ಮುಲಾಯಂ ಕುಟುಂಬದ ಅರ್ಚಕನ ಗುಂಡಿಕ್ಕಿ ಹತ್ಯೆ
ಮೃತಪಟ್ಟ ಮುಖ್ಯಮಂತ್ರಿ ಕುಟುಂಬದ ಅರ್ಚಕನನ್ನು 38 ವರ್ಷದ ಪಂಡಿತ್ ರಮೇಶ್ ತಿವಾರಿ ಎಂದು ಗುರುತಿಸಲಾಗಿದೆ. ಇವರು ಖ್ಯಾತ ಜ್ಯೋತಿಷಿಯೂ ಆಗಿದ್ದರು. ದೀಪಾವಳಿ ಹಬ್ಬಕ್ಕೆಂದು ತಮ್ಮ ಹುಟ್ಟೂರಾದ ಊಂಚಾಗಾಂವ್ ಗೆ ಭೇಟಿ ನೀಡಿದ್ದರು.
ಅಲ್ಲಿ ತಮ್ಮ ಪಿತ್ರಾರ್ಜಿತ ಮನೆಯ ಮುಂದೆ ಸೋದರನ ಜತೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದಾಗ ಅಪರಿಚಿತರು ಸೋದರರಿಬ್ಬರ ಮೇಲೂ ಗುಂಡಿನ ಮಳೆಗರೆದಿದ್ದಾರೆ. ಹಂತಕರು 2 ಬೈಕುಗಳ ಮೇಲೆ ಬಂದಿದ್ದರು. ಜ್ಯೋತಿಷಿ ರಮೇಶ್ ತಿವಾರಿ ಅವರನ್ನು ಆಸ್ಪತ್ರೆಗೆ ದಾಖಲಿಸುವಾಗ ಮೃತಪಟ್ಟಿದ್ದರೆ ಅವರ ಸೋದರ ರಾಜೇಶ್ ತಿವಾರಿ ಆಸ್ಪತ್ರೆಯಲ್ಲಿ ಸಾವು-ಬದುಕಿನ ಹೋರಾಟ ನಡೆಸಿದ್ದಾರೆ.
ಅಪರಿಚಿತ ಹಂತಕರು ಪೊಲೀಸ್ ಸಮವಸ್ತ್ರ ಧರಿಸಿ, ಅತ್ಯಾಧುನಿಕ ಶಸ್ತ್ರದಿಂದ ಈ ದಾಳಿ ನಡೆಸಿದ್ದಾರೆ. ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅರುಣ್ ಕುಮಾರ್ ತಕ್ಷಣ ಲಖ್ನೋದಿಂದ 215 ಕಿ.ಮೀ. ದೂರದಲ್ಲಿರುವ ಜಾನಪುರಕ್ಕೆ ಧಾವಿಸಿದ್ದು, ಪಾತಕಿಗಳನ್ನು ಸೆರೆಹಿಡಿಯಲು ಬಲೆ ಬೀಸಿದ್ದಾರೆ. ಅದಕ್ಕೂ ಮುನ್ನ ಇನ್ನೂ ಅನೇಕಾನೇಕ ಉನ್ನತಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹಂತಕರ ಪತ್ತೆಗೆ ವಿಶೇಷ ಕಾರ್ಯಪಡೆಯನ್ನೂ ರಚಿಸಲಾಗಿದೆ.
ಹತ್ಯೆ ನಡೆದಿರುವ ವಿಧಾನ ನೋಡಿದರೆ ಇದೊಂದು ಸುಪಾರಿ ಹತ್ಯೆ ಎಂದು ಹೇಳಬಹುದು. ಗುರೂಜಿ ಎಂದೇ ಚಿರಪರಿಚಿತರಾಗಿದ್ದ ಪಂಡಿತ್ ರಮೇಶ್ ತಿವಾರಿ ಪ್ರಭಾವಿ ರಾಜಕಾರಣಿಗಳು, ಅಧಿಕಾರಿಗಳು, ರಿಯಲ್ ಎಸ್ಟೇಟ್ ಧಣಿಗಳ ಜತೆ ನಿಕಟ ಸ್ನೇಹ ಹೊಂದಿದ್ದರು.
ಟ್ರಾನ್ಸ್ ಫರ್ ಸೇರಿದಂತೆ ಉನ್ನತ ಸರಕಾರಿಮಟ್ಟದಲ್ಲಿ ಏನಾದರೂ ಕೆಲಸಗಳಾಗಬೇಕೆಂದರೆ ಭಕ್ತರು ಪಂಡಿತ್ ರಮೇಶ್ ತಿವಾರಿ ಮೊರೆಹೋಗುತ್ತಿದ್ದರು. ಪಂಡಿತ್ ರಮೇಶ್ ತಿವಾರಿ ಅವರ ತಂದೆ ರಾಜೇಂದ್ರ ಪ್ರಸಾದ್ ತಿವಾರಿ ಕಳೆದ ಪಂಚಾಯತ್ ಚುನಾವಣೆಯಲ್ಲಿ ಬಹುಜನ ಸಮಾಜಪಕ್ಷದಿಂದ ಸ್ಪರ್ಧಿಸಿದ್ದರು.
ಭಕ್ತರ ರೂಪದಲ್ಲಿ ಬಂದಿದ್ದ ಹಂತಕರು ಪಂಡಿತ್ ರಮೇಶ್ ತಿವಾರಿ ಅವರ ಕಾಲ್ಮುಟ್ಟಿ, ಆಶೀರ್ವಾದ ಪಡೆದು ಅವರೆದುರು ಸ್ವಲ್ಪ ಕಾಲ ಕುಳಿತಿದ್ದರು. ಇದರಿಂದ ಯಾರಿಗೂ ಯಾವುದೇ ಅನುಮಾನ ಬಂದಿರಲಿಲ್ಲ. ಆದರೆ ಏಕಾಏಕಿ ಎದ್ದುನಿಂತ ದುಷ್ಕರ್ಮಿಗಳು ಒಂದೇ ಸಮನೆ ಗುಂಡಿನ ಮಳೆಗರೆದು ಪರಾರಿಯಾಗಿದ್ದಾರೆ.