ದೀಪಾವಳಿಗೆ ರಂಗನತಿಟ್ಟುಗೆ ಹೋಗೋಕೆ ಮುಂಚೆ ಎಚ್ಚರಾ
ಮಂಡ್ಯ, ನ.6: ಮುಂದಿನ ವಾರ ದೀಪಾವಳಿ. ರಜೆಯ ಹೂಕುಂಡ ನಿಮ್ಮ ಮನದಾಳದಲ್ಲಿ ಆದಾಗಲೇ ಬೆಳಕು ಚೆಲ್ಲಿದೆ. ಹಾಗಂತ ಎಲ್ಲದಾರೂ ಹೋಗೋಕೆ ಪ್ಲಾನ್ ಹಾಕಿಕೊಂಡಿದ್ದರೆ ಹೋಗೋಕ್ಮುಂಚೆ ತುಸು ಎಚ್ಚರ ವಹಿಸಿ.
ಇಲ್ಲೇ ಮೈಸೂರಿನಿಂದ ಅರ್ಧ ಗಂಟೆ ದಾರಿ ಸವೆದರೆ ರಂಗನತಿಟ್ಟು ಸಿಗುತ್ತೆ. ಅಲ್ಲಿನ ಪಕ್ಷಿಧಾಮದಲ್ಲಿ ವಿದೇಶಿ ಅತಿಥಿಗಳು ತಮ್ಮ ಬಿಂಕಬಿನ್ನಾಣ ತೋರುವ ಪ್ರಶಸ್ತ (ಪ್ರಸ್ತ ಕಾಲವೂ ಹೌದು) ಕಾಲವಿದು. ನವೆಂಬರಿನಿಂದ ಏಪ್ರಿಲ್ ವರೆಗೂ ರಂಗನತಿಟ್ಟು ಪಕ್ಷಿಧಾಮದಲ್ಲಿ ಇವುಗಳದ್ದೇ ಕಲರವ/ಕಾರುಬಾರು. ಹಾಗಾಗಿ ಒಮ್ಮೆ ನೋಡಿಕೊಂಡು ಬರೋಣ ಎಂದು ಹೊರಡುವ ಮುಂಚೆ...
ಹಕ್ಕಿ ಜ್ವರ ಗೊತ್ತಲ್ಲ? ಅದು ಚಳಿಗಾಲದಲ್ಲಿ ಬೆಂಗಳೂರಿನಲ್ಲಿ ಬೆಚ್ಚಗೆ ಮನೆ ಮಾಡಿ ಕೂತಿದೆ. Avian influenza H5N1 ಎಂಬ ಹಕ್ಕಿ ಜ್ವರ ರಾಜ್ಯ ಸರಕಾರ ಮತ್ತು ಪಶು ವೈದ್ಯರಿಗೆ ಬಿಸಿಮುಟ್ಟಿಸಿದೆ. ಮುಖ್ಯವಾಗಿ ಸಾವಿರಾರು ಮಂದಿ ಭೇಟಿ ನೀಡುವ ಪಕ್ಷಿಧಾಮಗಳ ಮೇಲೆ ಕಣ್ಣಿಟ್ಟಿರುವ ಸರಕಾರಿ ವೈದ್ಯರು ದುರ್ಬೀನು ಹಾಕಿಕೊಂಡು ದಿನನಿತ್ಯ ಅಲ್ಲಿನ ವಿದ್ಯಮಾನಗಳನ್ನು ಪರೀಕ್ಷಿಸುತ್ತಿದ್ದಾರೆ. ಪಕ್ಷಿ ಹಿಕ್ಕೆ ಹಾಕುವುದೇ ತಡ ಅದನ್ನು ಜೋಪಾನವಾಗಿ ಶೇಖರಿಸಿ ಭೋಪಾಲದಲ್ಲಿರುವ ಪ್ರಾಣಿ ರೋಗ ಪತ್ತೆ ಪ್ರಯೋಗಾಲಾಯಕ್ಕೆ ಕಳಿಸಿಕೊಡುತ್ತಿದ್ದಾರೆ.
