ಮಂಗ್ಳೂರು : ಡಿಸಿ ಚನ್ನಪ್ಪಗೌಡ ದಿಢೀರ್ ವರ್ಗಾವಣೆ
ಡಾ.ಸಿ.ಸೋಮಶೇಖರ್-ಅಬಕಾರಿ ಆಯುಕ್ತ, ಡಾ.ಎನ್. ಎಸ್.ಚನ್ನಪ್ಪಗೌಡ- ಕೆಎಸ್ಸಾರ್ಟಿಸಿ ನಿರ್ದೇಶಕ, ಎಸ್.ಶಂಕರ ನಾರಾ ಯಣ-ಕೃಷಿ ಮಾರುಕಟ್ಟೆ ಇಲಾಖೆ ನಿರ್ದೇಶಕ ಹಾಗೂ ಎನ್. ಪ್ರಕಾಶ್-ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಯನ್ನಾಗಿ ವರ್ಗಾಯಿಸಿ ಸರಕಾರ ಆದೇಶ ಹೊರಡಿಸಿದೆ.
ಈ ಪೈಕಿ ಚನ್ನಪ್ಪ ಗೌಡರ ವರ್ಗಾವಣೆ ಹಿಂದೆ ಸ್ಥಳೀಯ ಶಾಸಕ ಯೋಗೀಶ್ ಅವರ ಕೈವಾಡವಿದೆ. ಇಬ್ಬರ ನಡುವೆ ಇತ್ತೀಚೆಗೆ ನಡೆದ ಮಾತಿನ ಚಕಮಕಿ ಡಿಸಿ ವರ್ಗಾವಣೆಗೆ ಕಾರಣವಾಗಿದೆ ಎಂಬ ಸುದ್ದಿ ಇದೆ.
ಅಂಬೇಡ್ಕರ್ ಭವನಕ್ಕೆಂದು ನಿಗದಿಯಾದ ಸ್ಥಳವನ್ನು ಸ್ಥಳಾಂತರಿಸಲು ಶಾಸಕ ಯೋಗೀಶ್ ಅವರೇ ಕಾರಣ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಚೆನ್ನಪ್ಪರ ಗೌಡರನ್ನುಎತ್ತಂಗಡಿ ಮಾಡಲಾಗಿದೆ ಎನ್ನಲಾಗಿದೆ.
ಪ್ರಭಾವಿ ಸಚಿವ ಸಿ.ಟಿ ರವಿ 'ಯೋಗೀಶಣ್ಣ'ನಿಗಾದ ಬೇಸರ ಶಮನಗೊಳಿಸಲು ಸರ್ಕಾರದ ಮಟ್ಟದಲ್ಲಿ ಮಾತಾಡಿ ಈ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ನಗರದ ಉರ್ವಾಸ್ಟೋರಿನಲ್ಲಿ ಸ್ಥಾಪಿಸಬೇಕೆಂದು ನಿಗದಿಯಾಗಿದ್ದ ಅಂಬೇಡ್ಕರ್ ಭವನವನ್ನು ಉರ್ವಾ ಮಾರ್ಕೆಟ್ಟಿಗೆ ಸ್ಥಳಾಂತರಿಸಲು ಹೊರಟಿಸಲಾಗಿದೆ.
ಈ ಬಗ್ಗೆ ಹಿಂದಿನ ಜಿಲ್ಲಾಧಿಕಾರಿಗಳು ಸ್ಥಳ ನಿಗದಿಪಡಿಸಿದ್ದರು ಮತ್ತು ಸ್ಥಳಾಂತರಕ್ಕೆ ಹೊರಟಿರುವುದು ಕಾನೂನುಬಾಹಿರವೆಂದು ಮೂರು ದಿನಗಳ ಹಿಂದೆ ಕರ್ನಾಟಕ ದಲಿತ ವಿದ್ಯಾರ್ಥಿ ಒಕ್ಕೂಟ, ದಸಂಸ (ಅಂಬೇಡ್ಕರ್ ವಾದ),ದಸಂಸ (ಡಾಕ್ಟರ್ ಅಂಬೇಡ್ಕರ್), ದಸಂಸ (ಪ್ರೊ ಬಿ ಕ್ರಷ್ಣಪ್ಪ ಸ್ಥಾಪಿತ), ಪ/ಜಾ, ಪ/ಪಂಗಡಗಳ ಹಕ್ಕುಗಳ ನಾಗರಿಕ ರಕ್ಷಣಾ ಸಮಿತಿ, ದಲಿತ ಹಕ್ಕುಗಳ ಹೋರಾಟ ಸಮಿತಿ ಜಂಟಿಯಾಗಿ ಜಿಲ್ಲಾದಿಕಾರಿಗೆ ಮನವಿ ನೀಡಿದ್ದರು.
