ಅಬ್ಬಾ! ಚೆಸ್ ಸ್ಪರ್ಧೆಗೂ ಈ ಪಾಟಿ ಸಂಭ್ರಮವಾ?
ಉಡುಪಿ, ನ. 19: ಅಬ್ಬಾ! ಚದುರಂಗ ಸ್ಪರ್ಧೆಗೂ ಈ ಪಾಟಿ ಸಂಭ್ರಮ ಪಡೋದಾ? ಉಡುಪಿ ಜಿಲ್ಲೆಯೇ ಹಾಗೆ. ಸಾಕ್ಷರತೆಯಲ್ಲಿ ಸದಾ ಮುಂಚೂಣಿಯಲ್ಲಿರುವ ಉಡುಪಿಯಲ್ಲಿ ಎಲ್ಲದಕ್ಕೂ ಸಂಭ್ರಮ! ಅಂತಹುದರಲ್ಲಿ ಜ್ಞಾನಕ್ಕೆ ಸಾಣೆ ಹಿಡುವಂತಹ ಚೆಸ್ ಆಟ ಆಯೋಜಿಸಿದರೆ ಸಂಭ್ರಮಿಸದಿರುತ್ತದೆಯೇ ಉಡುಪಿ? ಅದೂ ರಾಜ್ಯ ಮಟ್ಟದ ಸ್ಪರ್ಧೆ ನಡೆದಿರುವಾಗ.
ಹಾಗಾಗಿಯೇ ಉಡುಪಿ ಮೂರು ದಿನಗಳಿಂದ ಹುಚ್ಚೆದ್ದು ಕುಣಿಯುತ್ತಿದೆ. ಮೊನ್ನೆ ಶನಿವಾರದಿಂದ ಪ್ರಾಥಮಿಕ ಮತ್ತು ಹೈಸ್ಕೂಲ್ ಬಾಲಕ-ಬಾಲಕಿಯರಿಗಾಗಿ ರಾಜ್ಯಮಟ್ಟದ ಚೆಸ್ ಚಾಂಪಿಯನ್ ಷಿಪ್ ನಡೆಯುತ್ತಿದೆ. ಸಂತೆಕಟ್ಟೆಯಲ್ಲಿರುವ ಮೌಂಟ್ ರೋಸರಿ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ ನಡೆದಿದೆ. 'ನೋಡಲೆರಡು ಕಣ್ಣುಗಳು ಸಾಲದಮ್ಮಾ' ಎನ್ನುವಂತಿದೆ ಈ ಪಂದ್ಯಾವಳಿಯ ವಿಜೃಂಭಣೆ.
ಚೆಸ್ ಚಾಂಪಿಯನ್ ಷಿಪ್ ಉದ್ಘಾಟನೆ ಸಮಾರಂಭಕ್ಕೂ ಮುನ್ನ ಸಂಜೆ ಕಾಲದಲ್ಲಿ ಅಭೂತಪೂರ್ವ ಮೆರವಣಿಗೆ ನಡೆಯಿತು. ಸ್ಪರ್ಧಾಳುಗಳು, ವಿದ್ಯಾರ್ಥಿ/ವಿದ್ಯಾರ್ಥಿನಿಯರು, ಸ್ತಬ್ದ ಚಿತ್ರಗಳು, ಚಂಡೆ, ಹುಲಿವೇಷ, ಶಾಲಾ ಬ್ಯಾಂಡ್ ಸೆಟ್, ಕಳಶ ಹೊತ್ತ ನಾರಿಯರು, ಬಣ್ಣದ ಬಣ್ಣದ ಬೃಹದಾಕಾರದ ಕೊಡೆಗಳು ಇನ್ನೂ ಇನ್ನೂ ಏನೇನೂ ಅಲ್ಲಿ ಮೈದಾಳಿತ್ತು.
ನೆರೆದಿದ್ದವರ ಮೈಮನ ಪುಳಕಗೊಳಿಸಿತ್ತು. ಸ್ಪರ್ಧಿಗಳು ಮತ್ತಷ್ಟು ಉತ್ತೇಜಿತರಾದರೆ ವೀಕ್ಷಣೆಗೆ ಸೀಮಿತವಾಗಿದ್ದ ಮಂದಿ 'ನಾನೂ ಚೆಸ್ ಕಲಿತಿದ್ದರೆ ಬೊಂಬಾಟಾಗಿರುತ್ತಿತ್ತು!' ಎಂದು ಉದ್ಘರಿಸಿದ್ದಂತೂ ನಿಜ. 'ಬುದ್ಧಿವಂತರ ಆಟ' ಚೆಸ್ ಸೆಳೆತವೇ ಹಾಗೆ.
ಉಡುಪಿ-ಚಿಕ್ಕಮಗಳೂರಿನ ಸಂಸದ ಕೆ ಜಯಪ್ರಕಾಶ್ ಹೆಗ್ಡೆ ಅವರು ಪಂದ್ಯಾವಳಿಯನ್ನು ಉದ್ಘಾಟಿಸಿ, ಸ್ಪರ್ಧಿಗಳಿಗೆ ಶುಭ ಹಾರೈಸಿದರು. 34 ಜಿಲ್ಲೆಗಳಿಂದ 680 ಸ್ಪರ್ಧಿಗಳು ಕೂಟದಲ್ಲಿ ಪಾಲ್ಗೊಂಡಿದ್ದಾರೆ.
ನಾಳೆ ಮಂಗಳವಾರ ಪಂದ್ಯಾವಳಿಗೆ ತೆರೆ ಬೀಳಲಿದೆ. ಮುಕ್ತಾಯ ಸಮಾರಂಭವನ್ನೂ ಇದೇ ರೀತಿ ಅದ್ದೂರಿಯಿಂದ ಆಚರಿಸಿ, ಚೆಸ್ ಆಟಕ್ಕೆ ಸೂಕ್ತ ಮಾನ್ಯತೆ ದಕ್ಕಿಸಿಕೊಡುವ ಇರಾದೆ ಸಂಘಟಕರದ್ದಾಗಿದೆ. ಜಿಲ್ಲಾಡಳಿತ ಮತ್ತು ಮೌಂಟ್ ರೋಸರಿ ಆಂಗ್ಕ ಮಾಧ್ಯಮ ಶಾಲೆ ಜಂಟಿಯಾಗಿ ಈ ಪಂದ್ಯಾವಳಿಯನ್ನು ಆಯೋಜಿಸಿವೆ.