ಹೆಗ್ಡೆ ಯಡಿಯೂರಪ್ಪನವರ ಕ್ಷಮೆ ಕೋರಲಿ : ಕೆಜೆಪಿ
ಶನಿವಾರ ಬೆಂಗಳೂರಿನಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ, ನ್ಯಾ. ಸಂತೋಷ್ ಹೆಗ್ಡೆಯವರ ವಿರುದ್ಧ ಕರ್ನಾಟಕ ಜನತಾ ಪಕ್ಷದ ಹಂಗಾಮಿ ಅಧ್ಯಕ್ಷ, ಮಾಜಿ ಸಂಸದ ಧನಂಜಯ್ ಕುಮಾರ್ ಅವರು ತೀವ್ರ ವಾಗ್ದಾಳಿ ಮಾಡಿದ್ದಾರೆ. ಅವರು ಮೇಲಿಂದ ಮೇಲೆ ಯಡಿಯೂರಪ್ಪನವರಿಗೆ ಸಂಬಂಧಿಸಿದಂತೆ ಹೇಳಿಕೆ ನೀಡುವುದನ್ನು ನಿಲ್ಲಿಸದಿದ್ದರೆ ಅವರ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಂತೋಷ್ ಹೆಗ್ಡೆಯವರು ಹೇಳಿದ್ದೇನೆಂದರೆ, 2011ರ ಜುಲೈ 21ರಂದು ಸಲ್ಲಿಸಿದ ಅಕ್ರಮ ಗಣಿಗಾರಿಕೆ ವರದಿಯಲ್ಲಿ ಯಡಿಯೂರಪ್ಪನವರ ಹೆಸರನ್ನು ನಮೂದಿಸಿದ್ದು ನಿಜ, ಅದಕ್ಕೆ ಸೂಕ್ತವಾದ ಕಾರಣಗಳನ್ನೂ ವರದಿಯಲ್ಲಿ ಕೊಟ್ಟಿದ್ದೇನೆ. ಯಡಿಯೂರಪ್ಪನವರು ಜೈಲಿಗೆ ಹೋಗಲು ತಾವು ಕಾರಣರಲ್ಲ. ಅವರ ಮೇಲೆ ಸಲ್ಲಿಸಲಾಗಿದ್ದ ಖಾಸಗಿ ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಿ ಅವರನ್ನು ಜೈಲಿಗೆ ಹಾಕಲಾಗಿತ್ತು.
ಈ ಹೇಳಿಕೆಗಳು ಯಡಿಯೂರಪ್ಪನವರು ಮತ್ತು ಅವರು ಸ್ಥಾಪಿಸುತ್ತಿರುವ ಹೊಸ ಪಕ್ಷದ ಪದಾಧಿಕಾರಿಗಳನ್ನು ಭಾರೀ ಕೆಣಕಿದೆ. ತಾವೇ ನೇರವಾಗಿ ಯಾವುದೇ ಹೇಳಿಕೆಗಳನ್ನು ನೀಡದೆ, ಧನಂಜಯ್ ಕುಮಾರ್ ಅವರ ಮುಖಾಂತರ ಸಂತೋಷ್ ಹೆಗ್ಡೆ ಅವರ ವಿರುದ್ಧ ಯಡಿಯೂರಪ್ಪನವರು ತಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಈಗ ಮುಖ್ಯಮಂತ್ರಿಯಾಗಬೇಕೆಂದು ಅನೇಕರು ಹೊಂಚು ಹಾಕುತ್ತಿದ್ದಾರೆ. ಅವರಲ್ಲಿ ಮಾನ್ಯ ಸಂತೋಷ್ ಹೆಗ್ಡೆಯವರು ಕೂಡ ಒಬ್ಬರು. ರಾಜಕೀಯ ಪ್ರವೇಶಿಸಲು ಅವರು ಆ ರೀತಿ ಹೇಳಿಕೆ ನೀಡುವ ಮುಖಾಂತರ ವೇದಿಕೆ ಕಲ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಯಡಿಯೂರಪ್ಪನವರ ವಿರುದ್ಧ ಸಲ್ಲದ ಹೇಳಿಕೆಗಳನ್ನು ನೀಡುವ ಮೂಲಕ ಜನರಲ್ಲಿ ಗೊಂದಲ ಮೂಡುವಂತೆ ಅವರು ಮಾಡುತ್ತಿದ್ದಾರೆ. ಇದನ್ನು ಅವರು ಕೂಡಲೆ ನಿಲ್ಲಿಸಬೇಕು. ಅವರು ತಾವೊಬ್ಬರೇ ಭಾರೀ ಬುದ್ಧಿವಂತ ಅಂತ ತಿಳಿದುಕೊಂಡಿದ್ದಾರೆ. ಕೂಡಲೆ ಅವರು ಯಡಿಯೂರಪ್ಪನವರ ಕ್ಷಮೆ ಕೋರಬೇಕು ಎಂದು ಧನಂಜಯ್ ಕುಮಾರ್ ಹರಿಹಾಯ್ದಿದ್ದಾರೆ.