ಮಳವಳ್ಳಿಯಲ್ಲಿ ಮಗಳನ್ನು ಸಜೀವವಾಗಿ ಸುಟ್ಟ ನಿರ್ದಯಿ ಅಪ್ಪ
ಈ ಘಟನೆ ನಡೆದಿರುವುದು ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಬಂಡೂರು ಗ್ರಾಮದಲ್ಲಿ ಶನಿವಾರ ಸಂಜೆ 6.30ರ ಸುಮಾರಿಗೆ. ಬೇಜವಾಬ್ದಾರಿ ತಂದೆ ಪ್ರಕಾಶ ಎಸಗಿದ ಕೃತ್ಯಕ್ಕೆ 8 ವರ್ಷದ ಮಗಳು ನಿರ್ಮಲಾ ಸತ್ತುಹೋಗಿದ್ದಾಳೆ. ಈ ಆಘಾತಕಾರಿ ಘಟನೆಯಿಂದಾಗಿ ದೀಪಾವಳಿಗೆ ಮೊದಲೇ ಅವರ ಕುಟುಂಬದಲ್ಲಿ ಮಾತ್ರವಲ್ಲ ಇಡೀ ಗ್ರಾಮದಲ್ಲಿ ಕತ್ತಲು ಆವರಿಸಿಕೊಂಡಿದೆ.
ಮಗಳು ನಿರ್ಮಲಾ ಸೊಂಟದ ಕೆಳಗಿನ ಭಾಗದಲ್ಲಿ ಸ್ವಾಧೀನ ಕಳೆದುಕೊಂಡಿದ್ದಳು. ಕುಟುಂಬದ ನಿರ್ವಹಣೆಗೆ ಕಿಂಚಿತ್ ಲಕ್ಷ್ಯವನ್ನೂ ಕೊಡದಿದ್ದ ಪ್ರಕಾಶ, ವಿಕಲಾಂಗ ಮಗಳ ಕುರಿತು ಪ್ರತಿದಿನ ತನ್ನ ಹೆಂಡತಿಯೊಡನೆ ಜಗಳ ಕಾಯುತ್ತಿದ್ದ. ಯಾವಾದಗಲೂ ಕುಡಿಯುತ್ತಿದ್ದ ಆತ ಕುಟುಂಬದ ಜವಾಬ್ದಾರಿ ಸರಿಯಾಗಿ ಹೊತ್ತಿರಲಿಲ್ಲ ಮತ್ತು ಮಗಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿರಲಿಲ್ಲ.
ಶನಿವಾರ ಸಂಜೆ ತನ್ನ ಮಗಳನ್ನು ಬಂಡೂರು-ದುಗ್ಗನಹಳ್ಳಿ ರಸ್ತೆಯಲ್ಲಿರುವ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ, ರಸ್ತೆಬದಿಯಲ್ಲಿರುವ ಎಲ್ಲ ಕಟ್ಟಿಗೆಗಳನ್ನು ರಾಶಿ ಹಾಕಿ ಬೆಂಕಿ ಹಚ್ಚಿದ್ದಾನೆ. ಮಗಳು ಎಷ್ಟೇ ಗೋಗರೆದರೂ ಅದರ ಮೇಲೆ ಮಗಳನ್ನು ನಿರ್ದಯವಾಗಿ ತಳ್ಳಿದ್ದಾನೆ. ಮಗಳು ಸುಟ್ಟು ಕರಕಲಾಗುವವರೆಗೆ ಅಲ್ಲಿಂದ ಆತ ಕದಲಿಲ್ಲ.
ಈ ಹೃದಯಹಿಂಡುವ ಘಟನೆಯನ್ನು ನೋಡಿದ ದಾರಿಹೋಕರು ಕೂಡಲೆ ಪ್ರಕಾಶನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ದಾರಿಹೋಕರು ಬರುವಷ್ಟರಲ್ಲಿ ನಿರ್ಮಲಾ ಕಮರಿಹೋಗಿದ್ದಳು. ಮಗಳ ಅಂಗವೈಕಲ್ಯದಿಂದ ಪ್ರಕಾಶ ಕಂಗೆಟ್ಟಿದ್ದ. ಅಲ್ಲದೆ ಕುಡಿಯಲು ಹಣಕ್ಕಾಗಿ ಹೆಂಡತಿಯನ್ನು ಪೀಡಿಸುತ್ತಿದ್ದ ಎಂದು ಮಳವಳ್ಳಿಯ ಡಿವೈಎಸ್ಪಿ ಡಿ. ಹನುಮಂತ ರೆಡ್ಡಿ ಅವರು ಹೇಳಿದ್ದಾರೆ. ಮಳವಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.