ನಗರದಲ್ಲಿ ಪಟಾಕಿ ಮಾರಾಟ ನಿಷೇಧಿಸಿ ಹೈಕೋರ್ಟ್ ಆದೇಶ
ಅವೆನ್ಯೂ ರಸ್ತೆ, ಸುಲ್ತಾನ್ ಪೇಟೆ, ಮಾಮೂಲ್ ಪೇಟೆ, ಚಿಕ್ಕಪೇಟೆ ಮತ್ತು ಶಿವಾಜಿನಗರ ವ್ಯಾಪ್ತಿ ಪ್ರದೇಶಗಳಲ್ಲಿ ಪಟಾಕಿ ಮಾರಾಟ ಮಾಡುವುದನ್ನು ಹೈಕೋರ್ಟ್ ನಿರ್ಬಂಧಿಸಿದೆ.
ಈ ಪ್ರದೇಶದಲ್ಲಿ ಪಟಾಕಿ ಮಾರಾಟ ಮಾಡಲು ಅನುಮತಿ ಕೋರಿ ವರ್ತಕರು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿ ಈ ಆದೇಶ ನೀಡಿದೆ.
ಬೆಂಗಳೂರು ಮಹಾನಗರ ಪೋಲೀಸ್ ಆಯುಕ್ತರು ಮತ್ತು ಚೆನ್ನೈನಲ್ಲಿರುವ ದಕ್ಷಿಣ ವಲಯ ಸ್ಪೋಟಕ ನಿಯಂತ್ರಕ ಕಚೇರಿ ಪಟಾಕಿ ಮಾರುವ ಲೈಸೆನ್ಸ್ ರದ್ದು ಪಡಿಸಿದ್ದ ಹಿನ್ನಲೆಯಲ್ಲಿ ವರ್ತಕರು ಕೋರ್ಟ್ ಮೆಟ್ಟಲೇರಿದ್ದರು.
ಮೈದಾನದಲ್ಲಿ ಬೇಕಿದ್ದರೆ ಪಟಾಕಿ ಮಾರಾಟಕ್ಕೆ ಅನುಮತಿ ನೀಡುತ್ತೇವೆ ಆದರೆ ಜನನಿಬಿಡ ಪ್ರದೇಶದ ಅಂಗಡಿಗಳಲ್ಲಿ ಅನುಮತಿ ನೀಡಲಾಗದು ಎಂದು ಕೋರ್ಟ್ ಸಲಹೆ ನೀಡಿತು.
ನಗರದ ಈ ಐದು ಪ್ರದೇಶಗಳು ಕಿರಿದಾದ ರಸ್ತೆಗಳನ್ನು ಹೊಂದಿದೆ. ಪಟಾಕಿ ಸಂಗ್ರಹಿಸಿ ಒಂದು ವೇಳೆ ದುರಂತ ಸಂಭವಿಸಿದರೆ ಅಗ್ನಿಶಾಮಕ ದಳದ ವಾಹನಗಳಾಗಲಿ ಅಥವಾ ಅಂಬುಲೆನ್ಸ್ ಗಳಾಗಲಿ ಒಳಗೆ ಬರುವುದೇ ಕಷ್ಟ.
ಹೀಗಾಗಿ ಪೊಲೀಸರು ನೀಡಿದ NOCಗೆ ನಾವು ತಡೆಯಾಜ್ಞೆ ನೀಡುವುದಿಲ್ಲ ಎಂದು ಕೋರ್ಟ್ ಸ್ಪಷ್ಟ ಪಡಿಸಿದೆ.
ಪೋಲೀಸ್ ಆಯುಕ್ತರು ಯಾವುದೇ ಮಾಹಿತಿ ನೀಡದೆ ಪರವಾನಿಗೆ ರದ್ದು ಪಡಿಸುವ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡಿದ್ದಾರೆ. ರದ್ದು ಪಡಿಸುವ ಮುನ್ನ ತನಿಖೆ ಕೂಡ ನಡೆಸಿಲ್ಲ ಎಂದು ವರ್ತಕರು ದೂರಿದ್ದಾರೆ.