ಇದು ಒಂದೆರಡು ದಿನಕ್ಕೆ ಮುಗಿದುಹೋಗುವ ಕೆಲಸವಲ್ಲ. ಇನ್ನು 5 ವರ್ಷ ಕಾಲ ಈ ಪಕ್ಷಿಗಳ ಮಲಮೂತ್ರವನ್ನು ಪರೀಕ್ಷಿಸುತ್ತಾ ಹೋಗುತ್ತೇವೆ. ಆ ಮೂಲಕ ಹಕ್ಕಿ ಜ್ವರ ಕಾಣಿಸಿಕೊಂಡ ತಕ್ಷಣ ನಿರ್ದಿಷ್ಟ ಮಾರ್ಗಸೂಚಿಗಳ ಪ್ರಕಾರ ಅದನ್ನು ಪತ್ತೆ ಹಚ್ಚಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ರಂಗನತಿಟ್ಟು ಪಕ್ಷಿಧಾಮದಲ್ಲಿ ಬೀಡುಬಿಟ್ಟಿರುವ ಪಶು ವೈದ್ಯ ತಂಡದ ಮುಖ್ಯಸ್ಥ ಡಾ. ಶಿವಶಂಕರ್.
ಮೊದಲು ಮೈಸೂರಿನಲ್ಲಿರುವ ಪ್ರಾದೇಶಿಕ ಪ್ರಾಣಿ ರೋಗ ಪತ್ತೆ ಪ್ರಯೋಗಾಲಾಯಕ್ಕೆ ಕಳಿಸಿಕೊಡುತ್ತೇವೆ. ಅಲ್ಲಿಂದ ಮುಂದೆ ಅದು ಭೋಪಾಲಕ್ಕೆ ತಲುಪತ್ತದೆ. ಗಮನಾರ್ಹವೆಂದರೆ ಈವರೆಗೂ ಹಕ್ಕಿ ಜ್ವರ ಕಾಣಿಸಿಕೊಂಡಿಲ್ಲ. ಆದರೆ ಕಟ್ಟೆಚ್ಚರದಲ್ಲಿದ್ದೇವೆ. ಒಂದೊಮ್ಮೆ ಹಕ್ಕಿ ಜ್ವರ ಇರುವುದು ಪ್ರಯೋಗಾಲಯದಿಂದ ದೃಢಪಟ್ಟರೆ ಸರಕಾರವೇ ಅದನ್ನು ಅಧಿಕೃತವಾಗಿ ಘೋಷಿಸುತ್ತದೆ ಎಂದು ಡಾ. ಶಿವಶಂಕರ್ ವಿವರ ನೀಡಿದ್ದಾರೆ.
'ರಂಗನತಿಟ್ಟು ಪಕ್ಷಿಧಾಮದಲ್ಲಾಗಲಿ ಅಥವಾ ಮಂಡ್ಯದ ಕೊಕ್ಕರೆ ಬೆಳ್ಳೂರು ಮತ್ತು ಗೆಂಡೆಹೊಸಹಳ್ಳಿ ಪಕ್ಷಿಧಾಮದಲ್ಲಿ Avian influenza H5N1 ಇದುವರೆಗೂ ಕಾಣಿಸಿಕೊಂಡಿಲ್ಲ. ಪ್ರವಾಸಿಗರೂ ಎಂದಿನಂತೆ ಸುಸೂತ್ರವಾಗಿ ಬಂದುಹೋಗುತ್ತಿದ್ದಾರೆ. ಇದು ಪಕ್ಷಿಗಳಿಗೆ ಹೇಳಿ ಮಾಡಿಸಿದ ಋತುವಾಗಿದೆ.ಹಾಗಾಗಿ ಅವುಗಳ ಸೊಬಗನ್ನು ಕಣ್ತುಂಬಿಸಿಕೊಳ್ಳಲು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲೇ ಬರುತ್ತಿದ್ದಾರೆ' ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲಕ್ಷ್ಮೇಶ ಅವರು ಹೇಳಿದ್ದಾರೆ.