ನಿಮ್ಮ ಲೋಪ ನೀವೇ ಸರಿಪಡಿಸಿಕೊಳ್ಳಿ : ಹೆಗ್ಡೆ ಕಿವಿಮಾತು
ಮಾಧ್ಯಮದ ಲೋಪ ಮಾಧ್ಯಮವೇ ಸರಿಪಡಿಸಿಕೊಳ್ಳಬೇಕು, ಮೂರನೆಯವರ ಪ್ರವೇಶ ಇರಲೇಬಾರದು. ಮೂರನೆಯವರ ಪ್ರವೇಶವಾದರೆ ಮಾಧ್ಯಮದ ಸ್ವಾತಂತ್ರ್ಯ ನಶಿಸುತ್ತದೆ ಎಂದು ಅವರು ಪತ್ರಕರ್ತರಿಗೆ ಕಿವಿಮಾತು ಹೇಳಿದ್ದಾರೆ.
ಅವರು ಶುಕ್ರವಾರ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ರಾಜ್ಯ ವಾರ್ತಾ ಇಲಾಖೆ ಹಾಗೂ ಭಾರತೀಯ ವಿದ್ಯಾಭವನದ ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿ ಏರ್ಪಡಿಸಲಾಗಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ, ಮಾಧ್ಯಮ ಸ್ವಾತಂತ್ರ್ಯ ಕುರಿತ ವಿಚಾರ ಸಂಕಿರಣ ಮತ್ತು ಭಾರತೀಯ ವಿದ್ಯಾಭವನದ ಕುಲಪತಿ ಡಾ: ಕೆ. ಎಂ. ಮುನ್ಶಿ ಅವರ 125ನೇ ವರ್ಷೋತ್ಸವ ಸ್ಮರಣೆ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಾಧ್ಯಮವಿಲ್ಲದಿದ್ದರೆ ಸಂವಿಧಾನದ ಮೂರು ಅಂಗಗಳ ಲೋಪ ಸರಿಪಡಿಸುವ, ಜನತೆಗೆ ಒಳಿತು ನೀಡುವ ಕಾರ್ಯ ಸಾಧ್ಯವಾಗುತ್ತಿರಲಿಲ್ಲ. ಪಾರದರ್ಶಕತೆ ಎನ್ನುವುದು ಪ್ರಜಾಪ್ರಭುತ್ವದ ಅವಿಭಾಜ್ಯ ಅಡಿಗಲ್ಲು. ಅದನ್ನು ರಕ್ಷಿಸುವ, ಜಗತ್ತಿಗೆ ಒಳಿತು ನೀಡುವ ಕಾರ್ಯ ಮಾಧ್ಯಮದಿಂದ ಮಾತ್ರ ಸಾಧ್ಯ. ಲೋಪಗಳನ್ನು ಸರಿಪಡಿಸುವ ಕಾರ್ಯ ನ್ಯಾಯಾಂಗದಲ್ಲಿ ಆಗಬೇಕು. ಆದರೆ ಅದಕ್ಕೆ ದೀರ್ಘ ಅವಧಿ ತೆಗೆದುಕೊಳ್ಳುತ್ತದೆ. ಆದ್ದರಿಂದ ಮಾಧ್ಯಮವು ಈಗ ಪಾರದರ್ಶಕತೆ ಮೂಲಕ ಲೋಪಗಳನ್ನು ಜನತೆಯ ಮುಂದಿಡಬೇಕು ಎಂದು ನ್ಯಾಯಮೂರ್ತಿ ಹೆಗ್ಡೆ ಹೇಳಿದರು.
ವಿಚಾರ ಸಂಕಿರಣದಲ್ಲಿ ಮಾತನಾಡಿದ ಪ್ರಜಾವಾಣಿಯ ಸಹಾಯಕ ಸಂಪಾದಕಿ ಡಾ: ಆರ್. ಪೂರ್ಣಿಮಾ ಅವರು, ಪ್ರಜಾಪ್ರಭುತ್ವದ ಸಂರಕ್ಷಣೆಗೆ ಯಾರದೇ, ಯಾವುದೇ ಕಾಳಜಿ ಇಲ್ಲ. ಮಾಧ್ಯಮಕ್ಕಿರುವ ಇತಿಹಾಸದಷ್ಟೇ ಮಾಧ್ಯಮದ ಬಗೆಗಿನ ಚರ್ಚೆಗೂ ಇತಿಹಾಸವಿದೆ. ಕಾಲಕಾಲಕ್ಕೆ ಪತ್ರಿಕೋದ್ಯಮವನ್ನು ಹತ್ತಿಕ್ಕುವ ಕಾರ್ಯ ಅವಿರತವಾಗಿ ನಡದೇ ಇದೆ. ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕುವ, ನಾಶಪಡಿಸುವ ಹುನ್ನಾರ ಯಶಸ್ಸು ಸಾಧಿಸುವುದಿಲ್ಲ. ಸತ್ಯವನ್ನು ಹೇಳಿ ಸತ್ವ ಬೆಳಗಿಸುವ ಕಾರ್ಯ ಮಾಧ್ಯಮ ಮಾಡಿದೆ ಹಾಗೂ ಮಾಡಲೇಬೇಕಿದೆ ಎಂದು ಹೇಳಿದರು.
'ಮಾಧ್ಯಮ ಸ್ವಾತಂತ್ರ್ಯ' ಕುರಿತ ವಿಚಾರ ಸಂಕಿರಣದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡ ಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಎಚ್.ಆರ್. ರಂಗನಾಥ್ ಅವರು, ಮಾಧ್ಯಮಗಳ ವಿಸ್ತಾರ, ಆಳ, ಅಗಲದಲ್ಲಿ ಸರ್ಕಾರ ಮಾಧ್ಯಮಗಳನ್ನು ನಿಯಂತ್ರಿಸುವುದು ಸಾಧ್ಯವೆ ಇಲ್ಲ. ಆದರೆ ಮಾಧ್ಯಮ ಒಳಗೆ ಇರುವ ಲೋಪಗಳು ಮಾಧ್ಯಮವನ್ನು ತಿನ್ನುತ್ತಿವೆ. ಮಾಧ್ಯಮದ ಮೇಲೆ ಸರ್ಕಾರದ ನಿಯಂತ್ರಣ ಸಾಧುವಲ್ಲ, ಅದು ಆಗುವುದೂ ಇಲ್ಲ ಎಂದು ಅಭಿಪ್ರಾಯಪಟ್ಟರು.