ಛಾಯಾಚಿತ್ರಗ್ರಾಹಕ ಮಲ್ಲಿಕಾರ್ಜುನಗೆ ಕಾಮತ ಪ್ರಶಸ್ತಿ
ಪ್ರಶಸ್ತಿ ಪ್ರದಾನ ಸಮಾರಂಭ ಭಾನುವಾರ, ನ.18ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಜೆ.ಸಿ. ರಸ್ತೆಯಲ್ಲಿರುವ ಕನ್ನಡ ಭವನದ ನಯನ ಸಭಾಂಗಣದಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಪರಿಸರಪ್ರೇಮಿ, ಛಾಯಾಗ್ರಾಹಕ, ಲೇಖಕ ದಿ.ಕೃಷ್ಣಾನಂದ ಕಾಮತ (1934 - 2002) ಅವರ ಬದುಕು, ಸಾಧನೆ ಬಗ್ಗೆ ವಿಚಾರ ಮಂಥನ ಇಡೀ ದಿನ ನಡೆಯಲಿದೆ. ಮಲ್ಲಿಕಾರ್ಜುನ ಅವರು ಛಾಯಾಚಿತ್ರಗಳ ಪ್ರದರ್ಶನವೂ ನಡೆಯಲಿದೆ.
2003ರಲ್ಲಿ ಸ್ಥಾಪಿತವಾದ ಲಾಭರಹಿತ ಸಂಸ್ಥೆಯಾಗಿರುವ ಕೃಷ್ಣಾನಂದ ಕಾಮತ ಪ್ರತಿಷ್ಠಾನ, ಹೊನ್ನಾವರ - ಸಾಹಿತ್ಯ, ಛಾಯಾಚಿತ್ರಕಲೆಯಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳನ್ನು ಗುರುತಿಸಿ ಪ್ರಶಸ್ತಿ ನೀಡುತ್ತ ಬಂದಿದೆ. ಕಳೆದ ವರ್ಷ 2011ರಲ್ಲಿ ಪ್ರೊ. ನಿರಂಜನ ವಾನಳ್ಳಿ ಅವರ ಪ್ರವಾಸ ಕಥನ 'ಒಮಾನ್ ಎಂಬ ಒಗಟು' ಕೃತಿಗೆ ಪ್ರತಿಷ್ಠಾನ ಪ್ರಶಸ್ತಿ ಸಂದಿತ್ತು. ಈ ಬಾರಿ ಮಲ್ಲಿಕಾರ್ಜುನ ಅವರಿಗೆ ನೀಡಲಾಗುತ್ತಿದೆ. ಪ್ರಶಸ್ತಿ ವಿಜೇತರಿಗೆ 25 ಸಾವಿರ ರು. ನಗದು ಬಹುಮಾನ, ಪ್ರಶಸ್ತಿ ಫಲಕ ಮತ್ತು ಸರ್ಟಿಫಿಕೇಟ್ ನೀಡಲಾಗುತ್ತಿದೆ.
ಗೋಷ್ಠಿಗಳು : ಬೆಳಿಗ್ಗೆ 10.30ರಿಂದ ಆರಂಭವಾಗಿ, ಮಧ್ಯಾಹ್ನ ಎರಡು ಗೋಷ್ಠಿಗಳು ನಡೆದು, ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೋ. ಎಂ.ಎಚ್. ಕೃಷ್ಣಯ್ಯ ಅವರು ಚಿತ್ರಪ್ರದರ್ಶನ, ಕೃತಿ ಬಿಡುಗಡೆ ಮಾಡಲಿದ್ದಾರೆ. ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಜ್ಯೋತ್ಸ್ನಾ ಕಾಮತ ಅವರು ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಡಾ. ಕಾಮತರ ಜೀವನ ಸಾಧನೆ ಬಗ್ಗೆ ಸಂಶೋಧಕರಾದ ಡಾ.ಶೇಷಶಾಸ್ತ್ರಿ ಅವರು ಮಾತನಾಡಲಿದ್ದಾರೆ.
12 ಗಂಟೆಗೆ ನಡೆಯಲಿರುವ ಮೊದಲ ಗೋಷ್ಠಿಯಲ್ಲಿ ಕತೆಗಾರ ಎಸ್ ದಿವಾಕರ್ ಅವರು ಕಾಮತರ ಛಾಯಾಚಿತ್ರ ಮತ್ತು ಚಿತ್ರಕಲೆ ಬಗ್ಗೆ ವಿಚಾರ ಮಂಡಿಸಲಿದ್ದಾರೆ. ಕಾಮತರ ಪರಿಸರ ಕಾಳಜಿ ಬಗ್ಗೆ ಪರಿಸರತಜ್ಞ ಶಿವಾನಂದ ಕಳವೆ ಅವರು ಮಾತನಾಡಲಿದ್ದಾರೆ. ಮಧ್ಯಾಹ್ನದ ಗೋಷ್ಠಿಯಲ್ಲಿ ಕಾಮತ ಪ್ರವಾಸ ಸಾಹಿತ್ಯದ ಬಗ್ಗೆ ಡಾ.ನಿರಂಜನ ವಾನಳ್ಳಿ ಅವರು ತಮ್ಮ ಅನಿಸಿಕೆ ಹಂಚಿಕೊಳ್ಳಲಿದ್ದಾರೆ.
ಸಮಾರೋಪ ಸಮಾರಂಭ : ಸಂಜೆ 4 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಚಲನಚಿತ್ರ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಅವರು ವಹಿಸಿಕೊಳ್ಳುತ್ತಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ಚಿ.ಸು.ಕೃಷ್ಣಶೆಟ್ಟಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಪ್ರಶಸ್ತಿ ಪುರಸ್ಕೃತರ ಬಗ್ಗೆ ಕಥೆಗಾರ್ತಿ ಮತ್ತು ವಿಜ್ಞಾನ ಲೇಖಕಿ ನೇಮಿಚಂದ್ರ ಅವರು ಮಾತನಾಡಲಿದ್ದಾರೆ.