ಚಿರನಿದ್ರೆಗೆ ಜಾರಿದ ಮರಾಠಿ ಹುಲಿ ಬಾಳಾ ಠಾಕ್ರೆ
ಕಳೆದ ನಾಲ್ಕು ದಿನಗಳಿಂದ ಅವರು ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದರು. ಎರಡು ದಿನಗಳ ಹಿಂದೆ ಅವರಿಗೆ ಅಳವಡಿಸಲಾಗಿದ್ದ ಕೃತಕ ಶ್ವಾಸದ ಸಾಧನವನ್ನು ತೆಗೆಯಲಾಗಿತ್ತು. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿದ್ದವು.
ಮರಾಠಿ ಹುಲಿ ಬಾಳಾ ಠಾಕ್ರೆ (23 ಜನವರಿ, 1926 - 17 ನವೆಂಬರ್, 2012) ಅವರು ತೀವ್ರ ಹೃದಯಾಘಾತಕ್ಕೊಳಗಾಗಿ ನಿಧನರಾದರು. ಅವರ ಅಂತಿಮ ಸಂಸ್ಕಾರವನ್ನು ಹಿಂದೂ ಧರ್ಮದ ಅನ್ವಯ ಭಾನುವಾರ, ನವೆಂಬರ್ 18ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ನೆರವೇರಿಸಲಾಗುತ್ತಿದೆ.
ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ರಾಜಕಾರಣಿಗಳು, ನಿನೆಮಾ ತಾರೆಯರು ಸೇರಿದಂತೆ ಗಣ್ಯರು ಅವರ ನಿವಾಸಕ್ಕೆ ದೌಡಾಯಿಸುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಕೂಡ ಧಾವಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ನಿವಾಸದ ಸುತ್ತ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ನಗರದಾದ್ಯಂತ ಯಾವುದೇ ಅವಘಡ ಸಂಭವಿಸದಂತೆ ಎಲ್ಲೆಡೆ ಪೊಲೀಸರನ್ನು ನಿಯೋಜಿಸಲಾಗಿದೆ.
ಶಿವಸೇನೆಯ ಮುಖವಾಣಿಯಾಗಿದ್ದ 'ಸಾಮ್ನಾ' ಮರಾಠಿ ಪತ್ರಿಕೆಯ ಸಂಪಾದಕರಾಗಿ ಅವರು ಮುಂಬೈನಲ್ಲಿ ವಾಸಿಸುತ್ತಿದ್ದ ಬಾಂಗ್ಲಾದೇಶಿ ಮತ್ತು ಮರಾಠಿ ಕಲಿಯದ ಉತ್ತರ ಭಾರತೀಯರ ವಿರುದ್ಧ ತಮ್ಮ ಪ್ರಖರ ಸಂಪಾದಕೀಯಗಳ ಮೂಲಕ ಹೋರಾಟವನ್ನೇ ನಡೆಸಿದ್ದರು. ಬರಹಗಾರನಷ್ಟೇ ಅಲ್ಲ ಅವರು ವ್ಯಂಗ್ಯ ಚಿತ್ರಕಾರನಾಗಿಯೂ ಹೆಸರು ಗಳಿಸಿದ್ದರು.
ಮುಂಬೈನಲ್ಲಿ ಬಾಳಾ ಠಾಕ್ರೆ ಗೌರವಾರ್ಥ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುತ್ತಿದ್ದಾರೆ. ತಮ್ಮ ಆರಾಧ್ಯ ದೈವವನ್ನು ಕಳೆದುಕೊಂಡ ಅಭಿಮಾನಿಗಳು ರೊಚ್ಚಿಗೇಳಬಹುದೆಂದು ನಗರದಾದ್ಯಂತ 20 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಕರ್ನಾಟಕದ ಬೆಳಗಾವಿಯಲ್ಲಿಯೂ ಕಟ್ಟೆಚ್ಚರದಿಂದ ಇರುವಂತೆ ಪೊಲೀಸರಿಗೆ ಆದೇಶ ನೀಡಲಾಗಿದೆ.