ಪ್ರವಾಸೋದ್ಯಮಕ್ಕೆ ಸಚಿವ ಚಿರಂಜೀವಿ ಏನ್ಮಾಡಬಹುದು?
ಅದಕ್ಕೂ ಮೊದಲು ವೈವಿಧ್ಯಮಯ ಭಾರತವು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ತಾಣ. ದೇಶದ ಇತಿಹಾಸ-ಭೂಗೋಳವನ್ನು ಚೆನ್ನಾಗಿ ಬಲ್ಲೆ. ಆದರೆ ಭಾರತಕ್ಕೆ ಪ್ರವಾಸ ಬರುವುದೆಂದರೆ ವಿದೇಶಿಯರಿಗೆ ನಿಜಕ್ಕೂ ತ್ರಾಸದಾಯಕವಾಗಿದೆ. ಸಿನಿಮಾ ಚಿತ್ರೀಕರಣಕ್ಕಾಗಿ ಸಾವಿರಾರು ಬಾರಿ ವಿದೇಶಗಳಿಗೆ ಭೇಟಿ ನೀಡಿರುವ ನಟ ಚಿರುಗೆ ಇದು ಚೆನ್ನಾಗಿ ತಿಳಿದಿದೆ. ಹಾಗಾಗಿ ನಮ್ಮ ಪ್ರವಾಸೋದ್ಯಮಕ್ಕೆ ಏನಾದರೂ ಕೈಲಾದಷ್ಟು ಏನಾದರೂ ಮಾಡುವ ಅಂತಿದ್ದೀನಿ ಎನ್ನುತ್ತಾರೆ ಚಿರು.
ಅಂದಹಾಗೆ ಚಿರು, ಕೇಂದ್ರ ಪ್ರವಾಸೋದ್ಯಮ ಸಚಿವರಾಗಿ ನೇಮಗೊಂಡ ಮೊದಲ ನಟ. ಸಚಿವ ಅನ್ನುವುದಕ್ಕಿಂತ ಹೆಚ್ಚಾಗಿ ಭಾರತದ ಪ್ರವಾಸೋದ್ಯಮ ರಾಯಭಾರಿಯಾಗಿ ಚಿರು ಇನ್ನೂ ಹೇಳಿದ್ದಾರೆ ನೋಡಿ:
ಒಬ್ಬ ನಟನಾಗಿ ಸ್ವಿಟ್ಜರ್ಲೆಂಡ್, ಇಂಗ್ಲೆಂಡ್ ನಂತಹ ಯುರೋಪ್ ರಾಷ್ಟ್ರಗಳಿಗೆ ಅನೇಕ ಬಾರಿ ಭೇಟಿ ನೀಡಿದ್ದೇನೆ. ಅಲ್ಲಿನ ರಾಷ್ಟ್ರಗಳು ತಮ್ಮ ಪ್ರವಾಸಿ ತಾಣಗಳನ್ನು ಪ್ರವಾಸಿಗರಿಗೆ ಮುಕ್ತವಾಗಿ ತೆರೆದಿಟ್ಟುಕೊಂಡು ಹೇಗೆ ಕಾಯುತ್ತಿರುತ್ತವೆ ಎಂಬುದನ್ನು ನಾನು ಬಲ್ಲೆ.
ಸಿನಿಮಾ ಶೂಟಿಂಗ್ ಸ್ಥಳಗಳನ್ನು ಮುಂದಿಟ್ಟುಕೊಂಡು ಅವು ಹೇಗೆ ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸುತ್ತವೆ ಎಂಬುದನ್ನು ನಾನು ಗಮನಿಸಿದ್ದೇನೆ. ನಮ್ಮ ರಾಷ್ಟ್ರದಲ್ಲೂ ಇಂತಹ ಅನೇಕ ಸ್ಥಳಗಳಿವೆ. ಆದರೆ ಅಲ್ಲಿಗೆಲ್ಲ ಪ್ರವಾಸಕ್ಕೆ ಬರುವುದಕ್ಕೆ ಹೋಗುವುದಕ್ಕೆ ಹತ್ತಾರು ತಕರಾರುಗಳಿವೆ. ಇಲ್ಲಿನ ಕಾನೂನು ಕಟ್ಟಳೆಗಳು ಪ್ರವಾಸಿಗರಿಗೆ ತೊಡಕಾಗಿ ಪರಿಣಮಿಸುತ್ತವೆ.
