ಜ್ಞಾನಭಾರತಿ ರೇಪ್ ಪ್ರಕರಣಕ್ಕೆ ತಾರ್ಕಿಕ ಅಂತ್ಯ
ರಾಜಧಾನಿಯಲ್ಲಿ ನಡೆದಿದ್ದ ಈ ಅತ್ಯಾಚಾರ ಪ್ರಕರಣದ ಬೆಂಗಳೂರು ಪೊಲೀಸರ ನಿದ್ದೆಗೆಡಿಸಿತ್ತು. ಕೊನೆಗೆ ಹೇಗೋ ಆರೋಪಿಗಳನ್ನು ಹಿಡಿದುತಂದಾಗ ಆರೋಪಿಗಳನ್ನು Fix ಮಾಡುತ್ತಿದ್ದಾರೆ ಎಂಬ ಮಾತೂ ಕೇಳಿಬಂದಿತ್ತು. ಆದರೆ ಈಗ ಯಾವುದೇ ಆನುಮಾನಕ್ಕೆ ಎಡೆಯಿಲ್ಲದಂತೆ ಏಳೂ ಆರೋಪಿಗಳಿಗೆ ಒಂದು ಗತಿ ಕಾಣಿಸಲು ಪೊಲೀಸರು ಸಿದ್ಧರಾಗಿದ್ದಾರೆ.
ಪ್ರಕರಣದ 8ನೆಯ ಆರೋಪಿ ಇನ್ನೂ ಸಿಕ್ಕಿಲ್ಲವಾದರೂ ಏಳೂ ಆರೋಪಿಗಳ ರಕ್ತ ಮಾದರಿಯನ್ನು ಡಿಎನ್ಎ ಪರೀಕ್ಷೆಗೆ ಕಳಿಸಿದ್ದ ಬೆಂಗಳೂರು ಪೊಲೀಸರು ಫೊರೆನ್ಸಿಕ್ ಪರೀಕ್ಷೆ ಫಲಿತಾಂಶ ಕಂಡು ನಿರಾಳರಾಗಿದ್ದಾರೆ. ಬಾಧಿತ ಬಾಲಕಿಯ ಡಿಎನ್ಎ ಮತ್ತು ಆರೋಪಿಗಳ ಡಿಎನ್ಎ ತಳುಕು ಹಾಕಿಕೊಂಡಿದೆ.
ಕಳೆದ ತಿಂಗಳು National Law School of India ವಿದ್ಯಾರ್ಥಿನಿಯ ಮೇಲೆ ಹೇಯ ಕೃತ್ಯವೆಸಗಿದ್ದ ಆರೋಪಿಗಳ ವಿರುದ್ಧ ಈಗಾಗಲೇ ಸಾಂದರ್ಭಿಕ ಸಾಕ್ಷ್ಯಗಳು ಬಲವಾಗಿವೆ. ಆರೋಪಿಗಳೂ ತಮ್ಮ ಅಪರಾಧವನ್ನು ಖುದ್ದು ಒಪ್ಪಿಕೊಂಡಿದ್ದಾರೆ. ಬಾಧಿತ ವಿದ್ಯಾರ್ಥಿನಿಯೂ ಕರಾರುವಕ್ಕಾಗಿ ಆರೋಪಿಗಳ ಗುರುತು ಹಿಡಿದಿದ್ದಾರೆ. ಇದರ ಜತೆಗೆ ಈಗ DNA ವರದಿಯೂ ಆರೋಪಿಗಳಿಗೆ ಮುಳುಗುನೀರು ತಂದಿದೆ.
ರಾಮನಗರ ತಾಲೂಕಿನ ಈ ಆರೋಪಿಗಳು ಶ್ರೀಗಂಧದ ಚೋರರು. ಬಾಧಿತ ಯುವತಿಯ ಮೈಮೇಲೆ ಆಗಿದ್ದ ಪರಚಿದ ಗಾಯಗಳು ಮತ್ತು ಆಕೆ ಅದನ್ನು ಒರೆಸಲು ಬಳಸಿದ ಬಟ್ಟೆ ಮತ್ತು ಆಕೆ ಧರಿಸಿದ್ದ ಉಡುಪನ್ನು ಪೊಲೀಸರು ಫೊರೆನ್ಸಿಕ್ ಪರೀಕ್ಷೆಗೆ ಕಳಿಸಿದ್ದರು. ಜತೆಗೆ ಆರೋಪಿಗಳ ರಕ್ತವನ್ನೂ.
ಇದನ್ನು ಫೊರೆನ್ಸಿಕ್ ಪ್ರಯೋಗಾಲಯದಲ್ಲಿ ಸುಮಾರು 3 ವಾರಗಳ ಕಾಲ ಕೂಲಂಕಶವಾಗಿ ಪರೀಕ್ಷೆಗೊಳಪಡಿಸಲಾಯಿತು. ಫಲಿತಾಂಶ ಈಗ ಹೊರಬಿದ್ದಿದೆ. ಮುಂದೆ ಕೋರ್ಟಿಗೆ ವರದಿ ಸಲ್ಲಿಕೆಯಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.