅಗತ್ಯವಿರುವದು ಐಕ್ಯತೆಯ ಮಂತ್ರ ಎಂಬುದನ್ನು ಎಲ್ಲರೂ ಅರಿಯಬೇಕು ಎಂದೂ ಖಟ್ಜು ಕಿವಿಮಾತು ಹೇಳಿದ್ದಾರೆ.