ಬಿಎಸ್ ವೈ ನಿಂದ ಬಿಜೆಪಿ ಅಲ್ಲಾಡಿಸಲು ಸಾಧ್ಯವಿಲ್ಲ
ಜನಪರ ನಾಯಕರಾದ ಯಡಿಯೂರಪ್ಪ ಅವರು, ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸಿ ಎಂದು ಸವಾಲು ಹಾಕುವ ಮೊದಲು ಚುನಾಯಿತ ಸರ್ಕಾರ ಕೆಡವಿದರೆ ಜನರಿಗೆ ತೊಂದರೆಯಾಗುತ್ತದೆ. ಅಕಾಲಿಕ ಚುನಾವಣೆ ಎಷ್ಟು ಹೊರೆಯಾಗುತ್ತದೆ ಎಂಬ ಅರಿವಿಲ್ಲದೆ ಮಾತನಾಡುತ್ತಿದ್ದಾರೆ.
ಬಿಜೆಪಿ ಸರ್ಕಾರದ ಸಚಿವರು, ರಾಜ್ಯಾಧ್ಯಕ್ಷರಿಗೆ ಸವಾಲು ಹಾಕುತ್ತಾ, ತೆಪ್ಪಗೆ ಇರದಿದ್ದರೆ ಸರ್ಕಾರ ಉಳಿಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರತಿ ನಿತ್ಯ ಧಮಕಿ ಹಾಕುತ್ತಲೇ ಇದ್ದಾರೆ. ಇದಕ್ಕೆ ಹೆಚ್ಚಿನ ಮಾನ್ಯತೆ ನೀಡಬೇಕಿಲ್ಲ. ಮಾಡುವವರು ಹೇಳಿ ಕೇಳಿ ಗದ್ದಲ ಎಬ್ಬಿಸಿ ಮಾಡುವುದಿಲ್ಲ ಎಂದು ಬಚ್ಚೇಗೌಡ ಹೇಳಿದರು.
ಬಿಇಎಲ್ ಸಂಸ್ಥೆ 50 ಲಕ್ಷ ರು ವೆಚ್ಚದಲ್ಲಿ ಪುನರ್ ನಿರ್ಮಾಣ ಮಾಡಿರುವ ನೆಲಮಂಗಲ ತಾಲೂಕಿನ ವಿಶ್ವೇಶ್ವರಪುರಂನ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಕಾರ್ಮಿಕ ಸಚಿವ ಬಿಎನ್ ಬಚ್ಚೇಗೌಡ ಉದ್ಘಾಟಿಸಿದರು.
ಕೆಜೆಪಿ ಸೇರುವುದಿಲ್ಲ: ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಗೆಲುವು ಸಾಧಿಸಿ ಅಧಿಕಾರ ಹಿಡಿಯಲಿದೆ. ಹೀಗಾಗಿ ಬೇರೆ ಪಕ್ಷ ಅರಸಿ ಹೋಗುವುದಿಲ್ಲ. ಬಿಜೆಪಿಯಲ್ಲಿದ್ದು ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡಬೇಕಿದೆ ಎಂದರು.
ಡಿ.9 ರಂದು ಹಾವೇರಿಯಲ್ಲಿ ನಡೆಯಲಿರುವ ಕೆಜೆಪಿ ಉದ್ಘಾಟನಾ ಸಮಾರಂಭಕ್ಕೆ ನನಗೆ ಆಹ್ವಾನ ಬಂದಿಲ್ಲ. ಆಹ್ವಾನ ಸಿಕ್ಕರೂ ನಾನು ಹೋಗುವುದಿಲ್ಲ. ಬಿಜೆಪಿ ತೊರೆದು ಕೆಜೆಪಿ ಸೇರುವುದಿಲ್ಲ ಎಂದು ಬಚ್ಚೇಗೌಡ ಹೇಳಿದರು.
ಬಿಇಎಲ್ ಸಂಸ್ಥೆ ಒಟ್ಟು ನಾಲ್ಕೂವರೆ ಕೋಟಿ ರು ವೆಚ್ಚದಲ್ಲಿ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ವಿವಿಧೆಡೆ ಶಾಲೆಗಳನ್ನು ಅಭಿವೃದ್ಧಿ ಪಡಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಸಚಿವರು ಹೊಗಳಿದರು.