ಠಾಕ್ರೆ ಶವಯಾತ್ರೆ: 20 ಲಕ್ಷ ಮಹಾ ಜನಸ್ತೋಮ
ಶಿವಸೇನೆಯ ವರಿಷ್ಠ ಬಾಳಾ ಠಾಕ್ರೆಯವರ(86) ನಿಧನದ ಹಿನ್ನೆಲೆಯಲ್ಲಿ ಮರಾಠಿ ಸಂಘಟನೆಗಳು ಭಾನುವಾರ (ನ.19) ಬಂದ್ ಆಚರಿಸಲು ನಿರ್ಧರಿಸಿದ್ದವು.
ಮಹಾರಾಷ್ಟ್ರ ಏಕೀರಣ ಸಮಿತಿ, ಯುವ ಅಘಾಡಿ, ಶಿವಸೇನೆ ಸೇರಿದಂತೆ ವಿವಿಧ ಸಂಘಟನೆಗಳು ಭಾನುವಾರ ಶಾಂತಿಯುತ ಬಂದ್ ಆಚರಿಸಲು ಕರೆ ನೀಡಿವೆ.
ಭಾನುವಾರ ಬೆಳಗಾವಿಯ ಸಂಭಾಜಿ ವೃತ್ತದಲ್ಲಿ ಸಂತಾಪ ಸೂಚಕ ಸಭೆ ನಡೆಸಿ ಅಗಲಿದ ಮರಾಠಿ ನಾಯಕ ಠಾಕ್ರೆಗೆ ಗೌರವ ಸೂಚಿಸಲಾಗಿದೆ. ಉಳಿದಂತೆ ಯಾವುದೇ ಅಹಿತಕರ ಘಟನೆ ನಡೆದ ವರದಿಯಾಗಿಲ್ಲ.
ನಿಪ್ಪಾಣಿ ನಗರದಲ್ಲಿ ಮಾತ್ರ ಬಂದ್ ಯಶಸ್ವಿಯಾಗಿದ್ದು, ಅಂಗಡಿ ಮುಂಗಟ್ಟುಗಳು ಮುಚಿದ್ದು, ಮರಾಠಿ ಸಂಘಟನೆಗಳು ಅಲ್ಲಲ್ಲಿ ಶಾಂತಿಯುತವಾಗಿ ಸಂತಾಪ ಸಭೆ ನಡೆಸಿದ್ದಾರೆ. ಆದರೆ, ಆಯಕಟ್ಟಿನ ಜಾಗಗಳಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.
ಯಾವುದೇ ಬಗೆಯ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಳಗಾವಿ, ಚಿಕ್ಕೋಡಿ, ಖಾನಾಪುರ ಹಾಗೂ ನಿಪ್ಪಾಣಿಗಳಲ್ಲಿ 2 ಕೆಎಸ್ಆರ್ಪಿ ಹಾಗೂ 5 ಡಿಆರ್ಎ ತುಕಡಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಜನತೆ ವದಂತಿಗಳಿಗೆ ಕಿವಿಗೊಡಬಾರದು. ಯಾವುದೇ ರೀತಿಯ ಘಟನೆಯನ್ನು ಎದುರಿಸಲು ಸಜ್ಜಾಗುವಂತೆ ಪೊಲೀಸ್ ಇಲಾಖೆಗೆ ಆದೇಶ ನೀಡಲಾಗಿದೆ ಎಂದು ಸಂದೀಪ್ ಪಾಟೀಲ್ ಹೇಳಿದ್ದಾರೆ.
ಮಹಾರಾಷ್ಟ್ರ ಏಕೀಕರಣ ಸಮಿತಿ ಬೆಳಗಾವಿಯಲ್ಲಿ ತುರ್ತು ಸಭೆ ನಡೆಸಿ ಠಾಕ್ರೆ ನಿಧಾನಕ್ಕೆ ಸಂತಾಪ ಸೂಚಿಸಿದೆ. ಠಾಕ್ರೆ ಹಾಕಿಕೂಟ್ಟ ಹೋರಾಟದ ಹಾದಿಯಲ್ಲೇ ನಾವು ಮುಂದುವರಿಯುತ್ತೇವೆ ಎಂದು ಮರಾಠ ಮುಖಂಡ ಸಂಭಾಜಿರಾವ್ ಪಾಟೀಲ್ ಹೇಳಿದ್ದಾರೆ.
ಕನ್ನಡಿಗರು, ಗುಜರಾತಿ, ಬಿಹಾರಿ, ಮಾರ್ವಾಡಿಗಳ ವಿರುದ್ದ ಪದೇ ಪದೇ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದ ಕಟ್ಟಾ ಹಿಂದೂತ್ವವಾದಿ ಬಾಳ್ ಠಾಕ್ರೆ ಶನಿವಾರ (ನ. 17) ಅಪರಾಹ್ನ 3.30ರ ಸುಮಾರಿಗೆ ಮುಂಬೈ ನಲ್ಲಿ ನಿಧನ ಹೊಂದಿದರು..
ಅಂತಿಮ ಯಾತ್ರೆ: ಮುಂಬೈನ ಶಿವಾಜಿ ಪಾರ್ಕಿನಲ್ಲಿ ಬೆಳಗ್ಗೆ 9 ಗಂಟೆಯಿಂದ ಸಾರ್ವಜನಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಸಂಜೆ 6 ಗಂಟೆ ವೇಳೆಗೆ ಅಂತ್ಯ ಸಂಸ್ಕಾರ ನಡೆಸಲಾಗುತ್ತದೆ.
ಸುಮಾರು 20 ಲಕ್ಷ ಜನರು ಪ್ರವಾಹೋಪಾದಿಯಲ್ಲಿ ಸಾಗುತ್ತಿದ್ದಾರೆ. 1 ಲಕ್ಷ ಆಟೋ, 30 ಸಾವಿರ ಟ್ಯಾಕ್ಸಿಗಳು ಸಂಚಾರ ಸ್ಥಗಿತಗೊಳಿಸಿದ್ದು, ಇಡೀ ಮುಂಬೈ ಈಗ ದಾದರ್ ನಲ್ಲಿರುವ ಶಿವಾಜಿ ಪಾರ್ಕಿನತ್ತ ತೆರಳುತ್ತಿದೆ.
ಮನೋಹರ್ ಜೋಶಿ, ಗೋಪಿನಾಥ್ ಮುಂಡೆ ಮುಂತಾದ ನಾಯಕರು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಎಂಎನ್ ಎಸ್ ಮುಖಂಡ ರಾಜ್ ಠಾಕ್ರೆ ಅವರು ಕೂಡಾ ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದು ಪ್ರತ್ಯೇಕ ದಂಡಿನೊಂದಿಗೆ ಶಿವಾಜಿ ಪಾರ್ಕ್ ನತ್ತ ಸಾಗಿದ್ದಾರೆ.