ರಾಯಣ್ಣ ಪುತ್ಥಳಿಗೆ ಚಪ್ಪಲಿಯೇಟು, ಚಿತ್ರದುರ್ಗ ಉದ್ವಿಗ್ನ
ಚಿತ್ರದುರ್ಗದಲ್ಲಿ ಶನಿವಾರ ಟಿಪ್ಪು ಸುಲ್ತಾನ್ (20 ನವೆಂಬರ್, 1750 - 4 ಮೇ 1799) ಜಯಂತಿಯನ್ನು ಆಚರಿಸಲಾಗುತ್ತಿತ್ತು. ಒಂದು ಕೋಮಿಗೆ ಸೇರಿದ ಜನರು ಊರಿನಲ್ಲಿ ಮೆರವಣಿಗೆ ನಡೆಸುತ್ತಿದ್ದರು. ಆ ಮೆರವಣಿಗೆ ಗಾಯತ್ರಿ ವೃತ್ತದಲ್ಲಿ ಹಾದುಹೋಗುವಾಗ ಕೆಲ ಕಿಡಿಗೇಡಿಗಳು ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಚಪ್ಪಲಿಯಿಂದ ಹೊಡೆದಿದ್ದಾರೆ.
ಇದನ್ನು ನೋಡಿದ ಕೆಲವರು ರಾಯಣ್ಣನನ್ನು ಅವಮಾನ ಮಾಡಿದವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಸಂಗೊಳ್ಳಿ ರಾಯಣ್ಣನಿಗೆ ಅವಮಾನ ಮಾಡಿದ ಸುದ್ದಿ ಕಾಳ್ಗಿಚ್ಚಿನಂತೆ ಊರಲ್ಲೆಲ್ಲ ಹಬ್ಬಿ ಹಿಂದೂಪರ ಸಂಘಟನೆಗಳು ಕಿಡಿಗೇಡಿಗಳ ಮೇಲೆ ಹಲ್ಲೆ ಮಾಡಿದ್ದಾರೆ. ಸ್ಥಳದಲ್ಲಿ ಸಾವಿರಾರು ಜನ ಸೇರಿದ್ದರಿಂದ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು.
ಈ ಘಟನೆಯನ್ನು ಖಂಡಿಸಿ ಘಟನೆ ನಡೆದ ಸುತ್ತಲಿನ ಸ್ಥಳದಲ್ಲಿ ಕಲ್ಲು ತೂರಾಟ ಕೂಡ ನಡೆಯಿತು. ಕೂಡಲೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಪಡೆ, ಕಲ್ಲು ತೂರಾಟ ನಡೆಸಿದ್ದ ವ್ಯಕ್ತಿಗಳನ್ನು ಚೆದುರಿಸಲು ಲಘು ಲಾಠಿ ಪ್ರಹಾರ ಕೂಡ ಮಾಡಿತು. ದೇಶಭಕ್ತ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಚಪ್ಪಲಿಯಿಂದ ಹೊಡೆದು ಅವಮಾನ ಮಾಡಿದ ಕಿಡಿಗೇಡಿಗಳನ್ನು ಕೂಡಲೆ ಬಂಧಿಸಿ ಶಿಕ್ಷಿಸಬೇಕು ಎಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿವೆ.
ರಾಯಣ್ಣನ ಜೀವನಚರಿತ್ರೆ ಕುರಿತ ಕನ್ನಡ ಚಲನಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಕನ್ನಡ ನಾಡಿನಾದ್ಯಂತ ಬಿಡುಗಡೆಯಾಗಿದ್ದು, ಕನ್ನಡ ಚಿತ್ರಪ್ರೇಮಿಗಳ ಪ್ರಶಂಸೆಗೆ ಪಾತ್ರವಾಗಿದೆ. ಬ್ರಿಟಿಷರ ವಿರುದ್ಧ ಹೋರಾಡಿ ಮಡಿದ ಮತ್ತೊಬ್ಬ ದೇಶಭಕ್ತೆ ಕಿತ್ತೂರು ಚೆನ್ನಮ್ಮನ ಬಗಲೈ ಭಂಟನಾಗಿದ್ದ ಸಂಗೊಳ್ಳಿ ರಾಯಣ್ಣ. ಇಂತಿರುವ ರಾಯಣ್ಣದ ಪುತ್ಥಳಿಯನ್ನು ಮತ್ತೊಬ್ಬ ವೀರ ಮದಕರಿ ನಾಯಕರ ಊರಾದ ಚಿತ್ರದುರ್ಗದಲ್ಲಿ ಸ್ಥಾಪಿಸಲಾಗಿದೆ.