224 ಕ್ಷೇತ್ರದಲ್ಲೂ ಸ್ಪರ್ಧೆ-ಬಿಎಸ್ ವೈ ಘೋಷಣೆ
ಬುಧವಾರ ಆಂಧ್ರದ ಮಂತ್ರಾಲಯಕ್ಕೆ ಭೇಟಿ ನೀಡಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತಮ್ಮ ಸಂಕಲ್ಪವನ್ನು ಪ್ರಕಟಿಸಿದರು.
ಪ್ರಮುಖ ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ, ಆದರೆ ಸ್ಥಳೀಯವಾಗಿ ರೈತ ಸಂಘ ಮತ್ತಿತರ ಪಕ್ಷಕಗಳೊಂದಿಗೆ ಸ್ಥಳೀಯ ಅನುಕೂಲಗಳನ್ನು ಆಧರಿಸಿ ಹೊಂದಾಣಿಕೆ ಮಾಡಿಕೊಳ್ಳುವ ಇಂಗಿತ ವ್ಯಕ್ತಪಡಿಸಿದರು.
ಈ ತಿಂಗಳ ಅಂತ್ಯಕ್ಕೆ (ನವೆಂಬರ್) ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸ ಪಕ್ಷ ಸಂಘಟನೆಯಲ್ಲಿ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳುವುದಾಗಿ ಯಡಿಯೂರಪ್ಪ ಹೇಳಿದರು.
ಯಾವುದೇ ಹೊಸ ಕಾರ್ಯಕ್ರಮ ಅಥವಾ ಚಟುವಟಿಕೆ ಆರಂಭಿಸುವ ಮುನ್ನ ರಾಘವೇಂದ್ರ ಸ್ವಾಮಿಗಳ ಆಶೀರ್ವಾದ ಪಡೆಯುವುದು ನನ್ನ ಜೀವನದಲ್ಲಿ ಒಂದು ವಾಡಿಕೆಯಾಗಿದೆ. ಇದುವರೆಗೆ ರಾಯರ ಅನುಗ್ರಹದಿಂದ ಆರಂಭಿಸಿದ ನನ್ನ ಎಲ್ಲಾ ಯತ್ನಗಳು ಯಶಸ್ಸು ಕಂಡಿವೆ ಎಂದು ಬಿಎಸ್ ವೈ ಹೇಳಿದರು.
ಒಟ್ಟಾರೆ ದೇಶದಲ್ಲೇ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಉದ್ದೇಶ ನನ್ನದು. ಇದಕ್ಕಾಗಿ ಎಂಥ ತ್ಯಾಗಕ್ಕೂ ನಾನು ಸಿದ್ಧ. ರಾಯರ ಸನ್ನಿಧಿಗೆ ಈ ಹಿಂದೆ ಅನೇಕ ಸಲ ಬಂದಿದ್ದೇನೆ. ಮಂತ್ರಾಲಯಕ್ಕೆ ಬಂದಾಗ ನನಗೆ ಸಮಾಧಾನ ಮತ್ತು ಉಲ್ಲಾಸ ಮತ್ತು ಹೊಸ ಹುರುಪು ಸಿಗುತ್ತದೆ ಎಂದು ಅವರು ಶಾಂತಚಿತ್ತರಾಗಿ ನುಡಿದರು.