ಪ್ರವಾಸೋದ್ಯಮ ಸಚಿವಾಲಯವೊಂದೇ ಎಲ್ಲ ನೀತಿ ನಿಯಮಗಳನ್ನೂ ರೂಪಿಸಿ, ಪ್ರವಾಸೋದ್ಯಮಕ್ಕೆ ರಹದಾರಿ ಕಲ್ಪಿಸುವಂತಿಲ್ಲ. ಇದಕ್ಕೆ ಬೇಕು ಬರೋಬ್ಬರಿ 10 ಸಚಿವಾಲಯಗಳ ಸಹಕಾರ!
ಮತ್ತೊಂದು ಶೋಚನೀಯ ವಿಚಾರವೆಂದರೆ ಹೋಟೆಲ್ ವಾಸ್ತವ್ಯದ ದರಗಳು. ಇವು ನಿಜಕ್ಕೂ ದುಬಾರಿಯಾಗಿವೆ. ವಿದೇಶಗಳಿಗೆ ಹೋಲಿಸಿದಲ್ಲಿ ಇಲ್ಲಿನ ರೂಂ ರೆಂಟ್ ಬಹಳ ಜಾಸ್ತಿ ಇದೆ. ಇದು ಪ್ರವಾಸಿಗರನ್ನು ತಡೆಯುತ್ತಿದೆ. ಕಡಿಮೆ ದರದಲ್ಲಿ ರೂಮುಗಳು ಸಿಗುವಂತಿರಬೇಕು. ಹೀಗೇಕೆ ಎಂದು ಕೇಳಿದರೆ ಹೋಟೆಲಿನವರು ತೆರಿಗೆಗಳು ವಿಪರೀತವಾಗಿವೆ ಎನ್ನುತ್ತಾರೆ. ಅದಕ್ಕಾಗಿ ಹಣಕಾಸು ಸಚಿವಾಲಯದ ಜತೆ ಕುಳಿತು ಚರ್ಚಿಸಬೇಕು.
ಇದೆಲ್ಲ ವಿದೇಶಿ ಪ್ರವಾಸಿಗರ ಪಡಿಪಾಟಲು ಆಗಿದ್ದರೆ... ಸ್ವದೇಶೀ ಪ್ರವಾಸಿಗರ ಪಾಡು ಇನ್ನೂ ಭೀಕರವಾಗಿದೆ. ಸ್ವದೇಶದಲ್ಲೇ ಪ್ರವಾಸ ಕೈಗೊಳ್ಳುವುದಕ್ಕಿಂತ ಯಾವುದಾದರೂ ವಿದೇಶಕ್ಕೆ ಹೋಗಿಬರುವುದು ವಾಸಿ. ಅದೇ cheap n best ಅನ್ನುತ್ತಾರೆ ನಮ್ಮ ಭಾರತೀಯ ಪ್ರವಾಸಿಗರು. ಇದು ವಾಸ್ತವಕ್ಕೆ ಹಿಡಿದ ಕನ್ನಡಿಯೂ ಆಗಿದೆ.
ಪ್ರವಾಸೋದ್ಯಮವು GDPಗೆ ಗಣನೀಯ ಕೊಡುಗೆ ಸಲ್ಲಿಸುವಂತಹ ಉದ್ದಿಮೆಯಾಗಬೇಕು. ಉದ್ಯೋಗಾವಕಾಶಕ್ಕೆ ಇದು ಪ್ರಶಸ್ತವಾಗಿರಬೇಕು. ಆದರೆ ಇಲ್ಲಿನ ಪರಿಸ್ಥಿತಿ ಇದಕ್ಕೆ ವಿರುದ್ಧವಾಗಿದೆ. ಆದರೂ ನಮ್ಮ ಪ್ರವಾಸಿಗರನ್ನು ಭೇಟಿ ಮಾಡಿ, ಅವರ ನಿರೀಕ್ಷಗಳೇನು ಎಂಬುದನ್ನು ಕೇಳಿ ತಿಳಿದುಕೊಳ್ಳುವೆ.
ಇನ್ನು ಭಯೋತ್ಪಾದನೆಯ ಕಾಟವೂ ಇದೆ. ಇದು ವಿಶ್ವವ್ಯಾಪಿ. ಈ ನಿಟ್ಟಿನಲ್ಲೂ ಕಾರ್ಯಪ್ರವೃತ್ತರಾಗಬೇಕಿದೆ ಎನ್ನುತ್ತಾರೆ ತೆಲುಗು ಮೇರುನಟ ಚಿರಂಜೀವಿ. ಸದ್ಯಕ್ಕೆ ನಟನೆಗೆ ಹಾಲಿಡೆ ಘೋಷಿಸಿರುವ ಚಿರು, ಪ್ರವಾಸೋದ್ಯಮದಲ್ಲಿ ಹಾಲಿಡೆ ಸ್ಟೇ ಅನುಭವಿಸಲು ಸಕಲಸಜ್ಜಾಗಿದ್ದಾರೆ. All the best Chiru!