ಇದಕ್ಕೆ ಸ್ಪಂದಿಸಿದ್ದ ಎನ್ ಎಸ್ ಚನ್ನಪ್ಪಗೌಡರು, 'ಶಾಸಕ ಯೋಗೀಶ್ ಭಟ್ಟರೇ ಸ್ಥಳಾಂತರಕ್ಕೆಸೂಚಿಸಿದ್ದಾರೆ. ಅವರನ್ನೇ ಕೇಳಿ' ಎಂದು ಕಳುಹಿಸಿದ್ದರು.
ಈ ಬಗ್ಗೆ ದಲಿತ ಸಂಘಟನೆಗಳ ಜಂಟಿ ಸಮಿತಿ ಮೊನ್ನೆ ಖಾಸಗಿ ಹೋಟೆಲಿನಲ್ಲಿ ಸುದ್ದಿಗೋಷ್ಠಿ ಕರೆದಿದ್ದು, 'ಜಿಲ್ಲಾಧಿಕಾರಿ ಶಾಸಕ ಯೋಗೀಶ್ ಭಟ್ಟರತ್ತ ಬೆರಳು ತೋರಿಸುತ್ತಿದ್ದಾರೆ. ಅಂಬೇಡ್ಕರ್ ಭವನದ ಜಾಗದಲ್ಲಿ ಕೇಸರಿ ಸಂಘಟನೆಗಳ ಭವನ ಸ್ಥಾಪನೆಗೆ ಹೊರಟಿದ್ದಾರೆಂಬ ಗುಮಾನಿಯಿದೆ. ಹಿಂದೆ 2 ಬಾರಿ ಯೋಗೀಶ್ ಭಟ್ಟರಿಗೆ ಮನವಿ ನೀಡಿದ್ದರೂ ಸ್ಪಂದಿಸಿಲ್ಲ್ಲ. ಇದಕ್ಕೆ ತಕ್ಕಂತೆ ಡಿಸಿಯೂ ಅದನ್ನೇ ಹೇಳುತ್ತಿದ್ದಾರೆ' ಎಂದು ಆಪಾದಿಸಿದ್ದರು.
ದಲಿತರ ಆಕ್ರೋಶ ನುಡಿಗಳು ಸ್ಥಳೀಯ ಪತ್ರಿಕೆ ಹಾಗೂ ಟಿವಿ ಮಾಧ್ಯಮದಲ್ಲಿ ಪ್ರಸಾರವಾಗಿ ಶಾಸಕರ ನಿದ್ದೆಗೆಡಿಸಿತ್ತು.
ಯೋಗೀಶ್ ಭಟ್, ಚನ್ನಪ್ಪ ಗೌಡರಿಗೆ ಕರೆಮಾಡಿ ಹಿಗ್ಗಾಮುಗ್ಗಾ ಬೈದಿದ್ದಾರೆ. ದ ಕ ಜಿಲ್ಲಾ ಉಸ್ತುವಾರಿ ಮಂತ್ರಿ ಸಿಟಿ ರವಿಗೆ ಕರೆ ಮಾಡಿ 'ಡೀಸಿಯನ್ನು ಎತ್ತಂಗಡಿ ಮಾಡಿ'' ಎಂದಿದ್ದಾರಂತೆ. ಮೊನ್ನೆ ರಾತ್ರಿಯೇ ವರ್ಗಾವಣೆ ಆದೇಶದ ಫ್ಯಾಕ್ಸ್ ಬಂದಿದ್ದು, ಚನ್ನಪ್ಪಗೌಡರು ಗಂಟು ಮೂಟೆ ಕಟ್ಟಿದ್ದಾರೆ.